ಜಿಲ್ಲಾಧಿಕಾರಿ ಚಾಲಕನ ಮೇಲೆ ಲಾರಿ ಹರಿಸಲು ಯತ್ನಿಸಿದ ಮರಳು ದಂಧೆಕೋರರು
ಕೋಲಾರ, ಫೆಬ್ರವರಿ 20: ಡಿ.ಕೆ.ರವಿ ಇಂದಾಗಿ ಬಹುತೇಕ ಸ್ಥಗಿತಗೊಂಡಿದ್ದ ಕೋಲಾರ ಜಿಲ್ಲೆಯ ಮರಳು ದಂಧೆ ಈಗ ಮತ್ತೆ ಚಿಗುರಿದೆ, ಯಾವ ಹಂತಕ್ಕೆಂದರೆ ತಡೆಯಲು ಬಂದ ಅಧಿಕಾರಗಳ ಮೇಲೆಯೇ ಗಾಡಿ ಹತ್ತಿಸುವಷ್ಟು.
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಕೊಲಾರ ಜಿಲ್ಲಾಧಿಕಾರಿ ಸತ್ಯವತಿ ಅವರ ಎದುರಗಡೆಯೇ ಅವರ ಚಾಲಕನ ಮೇಲೆ ಲಾರಿ ಹತ್ತಿಸಲು ದಂಧೆಕೋರರು ಪ್ರಯತ್ನಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿಭಾಗದಲ್ಲಿ ಅವ್ಯಾಹತವಾಗಿ ನಡೆಯತ್ತಿರುವ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಗಡಿಭಾಗದ ಗ್ರಾಮಸ್ಥರ ದೂರು ನೀಡಿದ ಮೇರೆಗೆ ಮರಳು ದಂಧೆ ಅಡ್ಡೆ ಮೇಲೆ ಕೋಲಾರ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ದಾಳಿ ನಡೆಸಿದರು.
ಈ ಸಮಯ ಅಕ್ರಮವಾಗಿ ಮರಳು ಹೊತ್ತೊಯ್ಯುತ್ತಿದ್ದ ಲಾರಿ ತಡೆಯಲು ಮುಂದಾದಾಗ ಸತ್ಯವತಿ ಅವರ ಚಾಲಕ ಮಾರುತಿ ಕುಮಾರ್ ಮೇಲೆ ಲಾರಿ ಹರಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಕಾರಿನಲ್ಲಿದ್ದ ಸತ್ಯವತಿ ಅವರು ಕಾರು ಇಳಿಯುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಘಟನೆ ನಂತರ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲು ಸ್ಥಳೀಯ ಅಧಿಕಾರಿಗಳ ತಂಡ ಕರೆದುಕೊಂಡು ಜಿಲ್ಲಾಧಿಕಾರಿ ಸತ್ಯವತಿ ಅವರು ಹೊರಟಿದ್ದಾರೆ. ಇದರ ಸುಳಿವು ಪಡೆದ ದಂಧೆಕೋರರು ಡಿಸಿ ಅವರ ಕಾರು ಬರದಿರಲೆಂದು ರಸ್ತೆಯಲ್ಲಿ ಜೆಸಿಬಿ ಮೂಲಕ ಹಳ್ಳಗಳನ್ನು ತೋಡಿದ್ದರು. ಕಾರು ಇಳಿದು ನಡೆದೆ ಸಾಗಿದ ಡಿಸಿ. ಡಿಸಿ ಅವರು ದಾಳಿ ಮಾಡುತ್ತಿದ್ದಂತೆ ಪರಾರಿಯಾದ ದಂಧೆಕೊರರು ಅಲ್ಲಿಂದ ಪರಾರಿಯಾಗಿದ್ದಾರೆ.
ರಾಶಿ ರಾಶಿ ಮರಳು ನೋಡಿ ಕೆಂಡಾಮಂಡಲವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, 'ನಿಮ್ಮ ಕೃಪಾ ಕಟಾಕ್ಷದಿಂದಲೇ ಈ ದಂಧೆಕೋರರು ಇಷ್ಟು ಕೊಬ್ಬಿದ್ದಾರೆ' ಎಂದು ಬೈದ ಸತ್ಯವತಿ ಅವರು ಒಂದು ಟಿಪ್ಪರು ಲಾರಿ ಮತ್ತು ಚಾಲಕನನ್ನು ಪೋಲೀಸರು ವಶಕ್ಕೆ ಒಪ್ಪಿಸಿದರು.