ಸಚಿವ ಎಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡದಂತೆ ಒತ್ತಾಯ
ಕೋಲಾರ, ಜನವರಿ 11: ಅಬಕಾರಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡದಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ, ದಲಿತ ಸಂಘಟನೆಗಳು ಸೋಮವಾರ ಸಂಜೆ ಕೋಲಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಂಜಿನೊಂದಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡ ನಾರಾಯಣಸ್ವಾಮಿ, ""ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಎಚ್.ನಾಗೇಶ್ ಬೆಂಬಲ ನೀಡುವಾಗ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವ ಭರವಸೆ ನೀಡಿದಂತೆ ಅಬಕಾರಿ ಸಚಿವ ಸ್ಥಾನವನ್ನು ನೀಡಲಾಗಿತ್ತು.''
"ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ; ನನ್ನ ಮಾತಿಗೆ ಬದ್ಧ''
""ಎಚ್.ನಾಗೇಶ್ ಸಚಿವರಾಗಿ ೧೪ ತಿಂಗಳು ಮಾತ್ರ ಕಳೆದಿದೆ. ಅವಧಿ ಮುಗಿಯುವ ಮುನ್ನವೇ ಅವರನ್ನು ಸಂಪುಟದಿಂದ ಕೈ ಬಿಡುವ ಕುರಿತು ಮಾತುಗಳು ಕೇಳಿ ಬರುತ್ತಿರುವುದು ಜಿಲ್ಲೆಯ ಜನತೆಯಲ್ಲಿ ನಿರಾಸೆ ಉಂಟಾಗಿದೆ'' ಎಂದು ನುಡಿದರು.
ಕೋಲಾರ ಜಿಲ್ಲೆಯ ಪರಿಶಿಷ್ಟ ಜಾತಿ ಸಮುದಾಯದ ಸಚಿವರಾಗಿ ನಾಗೇಶ್ ಹೊರಹೊಮ್ಮಿದ್ದು, ಇವರ ಪ್ರಾಮಾಣಿಕ ಪ್ರಯತ್ನ ಹಾಗೂ ಸೇವೆಯನ್ನು ತಡೆಯಲು ಕಾಣದ ಕೈಗಳು ಪಕ್ಷದ ವರಿಷ್ಠರಿಗೆ ತಪ್ಪು ಮಾಹಿತಿ ನೀಡಿ, ಪರಿಶಿಷ್ಟ ಜಾತಿಯ ಶಾಸಕರನ್ನು ಸಂಪುಟದಿಂದ ಪದಚ್ಯುತಗೊಳಿಸಿ, ಮೇಲ್ವರ್ಗದ ಶಾಸಕರಿಗೆ ಜಿಲ್ಲಾ ಉಸ್ತುವಾರಿ ವಹಿಸಿದರೆ ಪ್ರಗತಿಪರ ಸಂಘಟನೆಗಳಿಂದ ಹೋರಾಟ ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಸಿ ನಗರ ಠಾಣೆ ಪಿಎಸ್ಐ ಅಣ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು.
ಯುವಶಕ್ತಿ ಮುಖಂಡ ಸುಬ್ಬು, ದಲಿತ ಸಂಘಟನೆಗಳ ಮುಖಂಡರಾದ ರಾಮಕೃಷ್ಣ,ಮಂಜುನಾಥ್, ಮೋಹನ್ ಕಾಂತ್, ಮತ್ತಿಕುಂಟೆ ಕೃಷ್ಣ, ಕೇಶವ, ರವಿ, ನಾಗೇಶ್, ಜೈರಾಮ, ಅಂಜನ್, ವಿಜಿ, ಪ್ರೇಮ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.