ಅಂತ್ಯಸಂಸ್ಕಾರಕ್ಕೆ ಅಡ್ಡಿ; ಕೋಲಾರದಲ್ಲಿ ಪೊಲೀಸರ ಲಾಠಿ ಚಾರ್ಜ್
ಕೋಲಾರ, ಜುಲೈ 15: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಸಾಗಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯರು ಹಾಗೂ ಮೃತರ ಕಡೆಯವರ ನಡುವೆ ಜಗಳ ನಿಲ್ಲಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಗಂಗಮ್ಮನ ಪಾಳ್ಯ ಬಡಾವಣೆಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಬಂಗಾರಪೇಟೆಯ 49 ವರ್ಷದ ಕೊರೊನಾ ಸೋಂಕಿತ ಭಾನುವಾರ ಸಾವನ್ನಪ್ಪಿದ್ದರು. ನೆನ್ನೆ ಸಂಜೆ ಆಂಬ್ಯುಲೆನ್ಸ್ ನಲ್ಲಿ ಶವ ಸಾಗಿಸುವಾಗ ಸ್ಥಳೀಯರು ಶವವನ್ನು ಗಂಗಮ್ಮನ ಪಾಳ್ಯ ಬೀದಿ ಮಾರ್ಗವಾಗಿ ಸಾಗಿಸಬಾರದೆಂದು ವಿರೋಧ ವ್ಯಕ್ತಪಡಿಸಿದರು.
ಕೋಲಾರದಲ್ಲಿ 200ರ ಗಡಿ ದಾಟಿದ ಕೊರೊನಾ ಪ್ರಕರಣ
ಪ್ರತಿಭಟನೆ ಹಿನ್ನೆಲೆ ಬೇರೆ ಮಾರ್ಗವಾಗಿ ತೆರಳಿ ಶವಸಂಸ್ಕಾರ ಮಾಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ತೆರಳುವಾಗ ಅಡ್ಡಿಪಡಿಸಿದ್ದಕ್ಕೆ ಕೆರಳಿ ಮೃತರ ಕಡೆಯವರು ಪ್ರತಿಭಟನೆಗೆ ಮುಂದಾದರು. ಈ ಸಮಯ ಎರಡು ಕಡೆಯವರ ನಡುವೆ ಜಗಳ, ಪ್ರತಿಭಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.