ಉಲ್ಟಾ ಹೊಡೆದ ಯುವತಿ; ಪರಾರಿಯಾಗಿದ್ದ ಕೋಲಾರ ಸ್ವಾಮೀಜಿ ಈಗ ಜೈಲುಪಾಲು
ಕೋಲಾರ, ಮಾರ್ಚ್ 6: 20ರ ಯುವತಿ ಜೊತೆ ಪರಾರಿಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿಯ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸ್ವಾಮೀಜಿ ಜೊತೆ ಹೋಗಿದ್ದ ಯುವತಿ ಪೋಷಕರೊಂದಿಗೆ ಮನೆಗೆ ಹಿಂದಿರುಗಿದ್ದು, ಸ್ವಾಮೀಜಿ ಜೈಲು ಪಾಲಾಗಿದ್ದಾರೆ.
ಫೆ.27ರಂದು ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ, ಮಠದಿಂದ ಯುವತಿಯೊಂದಿಗೆ ಪರಾರಿಯಾಗಿದ್ದರು. ನಂತರ ಇಬ್ಬರೂ ಮದುವೆಯಾಗಿರುವುದಾಗಿ ಯುವತಿ ಮನೆಯವರಿಗೆ ಸ್ವತಃ ಸ್ವಾಮೀಜಿಯೇ ಮಾಹಿತಿ ನೀಡಿದ್ದರು. ಮೊನ್ನೆಯಷ್ಟೇ ಯುವತಿಯೊಂದಿಗೆ ಪೊಲೀಸರಿಗೆ ಗೋಕರ್ಣದ ಬಳಿ ಸಿಕ್ಕಿಬಿದ್ದಿದ್ದರು. ನಂತರ ಸ್ವಾಮೀಜಿಯ ಟಿಕ್ ಟಾಕ್ ವಿಡಿಯೋ ಕೂಡ ಸಾಕಷ್ಟು ಸುದ್ದಿ ಮಾಡಿದ್ದವು. ಇದೀಗ ರಾತ್ರೋ ರಾತ್ರಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಜೊತೆ ಪರಾರಿಯಾಗಿದ್ದ ಕೋಲಾರ ಸ್ವಾಮೀಜಿಯ ಹೊಸ ಗೆಟಪ್
ಸ್ವಾಮೀಜಿ ಮೇಲೆ 420 ಪ್ರಕರಣ
ನಿನ್ನೆ ರಾತ್ರಿ ಗೌಪ್ಯ ಸ್ಥಳದಿಂದ ಸ್ವಾಮೀಜಿಯನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಸ್ವಾಮೀಜಿ ಬಂಧನವಾಗುತ್ತಿದ್ದಂತೆ ಯುವತಿ ಮನಸ್ಸು ಬದಲಿಸಿ ಪೋಷಕರೊಂದಿಗೆ ಮನೆಗೆ ಹಿಂದಿರುಗಿದ್ದಾಳೆ. ಜೊತೆಗೆ ಸ್ವಾಮೀಜಿ ಒತ್ತಾಯದಿಂದ ತನ್ನನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾಳೆ. ಸ್ವಾಮೀಜಿ ಸದ್ಯಕ್ಕೆ ಕೋಲಾರದ ಉಪ ಕಾರಾಗೃಹದಲ್ಲಿದ್ದಾರೆ. ಯುವತಿಗೆ ನಂಬಿಸಿ ವಂಚನೆ ಮಾಡಿದ್ದರಿಂದ 420 ಪ್ರಕರಣ ದಾಖಲಾಗಿದೆ.
ಒಂಬತ್ತು ಜನರಿಂದ ವಂಚನೆ ಪ್ರಕರಣ
ಸ್ವಾಮೀಜಿಗೆ ಹಣ ಕೊಟ್ಟು ವಂಚನೆಗೊಳಗಾದ ಒಂಬತ್ತು ಜನರಿಂದ ದೂರು ದಾಖಲಾಗಿದೆ. ಜೊತೆಗೆ ಸ್ವಾಮೀಜಿಯೊಂದಿಗೆ ಪರಾರಿಯಾಗಿದ್ದ ಯುವತಿ ಮನೆಯವರೂ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಸ್ವಾಮೀಜಿಯನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳಿಸಲಾಗಿದೆ.
20ರ ಯುವತಿಯೊಂದಿಗೆ ಕಾಣೆಯಾಗಿದ್ದ ಸ್ವಾಮೀಜಿ ಮಂಗಳೂರಿನಲ್ಲಿ ಪತ್ತೆ
ಟಿಕ್ ಟಾಕ್ ನಲ್ಲಿ ಸದ್ದು ಮಾಡಿದ್ದ ಸ್ವಾಮೀಜಿ
ದತ್ತಾತ್ರೇಯ ಸ್ವಾಮಿ, ಮದುವೆಯಾಗುತ್ತಿದ್ದಂತೆ ಸಂಪೂರ್ಣ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಖಾವಿ ಬಿಟ್ಟು ಪ್ಯಾಂಟ್ ಶರ್ಟ್ ತೊಟ್ಟು ಫುಲ್ ಶೇವ್ ಮಾಡಿಕೊಂಡು ಸಂಪೂರ್ಣ ವೇಷ ಬದಲಿಸಿಕೊಂಡಿದ್ದರು. ನಂತರ ಹಲವು ವಿಡಿಯೋಗಳನ್ನು ಮಾಡಿ ಟಿಕ್ ಟಾಕ್ ನಲ್ಲಿ ಹರಿದುಬಿಟ್ಟಿದ್ದರು. ಅದು ವೈರಲ್ ಆಗಿತ್ತು. ಸ್ವಾಮೀಜಿ ಕುರಿತು ಎಲ್ಲೆಲ್ಲೂ ಸುದ್ದಿಯಾಗಿತ್ತು.
ಯುವತಿ ಮನೆಯವರಿಗೆ ಸ್ವಾಮೀಜಿ ಬೆದರಿಕೆ
ಯುವತಿಯನ್ನು ಮದುವೆಯಾದ ನಂತರ ಯುವತಿ ಮನೆಯವರಿಗೆ ಕರೆ ಮಾಡಿದ್ದ ಸ್ವಾಮೀಜಿ, ಬೆದರಿಕೆಯನ್ನೂ ಹಾಕಿದ್ದರು. "ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ನನ್ನ ಬಳಿ ಸಾಕಷ್ಟು ಆಸ್ತಿಯಿದೆ. ನನ್ನನ್ನು ನೀವೆಲ್ಲಾ ಏನೂ ಮಾಡಲು ಸಾಧ್ಯವಿಲ್ಲ, ನನ್ನ ವಿರುದ್ಧ ನಿಂತರೆ ಸುಮ್ಮನೆ ಇರುವುದಿಲ್ಲ. ನನ್ನ ವಿರುದ್ಧ ಏಕೆ ದೂರು ನೀಡಿದಿರಿ ಎಂದು ಬೆದರಿಕೆ ಒಡ್ಡಿದ್ದರು.