ಪ್ರಧಾನಿ ಮೋದಿ ಜನ್ಮದಿನ ಹಿನ್ನೆಲೆ ಮಾಲೂರಿನಲ್ಲಿ 17 ದಿನಗಳ ಕಾಲ ರಕ್ತದಾನ ಶಿಬಿರ
ಬೆಂಗಳೂರು, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿವಯವರ ಜನ್ಮದಿನದ ಅಂಗವಾಗಿ ಕೋಲಾರ ಜಿಲ್ಲೆ ಮಾಲೂರಿನಲ್ಲಿ ಬಿಜೆಪಿ ಮುಖಂಡರು ಹಾಗೂ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಹೊಸದೊಂದು ದಾಖಲೆಯನ್ನು ಬರೆಯಲಾಗಿದೆ. ರಾಜ್ಯದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಅತಿ ಹೆಚ್ಚು 1039 ಯುನಿಟ್ ರಕ್ತವನ್ನು ಸಂಗ್ರಹಿಸಿದ ಹೆಗ್ಗಳಿಕೆ ಈ ಕಾರ್ಯಕ್ರಮದ್ದಾಗಿದೆ.
ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತ ನಿಧಿಯ ಮೂಲಕ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಒಂದು ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಿ ದೇಶದಲ್ಲಿನ ರಕ್ತಹೀನ ರೋಗಿಗಳ ಪಾಲಿನ ಸಂಜೀವಿನಿ ಆಗುವ ನಿಟ್ಟಿನಲ್ಲಿ ತಾಲ್ಲೂಕು ಬಿಜೆಪಿ ಹಾಗೂ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ನಿಗದಿಪಡಿಸಿದ್ದ ಗುರಿಯನ್ನು ಸಾಧಿಸಿದ್ದೇವೆ. 17 ದಿನಗಳ ಕಾಲ ಸತತ ಸೇವಾ ಕಾರ್ಯಗಳ ಆಯೋಜನೆ ಮಾಡಲಾಗಿದೆ ಎಂದು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹೂಡಿ ವಿಜಯಕುಮಾರ್ ತಿಳಿಸಿದರು.
ಮಾಲೂರು ತಾಲ್ಲೂಕಿನ ಎಲ್ಲಾ ಭಾಗಗಳಿಂದ ಆಗಮಿಸಿದ್ದ ಯುವ ಸಮೂಹ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ ಕಾರಣ ನಿಗದಿತ ಗುರಿಯನ್ನು ಸಾಧಿಸಿದ್ದೇವೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ 18 ಗಂಟೆಗಳ ಕಾಲ ದೇಶ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ದೇಶಧ ಯುವ ಸಮೂಹ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸ ಮಾಡಿದ್ದಾರೆ ಎಂದು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹೂಡಿ ವಿಜಯಕುಮಾರ್ ಹೇಳಿದರು.
Recommended Video
ನಿನ್ನೆ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಉಚಿತವಾಗಿ ಹೆಲ್ಮೆಟ್ ವಿತರಣೆ ಹೀಗೆ ಹತ್ತು ಹಲವು ಸಮಾಜ ಸೇವೆಯ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು. ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಯುವಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.