ಕೋಲಾರದಲ್ಲಿ ಹೃದಯಾಘಾತದಿಂದ ಸತ್ತಿದ್ದರೂ ಅಂತ್ಯಸಂಸ್ಕಾರಕ್ಕೆ ಅಡ್ಡಿ
ಕೋಲಾರ, ಮೇ 18: ಕೊರೊನಾ ಭಯದಿಂದಾಗಿ ಶವವನ್ನು ಮಣ್ಣು ಮಾಡಲು ಅವಕಾಶ ಕೊಡದೇ ಅಲೆದಾಡಿಸಿದ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.
Recommended Video
ಈಚೆಗೆ ಮಂಗಳೂರಿನಲ್ಲಿ, ಕೊರೊನಾದಿಂದಾಗಿ ಮೃತಪಟ್ಟ ಮಹಿಳೆಯೊಬ್ಬರ ಶವವನ್ನು ಅಂತ್ಯಸಂಸ್ಕಾರ ನಡೆಸಲು ಬಿಡದೇ ಗ್ರಾಮಸ್ಥರು ಗಲಾಟೆ ಮಾಡಿದ ಪ್ರಸಂಗ ನಡೆದಿತ್ತು. ಆದರೆ ಕೊರೊನಾದಿಂದಾಗಿ ಮೃತಪಟ್ಟಿಲ್ಲವಾದರೂ, ಕೊರೊನಾ ಭಯದಿಂದಾಗಿ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸುವ ಸಂಗತಿಗಳೂ ನಡೆಯುತ್ತಿವೆ.
ಕೊರೊನಾದಿಂದ ಮರಣ: ಅಂತ್ಯಕ್ರಿಯೆ ಮಾಡಲು ಮುಂದೆ ಬಾರದ ಕುಟುಂಬದವರು
ಕೋಲಾರದಲ್ಲೂ ಇಂದು ಅಂಥದ್ದೇ ಘಟನೆ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟಿದ್ದ ಮಹಿಳೆಯ ಶವವನ್ನು ಅಂತ್ಯಸಂಸ್ಕಾರ ನಡೆಸಲು ಬಿಡದೇ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಬೆಂಗಳೂರು ನಿವಾಸಿ ಅರುಣ (43) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೀಗಾಗಿ ಮೊದಲು ಗಂಡನ ಮನೆಯಾದ ಕೋಲಾರದ ಅಡಕೆರೆ ಗ್ರಾಮಕ್ಕೆ ಶವವನ್ನು ತೆಗೆದುಕೊಂಡು ಬಂದಿದ್ದಾರೆ. ಆದರೆ ಕೊರೊನಾದಿಂದ ಮೃತಪಟ್ಟಿದ್ದಾರೆಂದು ಶಂಕಿಸಿ ಗ್ರಾಮಸ್ಥರು ಮಣ್ಣು ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ.
ವಿರೋಧದ ನಂತರ ಅರುಣ ಅವರ ತವರು ಮನೆ ಚೊಕ್ಕರೆಡ್ಡಿಪಲ್ಲಿ ಗ್ರಾಮಕ್ಕೆ ತಂದಿದ್ದಾರೆ. ಆದರೆ ಅಲ್ಲೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮರಣ ಪತ್ರ ತೋರಿಸಿದರೂ ವಿರೋಧಿಸುವುದನ್ನು ಬಿಡಲಿಲ್ಲ. ಈ ಎರಡೂ ಗ್ರಾಮಗಳಲ್ಲಿ ಆಂಬುಲೆನ್ಸ್ ನಿಲ್ಲಿಸಲೂ ಅವಕಾಶ ಕೊಡಲಿಲ್ಲ. ಕೊನೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಬಂದು ಪರಿಸ್ಥಿತಿ ತಿಳಿಗೊಳಿಸಿ ಮಣ್ಣು ಮಾಡಲು ಅವಕಾಶ ಕಲ್ಪಿಸಿದರು.
ಹೂಗಳಿಲ್ಲದೆ, ಬಂಧುಗಳಿಲ್ಲದೆ ಅಪ್ಪನ ಅಂತ್ಯಸಂಸ್ಕಾರ ಮಾಡಿದ ಮಗ
ಸದ್ಯಕ್ಕೆ ಅರುಣ ಅವರ ಮೃತದೇಹವನ್ನು ಚೊಕ್ಕರೆಡ್ಡಿಪಲ್ಲಿ ಗ್ರಾಮದ ತೋಟದಲ್ಲಿ ಮಣ್ಣು ಮಾಡಲಾಗಿದೆ. ಆದರೆ ಅಂತ್ಯಸಂಸ್ಕಾರಕ್ಕೂ ಅಡ್ಡಿಪಡಿಸಿದ ಘಟನೆ ಮಾತ್ರ ಅಮಾನವೀಯವೆನಿಸಿತ್ತು.