ಕೋಲಾರಕ್ಕಿಲ್ಲ ರೈಲ್ವೆ ಕೋಚ್ ಫ್ಯಾಕ್ಟರಿ; ಸುರೇಶ್ ಅಂಗಡಿ ಹೇಳಿದ್ದೇನು?
ಕೋಲಾರ, ಫೆಬ್ರವರಿ 09 : "ರೈಲ್ವೆ ಬೋಗಿಗಳಿಗೆ ದೇಶದಲ್ಲಿ ಬೇಡಿಕೆ ಇಲ್ಲ. ಆದ್ದರಿಂದ, ಕೋಲಾರದಲ್ಲಿನ ಬೋಗಿ ತಯಾರಿಕಾ ಕಾರ್ಖಾನೆಯನ್ನು ರೈಲು ದುರಸ್ತಿ ಕಾರ್ಯಾಗಾರವಾಗಿ ಬದಲಾವಣೆ ಮಾಡಲಾಗುತ್ತದೆ" ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ 2020ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಯನ್ನು ಬಜೆಟ್ನಲ್ಲಿ ಬದಲಾವಣೆ ಮಾಡಲಾಗಿದೆ.
ಕರ್ನಾಟಕದ 3 ಸಾವಿರ ಉದ್ಯೋಗಕ್ಕೆ ಕತ್ತರಿ ಹಾಕಿದ ಕೇಂದ್ರ
ಬೆಳಗಾವಿಯ ಬಿಜೆಪಿ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ರೈಲು ದುರಸ್ತಿ ಕಾರ್ಯಾಗಾರ ಆರಂಭಿಸುವುದರಿಂದ ಬೋಗಿಗಳ ದುರಸ್ತಿಗೆ ಅನುಕೂಲವಾಗುತ್ತದೆ" ಎಂದು ಹೇಳಿದ್ದಾರೆ.
ಕ್ಯಾಂಟೀನ್ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ
ರೈಲ್ವೆ ಕೋಚ್ ಫ್ಯಾಕ್ಟರಿ ಆರಂಭವಾದರೆ 5000 ಉದ್ಯೋಗ ಸೃಷ್ಟಿಯಾಗುತ್ತಿತ್ತು. ರೈಲ್ವೆ ದುರಸ್ತಿ ಕಾರ್ಯಾಗಾರದಿಂದಾಗಿ ಕೇವಲ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಇದರಿಂದಾಗಿ ರಾಜ್ಯದ 3 ಸಾವಿರ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ ಎಂಬುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು ಹೊಸ ಸೌಲಭ್ಯ
ಯಾವುದೇ ಸಮಸ್ಯೆ ಇಲ್ಲ
"ಕೋಲಾರದಲ್ಲಿ ಬೋಗಿ ಕಾರ್ಖಾನೆ ಆರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ರೈಲು ಬೋಗಿಗಳ ತಯಾರಿಕೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಇದೆ. ಹೀಗಿರುವಾಗ ಮತ್ತೊಂದು ಕಾರ್ಖಾನೆ ಆರಂಭಿಸುವ ಅಗತ್ಯವಿಲ್ಲ" ಎಂದು ಸುರೇಶ್ ಅಂಗಡಿ ಹೇಳಿದ್ದಾರೆ.
ರೈಲು ದುರಸ್ತಿ ಕಾರ್ಯಾಗಾರ
"ರೈಲು ಬೋಗಿಗಳಿಗೆ ದೇಶದಲ್ಲಿ ಬೇಡಿಕೆ ಇಲ್ಲ. ವಿದೇಶಗಳಿಂದ ಬೋಗಿಗಳಿಗೆ ಬೇಡಿಕೆ ಬಂದರೆ ನಂತರದ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೋಗಿ ತಯಾರಿಕಾ ಕಾರ್ಖನೆ ಬದಲು ರೈಲು ದುರಸ್ತಿ ಕಾರ್ಯಾಗಾರ ಸ್ಥಾಪಿಸಲು ನಿರ್ಧರಿಸಲಾಗಿದೆ" ಎಂದು ಸುರೇಶ್ ಅಂಗಡಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಮಲ್ಲಿಕಾರ್ಜುನ ಖರ್ಗೆ ಸುರೇಶ್ ಅಂಗಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, "ರೈಲ್ವೆ ಸಚಿವನಾಗಿದ್ದಾಗ ಕೋಲಾರಕ್ಕೆ ಬೋಗಿ ತಯಾರಿಕಾ ಕಾರ್ಖಾನೆ ತಂದಿದ್ದು ನಾನು. ಈಗ ಅದನ್ನು ಬದಲಿಸುತ್ತಿರುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧವಿದೆ. ನಾನು ರಾಜ್ಯಕ್ಕೆ ಹೆಚ್ಚು ಅನುದಾನ ತಂದು ಕೊಟ್ಟಿದ್ದೇನೆ. ಆದರೆ, ಯುಪಿಎ ಸರ್ಕಾರ ಮಾಡಿರುವ ಯೋಜನೆಯನ್ನು ತಡೆಯುವುದಕ್ಕೆ ಹೊರಟಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ನಲ್ಲಿ ಅನುದಾನ
ಕೋಲಾರಕ್ಕೆ ಮಂಜೂರಾಗಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಬದಲು ರೈಲ್ವೆ ವರ್ಕ್ ಶಾಪ್ ನಿರ್ಮಾಣ ಮಾಡಲು ಕೇಂದ್ರ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 495.3 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಿಂದಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಿದೆ.