ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರದಲ್ಲಿ ರಾಜಕೀಯವಿಲ್ಲ: ಸ್ಪೀಕರ್
ಶ್ರೀನಿವಾಸಪುರ, ಮಾರ್ಚ್ 18: ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 'ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಕಾನೂನು ಚೌಕಟ್ಟು ಮೀರಿ ನಾನು ವರ್ತಿಸುವುದಿಲ್ಲ' ಎಂದಿದ್ದಾರೆ.
ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಜಾಧವ್ ಅವರಿಗೆ ಪೂರ್ಣ ಪ್ರಮಾಣದ ಪ್ರಮಾಣ ಪತ್ರ ಸಲ್ಲಿಸಲು ಕೋರಿದೆ, ಅವರಿನ್ನೂ ಸಲ್ಲಿಸಿಲ್ಲ, ಅದನ್ನು ಸಲ್ಲಿಸಿದ ಕೂಡಲೆ ಅದನ್ನು ಪರಾಮರ್ಶಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಉಮೇಶ್ ಜಾಧವ್ ಅವರು ಮೂರು ಪ್ರಮಾಣಪತ್ರಗಳನ್ನು ಬೇರೆ ಬೇರೆ ಅವಧಿಯಲ್ಲಿ ಸಲ್ಲಿಸಿದ್ದಾರೆ. ಸರ್ಕಾರ ರಚನೆ ಆಗುವ ಸಮಯದಲ್ಲಿ ಒಂದು ಪ್ರಮಾಣ ಪತ್ರ, ನಂತರ ಸುಪ್ರಿಂಕೋರ್ಟ್ಗೆ ಇನ್ನೊಂದು ಪ್ರಮಾಣ ಪತ್ರ ಕೊಟ್ಟಿದ್ದಾರೆ, ಶಾಸಕಾಂಗ ಪಕ್ಷದ ನಾಯಕರು ಜಾಧವ್ ವಿರುದ್ಧ ನೀಡಿದ ದೂರಿಗೆ ಉತ್ತರ ನೀಡುತ್ತಾ ಮತ್ತೊಂದು ಪ್ರಮಾಣ ಪತ್ರ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮಾಣ ಪತ್ರ ಸಲ್ಲಿಸಿದ ನಂತರ ಕ್ರಮ
ಆದರೆ ಜಾಧವ್ ಅವರು ಈ ಹಿಂದೆ ನೀಡಿದ ಪ್ರಮಾಣ ಪತ್ರಗಳಿಗೂ ಅವರು ಈಗ ತಳೆದಿರುವ ನಿಲುವಿಗೆ ತಾಳೆ ಇರುವುದು ಕಾಣುತ್ತಿಲ್ಲ, ಹಾಗಾಗಿ ಒಂದು ಪೂರ್ಣ ಪತ್ರದ ಪ್ರಮಾಣ ಪತ್ರವನ್ನು ನೀಡುವಂತೆ ಕೋರಿದೆ, ಅದನ್ನು ಕೊಟ್ಟ ಕೂಡಲೇ ಅವರ ರಾಜೀನಾಮೆ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
'ನಾನು ನ್ಯಾಯಾಧೀಶನಂತೆ ಕಾರ್ಯ ಮಾಡುತ್ತೇನೆ'
ಜಾಧವ್ ಅವರ ರಾಜೀನಾಮೆ ಅಂಗೀಕಾರ ತಡವಾಗುತ್ತಿರುವ ಹಿಂದೆ ರಾಜಕೀಯ ತಂತ್ರಗಳೇನಾದರೂ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ನಾನು ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದ್ದೇನೆ, ಸಂವಿಧಾನ ಬದ್ಧವಾಗಿ, ಶಾಸಕಾಂಗದ ಗೌರವ ಉಳಿಸುವುದಷ್ಟೆ ನನ್ನ ಕೆಲಸ ಎಂದು ರಮೇಶ್ ಕುಮಾರ್ ಹೇಳಿದರು.
'ನಾನು ರಾಜಕೀಯ ಮಾಡುವುದಿಲ್ಲ'
ಕಾಂಗ್ರೆಸ್ ನಾಯಕರು ಈ ವಿಷಯವಾಗಿ ರಾಜಕೀಯ ಮಾಡುತ್ತಿರುವ ಅನುಮಾನವಿದ್ದರೆ ಆ ಬಗ್ಗೆ ಅವರನ್ನೇ ಕೇಳಬೇಕು, ನಾನು ಕಾನೂನು ಬದ್ಧವಾಗಿಯಷ್ಟೆ ಕಾರ್ಯನಿರ್ವಹಿಸುತ್ತೇನೆ, ಈ ವಿಷಯದಲ್ಲಿ ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ಬಿಜೆಪಿ ಸೇರಿರುವ ಉಮೇಶ್ ಜಾಧವ್
ಕಾಂಗ್ರೆಸ್ನಲ್ಲಿದ್ದ ಉಮೇಶ್ ಜಾಧವ್ ಅವರು ಮಾರ್ಚ್ 04 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು, ಆ ನಂತರ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅವರು ಕಲಬುರಗಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರ ರಾಜೀನಾಮೆ ಅಂಗೀಕಾರಗೊಳ್ಳದೆ ಅವರ ಮೇಲೆ ಕ್ರಮ ಜರುಗಿಸಿದಲ್ಲಿ ಅವರು ಚುನಾವಣೆಗೆ ನಿಲ್ಲಲು ಕಷ್ಟವಾಗಬಹುದು, ಅಥವಾ ಚುನಾವಣೆ ಗೆದ್ದರೂ ಸಹ ಅದು ಅಸಿಂಧು ಆಗುವ ಸಾಧ್ಯತೆಯೂ ಇದೆ.