ನನಗೆ ಯಾರೂ ರಾಜೀನಾಮೆ ಪತ್ರ ನೀಡಿಲ್ಲ: ಸ್ಪೀಕರ್ ರಮೇಶ್ ಕುಮಾರ್
Recommended Video
ಕೋಲಾರ, ಜುಲೈ 1: ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ರಾಜೀನಾಮೆ ಸುದ್ದಿ ಗೊಂದಲ ಹುಟ್ಟುಹಾಕಿದೆ.
ಆನಂದ್ ಸಿಂಗ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರ ಬೆಂಗಳೂರಿನ ನಿವಾಸಕ್ಕೆ ಖುದ್ದು ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರು ತಮಗೆ ಯಾರೂ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.
ಆನಂದ್ ಸಿಂಗ್ ದಿಢೀರ್ ರಾಜೀನಾಮೆ: ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ?
ತಮಗೆ ಯಾರೂ ರಾಜೀನಾಮೆ ಸಲ್ಲಿಸಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಪಕ್ಷದಲ್ಲಿನ ಬಂಡಾಯದ ವಿಚಾರವಾಗಿ ಕೂಡ ತಮಗೆ ಮಾಹಿತಿ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಪ್ರಸ್ತುತ ಕೋಲಾರದಲ್ಲಿ ಇರುವ ರಮೇಶ್ ಕುಮಾರ್, 'ರಾತ್ರಿಯಿಂದಲೂ ನಮ್ಮ ಮನೆಯಲ್ಲಿಯೇ ಇದ್ದೆ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನನ್ನ ಪಿಎಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರೆ ನನಗೆ ಅದರ ಮಾಹಿತಿ ಇಲ್ಲ ಎಂದರು.
20 ಶಾಸಕರೂ ಬೇಕಾದರೂ ರಾಜೀನಾಮೆ ಕೊಡಲಿ. ಕಾಂಗ್ರೆಸ್ನವರಾದರೂ ರಾಜೀನಾಮೆ ಕೊಡಲಿ, ಬಿಜೆಪಿಯವರಾದರೂ ಕೊಡಲಿ. ರಾಜೀನಾಮೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.
ಸುದ್ದಿ ಸತ್ಯವಲ್ಲ, ಸತ್ಯ ಸುದ್ದಿಯಾಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಉಳಿದಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ರಮೇಶ್ ಕುಮಾರ್ ಅವರ ಸ್ಪಷ್ಟನೆ ಈಗ ಗೊಂದಲ ಮೂಡಿಸಿದೆ. ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ಕುರಿತು ನೇರವಾಗಿ ಮಾಹಿತಿ ನೀಡಿಲ್ಲ. ಆದರೆ, ಅವರ ಆಪ್ತ ಮೂಲಗಳು ರಾಜೀನಾಮೆ ಕುರಿತು ಖಚಿತ ಮಾಹಿತಿ ನೀಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಇನ್ನೂ ಅನೇಕ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ಬಣದಲ್ಲಿ ಕಾಣಿಸಿಕೊಂಡಿದ್ದ ಅತೃಪ್ತ ಶಾಸಕರು ಕೂಡ ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ರಾಜೀನಾಮೆ ವದಂತಿಗೆ ಇನ್ನಷ್ಟು ಪುಷ್ಠಿ ಸಿಕ್ಕಿದೆ.
ಅನಂದ್ ಸಿಂಗ್ ಅವರ ರಾಜೀನಾಮೆ ನೀಡಿದ್ದರೂ ಅಗತ್ಯ ಸಂಖ್ಯಾಬಲ ಹೊಂದಿರುವ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಅವರಂತೆಯೇ ಇತರೆ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಸಂಚಕಾರ ಎದುರಾಗುವುದು ನಿಶ್ಚಿತ.