ಕೋಲಾರದ ಬಂಗಾರ ತಿರುಪತಿಯಲ್ಲಿ ಭರತ ಹುಣ್ಣಿಮೆಯ ಸಂಭ್ರಮ
ಕೋಲಾರ, ಫೆಬ್ರವರಿ 09: ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೋಲಾರದ ಬಂಗಾರ ತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭರತ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಯಿತು. ಇದನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬಂದಿತ್ತು.
ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಇಂದು ಬಂಗಾರ ತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೇತ್ರ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವಿಷ್ಣುವನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಈ ದಿನ ಹರಿಸೇವೆ ಮಾಡುವುದು ಇಲ್ಲಿನ ವಿಶೇಷ. ಹಾಗಾಗಿ ಕರ್ನಾಟಕದ ಬಂಗಾರ ತಿರುಪತಿ ಎಂದೇ ಖ್ಯಾತಿ ಪಡೆದಿರುವ ನೇತ್ರವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಕಳೆದ ರಾತ್ರಿಯಿಂದಲೇ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತಿವೆ. ಕೆಜಿಎಫ್ ಶಾಸಕಿ ರೂಪ ಶಶಿಧರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಲಕ್ಷಾಂತರ ಜನರು ಇಲ್ಲಿ ಬಂದ ಸಾವಿರಾರು ಜನ ಅನ್ನದಾನ ಮಾಡುವ ಮೂಲಕ ಹರಕೆ ತೀರಿಸಿದರು.
ಹಿರಿಯೂರಿನಲ್ಲಿ ನೆಲೆಕಂಡ ಪವಾಡಪುರುಷ ತೇರುಮಲ್ಲೇಶ್ವರನ ಬ್ರಹ್ಮರಥೋತ್ಸವ
ಬೃಗುಮಹರ್ಷಿಗಳು ತಪಸ್ಸು ಮಾಡಿದ ಸ್ಥಳ ಇದಾಗಿದ್ದು, ವೆಂಕಟೇಶ್ವರ ಸ್ವಾಮಿಯು ನೇತ್ರದಲ್ಲಿ ದರ್ಶನ ನೀಡಿದ್ದಾನೆಂಬ ಪ್ರತೀತಿ ಇಲ್ಲಿದೆ. ಇಲ್ಲಿ ಆರು ಕಿಂಡಿಗಳಲ್ಲಿ ಒಂದೇ ಕಣ್ಣಿನಿಂದ ಭಕ್ತರು ದರ್ಶನ ಮಾಡುತ್ತಾರೆ. ಭರತ ಹುಣ್ಣಿಮೆಯಂದು ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ ಒಳಿತಾಗುತ್ತದೆ ಅನ್ನುವ ನಂಬಿಕೆ ಭಕ್ತರದ್ದು. ಹಾಗಾಗಿ ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ದೇವರ ದರ್ಶನಕ್ಕೆ ಲಕ್ಷಾಂತರ ಜನ ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿತ್ತು.