ಅವನು ಅವಳಾಗಿ ಬದಲಾಗಿ ಸಾವಿನಲ್ಲಿ ಅಂತ್ಯ ಕಂಡ ಕಣ್ಣೀರ ಕಥೆ
ಕೋಲಾರ, ಆ.23: ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್ ಅಭಿನಯದ "ನಾನು ಅವನಲ್ಲ ಅವಳು' ಸಿನಿಮಾ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಗಂಡು ಹುಡುಗನೊಬ್ಬ ಹೆಣ್ಣಾಗಿ ಪರಿವರ್ತನೆಗೊಂಡು ಜೀವನ ನಡೆಸುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ಸಂಚಾರಿ ವಿಜಯ್ ನಟನೆಯ ನಾನು ಅವನಲ್ಲ ಅವಳು ಸಿನಿಮಾದ ನೈಜ ಘಟನೆಯೊಂದು ಕೋಲಾರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹುಡುಗನೊಬ್ಬ ಏಳು ವರ್ಷದ ಹಿಂದೆ ಮನೆ ತೊರೆದು ಹೋದ ಶಿವಕುಮಾರ್ ಮತ್ತೆ ವಂದನಾ ಆಗಿ ಪರಿವರ್ತನೆಯಾಗಿದ್ದಳು. ಆದರೆ ಆತ ಕುಟುಂಬವನ್ನು ಭೇಟಿ ಮಾಡಿದ್ದು ಸಾವಿನ ಮೂಲಕ. ಅವನು ಅವಳಾಗಿ ಪರಿವರ್ತನೆಗೊಂಡು ಸಾವಿಗೀಡಾದ ಯುವಕನ ಕಣ್ಣೀರ ಕಥೆ ಇಲ್ಲಿದೆ ನೋಡಿ.
ಕೋಲಾರದ ಗಾಂಧಿನಗರದ ಮನೆಯಲ್ಲಿ ಮಂಗಳ ಮುಖಿ ಜೀವನದಲ್ಲಿ ಜಿಗುಪ್ಸೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ಹೆಸರು ವಂದನಾ ಅಲಿಯಾಸ್ ಶಿವಕುಮಾರ್. ಮೂರು ದಿನದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾನಸಿಕ ಖಿನ್ನತೆಗೆ ಒಳಗಾಗಿ ಸಾವಿಗೀಡಾಗಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಏಳು ವರ್ಷದ ಹಿಂದೆ ಮನೆ ತೊರೆದು ಕಣ್ಮರೆಯಾಗಿದ್ದ ಶಿವಕುಮಾರ್ ಕಳೆದ ನಾಲ್ಕು ವರ್ಷದ ಹಿಂದೆ ಕೋಲಾರಿನ ಗಲ್ ಪೇಟೆಯ ರಾಮಚಂದ್ರಪ್ಪ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದಳು. ಎರಡು ಮೂರು ದಿನದಿಂದ ವಂದನಾ ಮನೆಯಿಂದ ಹೊರಗೆ ಬಂದಿರಲಿಲ್ಲ. ಕೆಲವು ಪುಂಡ ಯುವಕರು ಮನೆ ಸಮೀಪ ಬಂದು ಹೋಗುತ್ತಿದ್ದರು. ಅನುಮಾನಗೊಂಡು ರಾಮಚಂದ್ರಪ್ಪ ಬಾಗಿಲು ತೆಗೆದು ನೋಡಿದಾಗ ವಂದನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ವಂದನಾ ಮನೆಯ ಬಳಿ ಇದ್ದಾಗ ಕೆಲವು ಹುಡುಗರು ಬಂದು ಹೊಂಚು ಹಾಕುತ್ತಿದ್ದರಂತೆ. ಆಗ ಮನೆಯ ಮಾಲೀಕರು ಆ ಹುಡುಗರನ್ನು ಬೈದು ಕಳಿಸಿದ್ದರಂತೆ. ಅದಾದ ಮೇಲೆ ಮಂಕಾಗಿದ್ದ ವಂದನಾ ಯಾರ ಜೊತೆಗೂ ಮಾತನಾಡಿಲ್ಲ, ಮನೆಯಿಂದಲೂ ಹೊರಗೆ ಬಂದಿರಲಿಲ್ಲ. ಎರಡು ದಿನವಾದರೂ ಮನೆಯಿಂದ ಹೊರಗೆ ಬಾರದ ಹಿನ್ನೆಲೆ ಮನೆಗೆ ಹೋಗಿ ನೋಡಿದಾಗ ವಂದನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ ವಂದನಾ ತಾನು ಮನೆಯ ಬಾಡಿಗೆ ಪಡೆಯುವಾಗ ಮನೆಯ ಮಾಲೀಕರಿಗೆ ತಾನು ಮೃತಪಟ್ಟರೆ ನಮ್ಮ ಮನೆಯವರು ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿದ್ದು ವಿಷಯ ತಿಳಿಸುವಂತೆ ರಾಮಚಂದ್ರ ಅವರಿಗೆ ತಿಳಿಸಿದ್ದರಂತೆ!
ಹೀಗಾಗಿ ಮನೆ ಮಾಲೀಕ ರಾಮಚಂದ್ರಪ್ಪ ಗಲ್ ಪೇಟೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗಲ್ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ವಂದನಾ ಅವರ ತಂದೆ ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಶಿವಕುಮಾರ್ ವಂದನಾ ಆಗಿ ಪರಿವರ್ತನೆಗೊಂಡು ಮನೆ ತೊರೆದಿರುವ " ನಾನು ಅವನಲ್ಲ ಅವಳು" ಅಸಲಿ ಕಥೆ ಬೆಳಕಿಗೆ ಬಂದಿದೆ. ವಂದನಾ ಆಗಿ ಬದಲಾವಣೆಗೊಂಡು ಲೈಂಗಿಕ ಕಾರ್ಯಕರ್ತೆಯಾಗಿ ರೂಪಾಂತರಗೊಂಡಿದ್ದ ಶಿವಕುಮಾರ್ ಆತ್ಮಹತ್ಯೆಯ ಮೂಲಕ ದುರಂತ ಅಂತ್ಯ ಕಂಡಿದ್ದಾನೆ.
ಅವನು ಆ ಮನೆಯ ಹಿರಿಯ ಮಗ, ಸಹವಾಸ ದೋಷದಿಂದ ಏಳು ವರ್ಷದ ಹಿಂದೆ ತನ್ನ ಹುಟ್ಟಿದ ಮನೆಯನ್ನು ಬಿಟ್ಟಿದ್ದ. ಈಗ ಮಂಗಳಮುಖಿಯಾಗಿ ಶವವಾಗಿ ಸಿಕ್ಕಿದ್ದಾಳೆ. ಮಂಗಳ ಮುಖಿಯರ ಸಂಪರ್ಕ ಸಿಕ್ಕ ಮೇಲೆ ಮನೆಯಲ್ಲಿ ಇರುತ್ತಿರಲಿಲ್ಲ. ಅವನ ಜೀವನ ಶೈಲಿಯೇ ಬದಲಾವಣೆ ಮಾಡಿಕೊಂಡಿದ್ದ. ಹೆಣ್ಣಾಗಿ ವರ್ತನೆ ತೋರುತ್ತಿದ್ದ. ನಾವು ತಮಾಷೆ ಮಾಡುತ್ತಾನೆ ಎಂದೇ ಭಾವಿಸದ್ದೆವು. ಸಹವಾಸ ದೋಷದಿಂದ ಏಳು ವರ್ಷದ ಹಿಂದೆ ನಮ್ಮನ್ನು ಬಿಟ್ಟು ಹೋದವನು ಎಲ್ಲಿ ಇದ್ದಾನೆ ಎಂಬ ಮಾಹಿತಿಯೂ ಸಿಕ್ಕಿರಲಿಲ್ಲ. ಆನಂತರ ನಿಮ್ಮ ಮಗ ಹೆಣ್ಣಾಗಿ ಪರಿವರ್ತನೆಗೊಂಡಿದ್ದಾನೆ. ಕೋಲಾರದಲ್ಲಿಯೇ ಇದ್ದಾನೆ ಎಂಬ ವಿಚಾರವನ್ನು ಕೆಲವರು ತಿಳಿಸಿದರು. ಆದನ್ನು ನಂಬಲಿಕ್ಕೆ ಆಗಲಿಲ್ಲ. ನಂಬಿ ಹೋಗಿ ನೋಡೋಕು ಮನಸು ಬರಲಿಲ್ಲ. ಸಮಾಜದ ಮುಂದೆ ಅವಮಾನ ಎದುರಿಸುವ ಶಕ್ತಿ ನನಗೆ ಇರಲಿಲ್ಲ ಎಂದು ವಂದನಾ ಅವರ ತಂದೆ ನೋವು ತೋಡಿಕೊಂಡಿದ್ದಾರೆ.
ಅವನು ಅವಳಾದ ಕತೆ: ವಂದನಾಳ ಮೊದಲ ಹೆಸರು ಶಿವಕುಮಾರ್. ಕೀಲುಕೋಟೆ ಬಡಾವಣೆಯ ನಾರಾಯಣಸ್ವಾಮಿ ಎಂಬುವವರ ಹಿರಿಯ ಮಗ ಶಿವಕುಮಾರ್ 18 ವರ್ಷ ಆಗುವವರೆಗೂ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದ. ಮಂಗಳ ಮುಖಿಯರ ಜೊತೆಗೆ ಸೇರಿ ಮನೆಗೆ ಬರುವುದನ್ನೇ ಬಿಟ್ಟಿದ್ದನಂತೆ. ಆದರೆ, ಅವರ ತಂದೆ 2-3 ಬಾರಿ ಆತನನ್ನು ಹುಡುಕಿಕೊಂಡು ಮನೆಗೆ ಕರೆತಂದಿದ್ದರಾದರೂ ಅವನು ಮನೆಯಲ್ಲಿ ಇರುತ್ತಿರಲಿಲ್ಲ. ಏಳು ವರ್ಷಗಳ ಹಿಂದೆ ಒಮ್ಮೆ ಮನೆಗೆ ಬಂದು ಮನೆಯಲ್ಲಿದ್ದ ಆಧಾರ್ ಕಾರ್ಡ್ ತೆಗೆದುಕೊಂಡು ಹೋದ ಶಿವಕುಮಾರ್ ಮತ್ತೆ ಎಲ್ಲಿ ಹೋದ ಅನ್ನೋದು ತಿಳಿದು ಬಂದಿರಲಿಲ್ಲ.
Recommended Video
ಶಿವಕುಮಾರ್ ಎಂಬಾತ ವಂದನಾ ಆಗಿ ಬದಲಾಗಿದ್ದಾನೆ ಅನ್ನೋದು ವಂದನಾ ಮೃತ ದೇಹ ನೋಡಿದ ಮೇಲೆ ಗೊತ್ತಾಗಿದೆ. ಸದ್ಯ ಮನೆಯ ಹಿರಿಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮನೆಯ ಹಿರಿಮಗನಾಗಿ ಇರಬೇಕಾಗಿದ್ದವನು ಇಂದು ಮಂಗಳಮುಖಿಯಾಗಿ ಅಲೆಮಾರಿ ಜೀವನ ಸಾಗಿಸಿ ಶಿವಕುಮಾರ್ ದುರಂತ ಅಂತ್ಯ ಕಂಡಿದ್ದಾನೆ. ನಟ ಸಂಚಾರಿ ವಿಜಯ್ "ನಾನು ಅವನಲ್ಲ, ಅವಳು" ಸಿನಿಮಾ ಕೂಡ ಒಬ್ಬ ಹುಡುಗ ಹುಡುಗಿಯಾಗಿ ಪರಿವರ್ತನೆಗೊಂಡು ಸಮಾಜದಲ್ಲಿ ಯಾವ ರೀತಿಯ ಜೀವನ ನಡೆಸುತ್ತಾನೆ ಎಂಬ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿತ್ತು. ಆದರೆ ಶಿವಕುಮಾರ್ ನಿಜ ಜೀವನ ಇದೇ ರೀತಿ ಸಾಗಿ ಅಂತ್ಯವಾಗಿದ್ದಾನೆ.