ಕೊರೊನಾ ಭಯ; ನೂರು ದಿನ ರಜೆ ಕೊಡಿ ಎಂದ ನಂಗಲಿ ಪೇದೆ ಪತ್ರ ವೈರಲ್
ಕೋಲಾರ, ಮಾರ್ಚ್ 14: ಕೊರೊನಾ ಭೀತಿ ಹಿನ್ನೆಲೆಯಲ್ಲಿಪೇದೆಯೊಬ್ಬರು ನೂರು ದಿನ ರಜೆ ಕೇಳಿ ಪತ್ರ ಬರೆದಿದ್ದು, ಈ ಪತ್ರ ಇದೀಗ ವೈರಲ್ ಆಗಿದೆ.
ವಿಶ್ವದಾದ್ಯಂತ ಕೊರೊನಾ ವೈರಸ್ ಭಯ ಹುಟ್ಟಿಸಿದೆ. ಕರ್ನಾಟಕದಲ್ಲೂ ದಿನೇ ದಿನೇ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುದು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕೆ ತನಗೆ ನೂರು ದಿನಗಳ ರಜೆ ಕೊಡಿ ಎಂದು ಪೇದೆಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿಗೆ ಬರೆದ ಪತ್ರ ವೈರಲ್ ಆಗಿದೆ.
ಉಡುಪಿಯಲ್ಲಿ ಮೂವರಲ್ಲೂ ಕೊರೊನಾ "ನೆಗೆಟಿವ್"
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಠಾಣೆಯ ಪೇದೆ ಪ್ರಶಾಂತ್ ರಜೆ ಕೇಳಿ ಪೋಲಿಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಗೆ ಮನವಿ ಮಾಡಿಕೊಂಡಿದ್ದಾರೆ.
"ನಮ್ಮ ತಂದೆ ತಾಯಿಗೆ ನಾನು ಒಬ್ಬನೇ ಮಗ. ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ನಿಂದಾಗಿ ನನಗೂ ಕೊರೊನಾ ಹರಡುತ್ತದೆ ಎಂಬ ಭಯ ನಮ್ಮ ಪೋಷಕರಲ್ಲಿ ಶುರುವಾಗಿದೆ. ಈ ಕಾರಣಕ್ಕಾಗಿ ನನಗೆ ನೂರು ದಿನ ರಜೆ ಘೋಷಣೆ ಮಾಡಬೇಕು" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
"ದಿನನಿತ್ಯ ನಾವು ಜನರೊಂದಿಗೆ ಕೆಲಸ ಮಾಡಬೇಕಾಗಿದೆ. ಕೊರೊನಾ ವೈರಸ್ ಚೀನಾದಿಂದ ಭಾರತಕ್ಕೆ ಬಂದು ಕರ್ನಾಟಕಕ್ಕೂ ಅಪ್ಪಳಿಸಿದೆ. ಈ ಕೊರೊನಾ ವೈರಸ್ ನನಗೆ ಎಲ್ಲಿ ಬರುತ್ತದೋ ಎಂಬ ಭಯದಿಂದಲೇ ಪ್ರತಿನಿತ್ಯ ಬಳಲುವಂತಾಗಿದೆ. ಹೀಗಾಗಿ ರಜೆ ಕೊಡಿ" ಎಂದು ವಿನಂತಿಸಿಕೊಂಡಿದ್ದಾರೆ.
ಸದ್ಯ ಆ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.