ಭಿಕ್ಷುಕನಿಗೆ ಸನ್ಮಾನ ಮಾಡಿ ಬೇತಮಂಗಲ ಬಿಜೆಪಿ ನಾಯಕರು ಮಾಡಿದ ಪ್ರಮಾದ ಏನು ?
ಕೋಲಾರ, ಜನವರಿ 08: ಕೋಲಾರ ಜಿಲ್ಲೆ ಕೆಜಿಎಫ್ ಬಿಜೆಪಿ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರೂ ಕಡಿಮೆಯೇ ! ಅಂತಹ ಮಹತ್ಕಾರ್ಯವನ್ನು ಮಾಡುವ ಮೂಲಕ ಕೆಜಿಎಫ್ ಬಿಜೆಪಿ ಮುಖಂಡರು ದೊಡ್ಡ ಸುದ್ದಿಯಾಗಿದ್ದಾರೆ. ಈ ಕಾರ್ಯ ದೇಶದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನಿಗೂ ತಲುಪವಂತಾಗಬೇಕು ! ಅದೇನಂತೀರಾ ಸ್ಟೋರಿ ನೋಡಿ.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಯಾವುದೇ ರಾಜಕೀಯ ಪಕ್ಷದ ಚಿನ್ಹೆಗಳಿಗೆ ಸಂಬಂಧಿಸಿಲ್ಲ. ಚುನಾವಣೆಯಲ್ಲಿ ಜಯಗಳಿಸಿದ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಒಂದ್ಸಲ ಸನ್ಮಾನ ಮಾಡಿ ಪಾರ್ಟಿ ಶಕ್ತಿ ಇನ್ನಷ್ಟು ಗಟ್ಟಿ ಮಾಡುವ ಯೋಜನೆ ರೂಪಿಸಿದ್ದರು. ಕೆಜಿಎಫ್ ನ ಹದಿನಾರು ಪಂಚಾಯಿತಿಗಳಲ್ಲಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಸದಸ್ಯರಿಗೆ ಕೇಂದ್ರ ಲೋಕಸಭಾ ಸದಸ್ಯ ಮುನಿಸ್ವಾಮಿಯಿಂದ ಸನ್ಮಾನ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಬಿಜೆಪಿ ಮುಖಂಡರು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಸದಸ್ಯರಾಗಲೀ ಜನರಾಗಲೀ ಬಂದಿರಲಿಲ್ಲ.
ಕಾರ್ಯಕ್ರಮ ಶುರುವಾಯಿತು
ಕಾರ್ಯಕ್ರಮ ಶುರುವಾಯಿತು. ಜನರಂತೂ ಅಂದುಕೊಂಡಷ್ಟು ಬಂದಿಲ್ಲ. ಆದ್ರೆ ಜೋರಾಗಿ ಕೂಗಿ ಜಯಕಾರ ಹಾಕಿ ಸಂಸದರನ್ನು ಸಂತೃಪ್ತಿಗೊಳಿಸುವ ಕೆಲಸಕ್ಕೆ ಮುಂದಾದರು.
ಬಿಜೆಪಿ ಮುಖಂಡರ ಅಬ್ಬರ
ಬಿಜೆಪಿ ಮುಖಂಡರ ಅಬ್ಬರದ ಕೂಗು ಕೇಳಿದ ಭಿಕ್ಷುಕ ಎಲ್ಲೋ ಕಾರ್ಯಕ್ರಮ ನಡೀತಿದ,. ಊಟ ಕೊಡ್ತಾರೆ ಎಂದು ಭಾವಿಸಿ ಸದ್ದನ್ನು ಆಲಿಸಿಕೊಂಡು ಬಿಜೆಪಿ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮ ಹುಡುಕಿಕೊಂಡು ಬಂದೇ ಬಿಟ್ಟಿದ್ದಾನೆ. ಇದೇ ವೇಳೆಗೆ ವಿವಿಧ ಗ್ರಾಮ ಪಂಚಾಯಿತಿ ಚುನಾವಣೆಗಳಿಂದ ಗೆದ್ದಿದ್ದ ಸದಸ್ಯರನ್ನು ವೇದಿಕೆ ಮೇಲೆ ಕೂರಿಸಿ ಹೂವಿನ ಹಾರ ಹಾಕಿ ಸನ್ಮಾಸಲು ಕೇಂದ್ರ ಸಂಸದ ಮುನಿಸ್ವಾಮಿ ಮುಂದಾಗಿದ್ದರು. ವೇದಿಕೆ ಮೇಲೆ ಹತ್ತುವರನ್ನು ನೋಡಿದ ಭಿಕ್ಷುಕ, ಅಲ್ಲಿಯೇ ಊಟ ಕೊಡುತ್ತಿರುವುದರಿಂದ ಎಲ್ಲರೂ ಅಲ್ಲಿಗೆ ಹೋಗಿದ್ದಾರೆ ಎಂದು ಭಾವಿಸಿ ಭಿಕ್ಷುಕ ಕೂಡ ಅಲ್ಲಿಗೆ ಹೋದ. ಅಷ್ಟರಲ್ಲಿ ಬಿಜೆಪಿ ಮುಖಂಡರಿಗೆ ಏನನ್ನಿಸಿತೋ ಏನೋ ? ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿರುವ ನಮ್ಮ ಪಕ್ಷದ ಸದಸ್ಯ ಎಂದು ಭಾವಿಸಿ ಭಿಕ್ಷುಕನ ಕೊರಳಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದ್ದಾರೆ. ಸಂಸದರು ಸೇರಿ ಮಾನಸಿಕ ಅಸ್ವಸ್ತನಿಗೆ ಸನ್ಮಾನ ಮಾಡಿರುವ ಪೋಟೋ ವೈರಲ್ ಆಗುತ್ತಿದೆ. ಬಿಜೆಪಿ ವಿರೋಧಿ ಗುಂಪು ರಾಜ್ಯದೆಲ್ಲಡೆ ಭಿಕ್ಷುಕನಿಗೆ ಸನ್ಮಾನ ಮಾಡಿದ ಪೋಟೋವನ್ನು ವೈರಲ್ ಮಾಡುತ್ತಿದೆ. ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ತನಿಗೆ ಸನ್ಮಾನ ಮಾಡಿ ಬಿಜೆಪಿ ನಾಯಕರು ನಗೆ ಪಾಟಲಿಗೆ ಒಳಗಾಗಿದ್ದಾರೆ.
ಕೆಜಿಎಫ್ ವಿಧಾನಸಭಾ ಕ್ಷೇತ್ರ
ಕೆಜಿಎಫ್ ವಿಧಾನಸಭಾ ಕ್ಷೇತ್ರ ಬಿಜೆಪಿಯಲ್ಲಿನ ಬಣ ರಾಜಕೀಯದಿಂದ 'ಮಾನಸಿಕ ಅಸ್ವಸ್ಥನಿಗೆ ಸನ್ಮಾನ' ಮಾಡಿದ ವಿಷಯವನ್ನು ಬಿಜೆಪಿಯ ಮತ್ತೊಂದು ಗುಂಪು ವೈರಲ್ ಮಾಡಿದ ಪರಿಣಾಮ ಬಿಜೆಪಿಯ ಈ ಕಾರ್ಯಕ್ರಮ ನಗೆಪಾಟಲಿಗೀಡಾಗಿದೆ. ಮೊದಲಿಗೆ ಈ ಕಾರ್ಯಕ್ರಮಕ್ಕೆ ಹೋಗದಂತೆ ನೂತನ ಸದಸ್ಯರನ್ನು ತಡೆದಿದ್ದ ಮಾಜಿ ಶಾಸಕ ಸಂಪಂಗಿ ಬಣ ಸೇರಿದಂತೆ ವಿರೋಧಿಗಳ ಗುಂಪಿಗೆ ಸಿಕ್ಕಿದ್ದೇ ದೊಡ್ಡ ಅಸ್ತ್ರ ಎಂಬಂತೆ ಕೆಜಿಎಫ್ ತಾಲೂಕಿನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಇದರಿಂದಾಗಿ ಮೊದಲೇ ಸದಸ್ಯರು ಬಾರದೆ ಬೇಸರದಲ್ಲಿದ್ದ ಆಯೋಜಕರ ಗುಂಪು ಮತ್ತೊಂದು ಅಪಹಾಸ್ಯಕ್ಕೆ ತುತ್ತಾಗಿದ್ದಾರೆ.
ಭಿಕ್ಷುಕನಿಗೆ ಸನ್ಮಾನ
ಕಾರ್ಯಕ್ರಮ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ ಸಂಸತ್ ಸದಸ್ಯ ಮುನಿಸ್ವಾಮಿ ಸೇರಿದಂತೆ ಅವರ ಗುಂಪಿಗೆ ಸಾಕಷ್ಟು ಕಿರಿಕಿರಿ ತಂದಿರುವ ಬೆನ್ನಲ್ಲೇ ಮಾನಸಿಕ ಅಸ್ವಸ್ಥನೊಬ್ಬನಿಗೆ ವೇದಿಕೆಯಲ್ಲಿ ಕುಳ್ಳಿರಿಸಿ ಸದಸ್ಯನೆಂದು ಹೇಳಿ ಸನ್ಮಾನಿಸಿರುವ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಜನ ಮುಸಿ ಮುಸಿ ನಕ್ಕುತ್ತಿದ್ದಾರೆ.