ರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್ ಕಾಮ್ಸ್; ಧೈರ್ಯ ಹೇಳಿದ ಕೃಷಿ ಸಚಿವ
ಕೋಲಾರ, ಏಪ್ರಿಲ್ 13: "ರಾಜ್ಯದಾದ್ಯಂತ ಹೆಚ್ಚುವರಿ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯುವ ಕುರಿತು ಸದ್ಯ ಚರ್ಚೆ ನಡೆಸಲಾಗುತ್ತಿದೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಕೋಲಾರ ಜಿಲ್ಲಾ ಕೇಂದ್ರದಲ್ಲಿ ನಡೆದ ಕೃಷಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಿದರು.
"ರಾಜ್ಯದ ಇತರೆಡೆಗೆ ಹೋಲಿಸಿದರೆ ಕೋಲಾರದಲ್ಲಿ ಗಣನೀಯ ಪ್ರಮಾಣದಲ್ಲಿ ತರಕಾರಿ - ಮಾವು ಬೆಳೆಯುತ್ತಾರೆ. ಈ ಬಾರಿ ಟೊಮೆಟೊ - ಕ್ಯಾಪ್ಸಿಕಂ ಉತ್ತಮ ಇಳುವರಿ ಬಂದಿದೆ. ಆದರೆ ಎಂದಿನಂತೆ ಮಾರುಕಟ್ಟೆ ಇಲ್ಲದಿರುವುದರಿಂದ ತೊಂದರೆಯಾಗಿದೆ ಎಂಬುದು ಸರ್ಕಾರದ ಗಮನಕ್ಕೂ ಬಂದಿದೆ. ಆದ್ದರಿಂದ ರಾಜ್ಯಾದ್ಯಂತ ಈಗ ಇರುವುದಕ್ಕಿಂತಲೂ ದುಪ್ಪಟ್ಟು ಸಂಖ್ಯೆಯ ಹಾಪ್ ಕಾಮ್ಸ್ ಮಳಿಗೆ ತೆರೆಯುವ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರು ನಿರ್ಧಾರ ಕೈಗೊಳ್ಳುತ್ತಿದ್ದಾರೆ" ಎಂದರು.
ಆತ್ಮಹತ್ಯೆ ಪರಿಹಾರವಲ್ಲ, ಅನ್ನದಾತರೆ ಆತ್ಮಸ್ಥೈರ್ಯದಿಂದಿರಿ: ಬಿ.ಸಿ.ಪಾಟೀಲ
ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಕೃಷಿ ಚಟುವಟಿಕೆಗೂ ಅಡ್ಡಿಯಿಲ್ಲ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚುವರಿ ವಾಹನ ಬಳಸುವ ಕುರಿತು ಚಿಂತನೆ ನಡೆದಿದೆ ಎಂದರು. ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚಟುವಟಿಕೆ ನಡೆಸಲು ಬೇಕಾದ ಬಿತ್ತನೆ ಬೀಜ - ರಸಗೊಬ್ಬರಗಳಿಗೆ ಯಾವುದೇ ಕೊರತೆ ಇಲ್ಲ. ರೈತರು ಆತಂಕ ಪಡದೇ ನಿಶ್ಚಿಂತೆಯಿಂದ ಚಟುವಟಿಕೆಯಿಂದಿರಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪುಷ್ಪ ಕೃಷಿ ಬೆಳೆಗಾರರ ಸ್ಥಿತಿಗತಿ ಸರ್ಕಾರದ ಗಮನಕ್ಕೆ ಬಂದಿದೆ. ಪುಷ್ಪಕೃಷಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕೃಷಿಕರ ಕಷ್ಟನಷ್ಟಗಳು ಸರ್ಕಾರದ ಗಮನಕ್ಕೆ ಬಂದಿವೆ. ಲಾಕ್ ಡೌನ್ ಮುಗಿದ ನಂತರ ಪರಿಹಾರಗಳ ಬಗ್ಗೆ ಚಿಂತನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಗೂ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ - ತಾಲ್ಲೂಕು ಮಟ್ಟದ ಅಧಿಕಾರಿಗಳು, ರೈತ ಮುಖಂಡರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.