ದೇವರ ಕೈ ಮುಗಿಯುತ್ತಿದ್ದ ನಗರಸಭೆ ಸದಸ್ಯನನ್ನು ಕತ್ತರಿಸಿದ ಕಿರಾತಕರು!
ಕೋಲಾರ, ಜೂ. 07: ದೇವರಿಗೆ ಕೈ ಮುಗಿಯಲು ಹೋಗಿದ್ದ ನಗರಸಭೆ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮುಳಬಾಗಿಲು ನಗರದಲ್ಲಿ ಬೆಳಗಿನ ಜಾವ ನಡೆದಿದೆ.
ಮುತ್ಯಾಲಪೇಟೆ ನಿವಾಸಿ, ಮುಳಬಾಗಿಲು ನಗರ ಸಭೆ ಸದಸ್ಯನಾಗಿರುವ ಜಗನ್ ಮೋಹನ್ ರೆಡ್ಡಿ ಕೊಲೆಯಾದವರು. ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಬಲಗೈ ಬಂಟನಾಗಿದ್ದ ಜಗನ್ ಮೋಹನ್ ರೆಡ್ಡಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
ಪ್ರತಿ ನಿತ್ಯ ಮುತ್ಯಾಲಪೇಟೆಯಲ್ಲಿರುವ ಗಂಗಮ್ಮನ ಗುಡಿಗೆ ಪೂಜೆ ಮಾಡುತ್ತಿದ್ದರು. ಎರಡು ದಿನದ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜಗನ್ ಮೋಹನ್ ರೆಡ್ಡಿ ಎಂದಿನಂತೆ ಪೂಜೆ ಮಾಡಲು ತೆರಳಿದ್ದರು. ಮಂಗಳವಾರ ಬೆಳಗಿನ ಜಾವ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಕೈ ಮುಗಿಯುವ ವೇಳೆ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಸ್ಕೂಟಿಯಲ್ಲಿ ಮೂವರು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಿಬ್ಬರು ಪರಾರಿಯಾದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.
ಸ್ಥಳಕ್ಕೆ ಎಸ್ಪಿ ಭೇಟಿ:
ಜಗನ್ ಮೋಹನ್ ರೆಡ್ಡಿ ಕೊಲೆಯಾದ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ಡಿ. ದೇವರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುತ್ಯಾಲಪೇಟೆಯ ನಾಲ್ಕು ದಿಕ್ಕಿನಲ್ಲಿರುವ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆಗೆ ವೀಶೇಷ ತಂಡ ರಚಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಚಲನವಲನ ಮೇಲೆ ನಿಗಾ ಇಟ್ಟು ಹತ್ಯೆ ಮಾಡಿದ್ದಾರೆ. ಈ ಕುರಿತು ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ:
ಜಗನ್ ಮೋಹನ್ ರೆಡ್ಡಿ ಕೊಲೆಯಾದ ಬೆನ್ನಲ್ಲೇ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಹಂತಕರನ್ನು ಶೀಘ್ರದಲ್ಲಿಯೇ ಪತ್ತೆ ಮಾಡಿ ಬಂಧಿಸಬೇಕು. ಇಲ್ಲದಿದ್ದರೆ ಒಂದು ವಾರ ಕಾಲ ಪಟ್ಟಣವನ್ನು ಬಂದ್ ಮಾಡಲಾಗುವುದು ಎಂದು ಜಗನ್ ಮೋಹನ್ ರೆಡ್ಡಿ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯವಾಗಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದ ಜಗನ್ ಮೋಹನ್ ಕೊಲೆಗೆ ನಿಖರ ಕಾರಣ ಗೊತ್ತಿಲ್ಲ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.