ಕೋಚಿಮುಲ್ ನಲ್ಲಿ ಮೆಗಾಡೈರಿ ನಿರ್ಮಾಣಕ್ಕೆ ಸಚಿವರ ಅಡ್ಡಿ
ಕೋಲಾರ, ಮಾರ್ಚ್ 09: ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ರೈತರ ಜೀವನಾಡಿ, ಲಕ್ಷಾಂತರ ರೈತರ ನೆರವಿನಿಂದ ದೊಡ್ಡ ಮಟ್ಟದ ಸಹಕಾರಿ ಒಕ್ಕೂಟವಾಗಿ ಬೆಳೆದು ರಾಜ್ಯದಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ಹೆಗ್ಗಳಿಕೆ ಪಡೆದಿರುವ ಹಾಲು ಒಕ್ಕೂಟ ಕೋಚಿಮುಲ್ ಡೈರಿ. ಆದರೆ ಇದೀಗ ಈ ಹಾಲು ಒಕ್ಕೂಟದಲ್ಲಿ ರಾಜಕೀಯ ನುಸುಳಿದೆ, ಕೋಲಾರ ಹಾಲು ಒಕ್ಕೂಟದಲ್ಲಿ ನಿರ್ಮಾಣವಾಗುತ್ತಿರುವ ಎಂವಿಕೆ ಗೋಲ್ಡನ್ ಡೈರಿಗೆ ರಾಜ್ಯದ ಪ್ರಭಾವಿ ಸಚಿವರೊಬ್ಬರು ಅಡ್ಡಗಾಲು ಹಾಕಿದ್ದಾರೆ ಎಂಬ ಗುಮಾನಿ ಇದೆ.
ಕೋಲಾರ ಜಿಲ್ಲೆಯ ಲಕ್ಷಾಂತರ ರೈತರಿಗೆ ಜೀವನಾಡಿಯಾಗಿರುವ ಕೋಚಿಮುಲ್ ಡೈರಿಯಲ್ಲಿ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿರುವ ರಾಜ್ಯ ಸರ್ಕಾರದ ಸಚಿವರ ವಿರುದ್ಧ ಕೋಲಾರ ಕೋಚಿಮುಲ್ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರಕ್ಕೆ ನೀರು ಹರಿಸಲು ಅಟಲ್ ಭೂಜಲ್ ಯೋಜನೆ ಜಾರಿ
ಸುಮಾರು ಏಳೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ರಾಜ್ಯಕ್ಕೆ ಕ್ಷೀರಕ್ರಾಂತಿ ಪರಿಚಯಿಸಿ ಹೈನೋದ್ಯಮದ ಪಿತಾಮಹ ಎನ್ನಿಸಿಕೊಂಡಿರುವ, ಕೋಲಾರ ಜಿಲ್ಲೆಯವರಾದ ದಿವಂಗತ ಮಾಜಿ ಕೇಂದ್ರ ಸಚಿವ ಎಂ.ವಿ ಕೃಷ್ಣಪ್ಪ ಅವರ ಹೆಸರಿನಲ್ಲಿ ಸುಮಾರು 130 ಕೋಟಿ ವೆಚ್ಚದಲ್ಲಿ ಕೋಲಾರ ಹಾಲು ಒಕ್ಕೂಟದ ಆವರಣದಲ್ಲಿ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ಮಾಡಲಾಗುತ್ತಿದೆ.
ಪ್ರಭಾವಿ ಸಚಿವರಿಂದ ತಡೆಯಾಜ್ಞೆ ಆರೋಪ
ಉದ್ದೇಶಿತ ಮೆಗಾಡೈರಿ ನಿರ್ಮಾಣವನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇನ್ನು ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿರುವುದು ಕೋಲಾರ ಭಾಗದ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶ ವಿರುದ್ಧ ಕಿಡಿಕಾರಿರುವ ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ ನಂಜೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ಧ ಸೇಡಿನ ರಾಜಕಾರಣ ಆರೋಪ ಮಾಡಿದರು.
ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ, ಎಂವಿಕೆ ಗೋಲ್ಡನ್ ಡೈರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇನ್ನು ಎಂವಿಕೆ ಗೋಲ್ಡನ್ ಡೈರಿಗೆ ಟೆಂಡರ್ ಪ್ರಕ್ರಿಯೆ ಕೂಡ ಮುಗಿದು ಕಾಮಗಾರಿ ಶುರುವಾಗುವ ವೇಳೆಗೆ ಪ್ರಭಾವಿ ಸಚಿವರ ರಾಜಕೀಯದಿಂದಾಗಿ ಕೋಲಾರದ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ತೊಂದರೆಗೆ ಸಿಲುಕಿದೆ.
ಸಚಿವರ ವಿರುದ್ಧ ಕೋಚಿಮುಲ್ ಅಧ್ಯಕ್ಷರು ಕಿಡಿ
ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಸುಧಾಕರ್, ತಮ್ಮ ಪ್ರಭಾವ ಬಳಸಿ ಸಹಕಾರಿ ಸಚಿವರ ಮೇಲೆ ಒತ್ತಡ ಹಾಕಿ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣವನ್ನು ಸ್ಥಗಿತಗೊಳಿಸಲು ಆದೇಶ ನೀಡಿದ್ದಾರೆ ಎಂದು ಸಚಿವರುಗಳಾದ ಸುಧಾಕರ್ ಹಾಗೂ ಸಹಕಾರಿ ಸಚಿವ ಸೋಮಶೇಖರ್ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾಗಲಿ ನಮ್ಮದೇನೂ ತಕರಾರಿಲ್ಲ, ಆದರೆ ವಿಭಜನೆ ನೆಪವೊಡ್ಡಿ ಸೇಡಿನ ರಾಜಕಾರಣ ಮಾಡಲು ಮೆಗಾಡೈರಿ ನಿರ್ಮಾಣಕ್ಕೆ ತಡೆ ನೀಡಿರುವುದು ಸರಿಯಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಹಾಲು ಒಕ್ಕೂಟ ಮಂಡಳಿ ಜೊತೆ ಚರ್ಚೆ ಮಾಡದೇ ಏಕಾಏಕಿ ಸಚಿವರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದರು.
130 ಕೋಟಿ ರೂ, ಗೋಲ್ಡನ್ ಡೈರಿ ನಿರ್ಮಾಣ
ಕೋಲಾರ-ಚಿಕ್ಕಬಳ್ಳಾಪುರ ಹಾಲು ಸಹಕಾರ ಒಕ್ಕೂಟ ವಿಭಜನೆಯಾಗುತ್ತಿದೆ, ಚಿಕ್ಕಬಳ್ಳಾಪುದಲ್ಲಿ ಇನ್ನೂರು ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲಾಗಿದೆ. ಡೈರಿಯಲ್ಲಿ ಯಂತ್ರೋಪಕರಣಗಳು ತಾಂತ್ರಿಕ ವ್ಯವಸ್ಥೆಯಾದ ಮೇಲೆ ಆಡಳಿತ ಮಂಡಳಿ ಕೂಡ ವಿಭಾಗವಾಗಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಆಡಳಿತ ಬರಲಿದೆ.
ಕಳೆದ ಕೋಚಿಮುಲ್ ಚುನಾವಣೆಯಲ್ಲಿ ಸೋತಿರುವ ತಮ್ಮ ಬೆಂಬಲಿಗರೊಬ್ಬರಿಗೆ ಪುನರ್ವಸತಿ ಕಲ್ಪಿಸಲು, ಸಚಿವ ಸುಧಾಕರ್ ತಮ್ಮ ಪ್ರಭಾವ ಬಳಸಿ ಕೋಲಾರದಲ್ಲಿ ಉದ್ದೇಶಿತ 130 ಕೋಟಿ ವೆಚ್ಚದ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣಕ್ಕೆ ಅಡ್ಡಗಾಲು ಹಾಕಿರುವ ಆರೋಪ ಎದುರಾಗಿದೆ. ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ತಡೆ ಆದೇಶಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆಂದ ಸಂಸದ
ಕೋಲಾರ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟಕ್ಕೆ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಸುಖಾಸುಮ್ಮನೇ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣಕ್ಕೆ ಅಡ್ಡಗಾಲು ಹಾಕುವುದು ಸರಿಯಲ್ಲ, ನೂತನ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣದಿಂದ ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟ ಪ್ರಕ್ರಿಯೆಗೆ ಯಾವುದೇ ತೊಂದರೆ ಇಲ್ಲ, ಸಿಎಂ ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಕೋಲಾರದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ 130 ಕೋಟಿ ವೆಚ್ಚದ ಎಂವಿಕೆ ಗೋಲ್ಡನ್ ಡೈರಿಗೆ ತಡೆ ನೀಡಿರುವ ಆದೇಶವನ್ನು ವಾಪಸು ಪಡೆಯುವುದಾಗಿ ಹೇಳಿದರು.