RSSಗೂ, ಕುರುಬ ಸಮಾಜಕ್ಕೂ ಏನು ಸಂಬಂಧ; ಸಿದ್ದರಾಮಯ್ಯ ಅದ್ಯಾಕೆ ಹೇಳಿದ್ರು?
ಕೋಲಾರ, ಫೆಬ್ರವರಿ 13: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಹಾಗೂ ರಾಷ್ಟ್ರಕ್ಕೆ ಒಳ್ಳೆಯ ಬಜೆಟ್ ನೀಡಿದೆ, ಕೊಂಚ ಬೆಲೆ ಏರಿಕೆ ಮಾಡಿದೆ, ಆದರೆ ಜನಸಾಮಾನ್ಯರ ಮೇಲೆ ಹೊರೆ ಹಾಕುವ ಉದ್ದೇಶವಿಲ್ಲ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಗ್ಗೆ ಹೆಮ್ಮೆ ಇದೆ ಎಂದು ಸಚಿವ ಭೈರತಿ ಬಸವರಾಜ್ ಅಭಿಪ್ರಾಯಪಟ್ಟರು.
ಕೋಲಾರದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ್, ಕಾಂಗ್ರೆಸ್ ಪಕ್ಷಕ್ಕೆ ಮಾಡೋಕೆ ಕೆಲಸವಿಲ್ಲ, ಆಗಾಗಿ ಟೀಕೆ ಮಾಡ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ತಾನು ಸಿಎಂ ಆಗ್ಬೇಕು, ನಾನು ಸಿಎಂ ಆಗ್ಬೇಕು ಅಂತ ಕಿತ್ತಾಡುತ್ತಿದ್ದಾರೆ. ಹೀಗಾಗಿ ಇದನ್ನು ಮರೆಮಾಚಲು ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ?
ಆಯಾ ಜಾತಿಗಳು ಹೋರಾಟ ಮಾಡುತ್ತಿವೆ
ಕಾಂಗ್ರೆಸ್ ಪಕ್ಷ ಇದೆ ಅಂತ ಜನರಿಗೆ ಗೊತ್ತಾಗಲಿ ಅಂತ ಟೀಕೆ ಮಾಡ್ತಿದ್ದಾರೆ, ಅದಕ್ಕೆ ತಲೆಕೆಡಿಸಿಕೊಡುವುದಿಲ್ಲ. ರಾಜ್ಯದ ಜನರಿಗೆ ಅನುಕೂಲವಾಗುವ ಬಜೆಟ್ ಅನ್ನು ಸಿಎಂ ಯಡಿಯೂರಪ್ಪ ಮಂಡನೆ ಮಾಡುತ್ತಾರೆ. ಯುವಕರ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಟ್ಟಿದ್ದೇವೆ ಎಂದರು. ಮೀಸಲಾತಿಗಾಗಿ ಆಯಾ ಜಾತಿಗಳು ಹೋರಾಟ ಮಾಡುತ್ತಿವೆ, ಅವರವರ ಹಕ್ಕನ್ನು ಸರ್ಕಾರದಿಂದ ಕೇಳುತ್ತಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ, ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. RSS ಗೂ, ಕುರುಬ ಸಮಾಜಕ್ಕೂ ಏನು ಸಂಬಂಧ ಇದೆ, ನಾಜಿ ಸಿಎಂ ಸಿದ್ದರಾಮಯ್ಯ ನವರು ಅದ್ಯಾಕೆ ಹೇಳಿದರೋ ಗೊತ್ತಿಲ್ಲ ಎಂದು ಸಚಿವ ಭೈರತಿ ಬಸವರಾಜ್ ಪ್ರಶ್ನಿಸಿದರು.
ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನೆಯೇ ಇಲ್ಲ
ಮೀಸಲಾತಿ ಹೋರಾಟ ಸರ್ಕಾರದ ವಿರುದ್ಧ ಅಲ್ಲ, ಸಿದ್ದರಾಮಯ್ಯನವರು ಅಹಿಂದ ಸಮಾವೇಶ ಬೇಕಾದರೆ ಮಾಡಲಿ. ನಾನು ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಅವರು, ಸಿಎಂ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪ್ರಶ್ನೆಯೇ ಇಲ್ಲ. ಮುಂದಿನ ಸಂಪೂರ್ಣ ಅವಧಿ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವರು ಚಟಕ್ಕೆ ಹೀಗೆ ಮಾತನಾಡುತ್ತಾರೆ
ಇನ್ನು ಬಿಜೆಪಿ ಮಗ್ಗಲು ಮುಳ್ಳಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಭೈರತಿ ಬಸವರಾಜ್, ಆ ಕುರಿತು ಕೇಂದ್ರ ಶಿಸ್ತು ಸಮಿತಿ ತೀರ್ಮಾನ ಮಾಡುತ್ತದೆ. ಅವರ ಹೇಳಿಕೆ ಬಗ್ಗೆ ನಾನು ಮಾತನಾಡೋದಿಲ್ಲ. ಕೆಲವರು ಚಟಕ್ಕೆ ಹೀಗೆ ಮಾತನಾಡುತ್ತಾರೆ. ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡಬೇಕು ಎಂದು ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು 2013ರಲ್ಲಿ ಅಹಿಂದ ಸಮಾವೇಶ ಮಾಡಿದ್ದ ಉದ್ದೇಶವೇ ಬೇರೆ ಇತ್ತು. ಈಗ ಅವರು ಅಹಿಂದ ಆದರೂ ಮಾಡಲಿ, ಏನಾದರೂ ಮಾಡಲಿ. ಅವರದೇ ಬೇರೆ ಪಕ್ಷ, ನಮ್ಮ ಪಕ್ಷ ಬೇರೆ. ಅಹಿಂದ ಸಮಾವೇಶದದಿಂದ ಯಾವುದೇ ಡ್ಯಾಮೇಜ್ ಆಗೋದಿಲ್ಲ, ಜನರು ಬಿಜೆಪಿ ಪರವಾಗಿ ಇದ್ದಾರೆ ಎಂದು ಸಚಿವರು ಹೇಳಿದರು.
ವಿರೋಧ ಪಕ್ಷದವರಿಂದ ಗೊಂದಲ ಸೃಷ್ಟಿ
ಆಗ ಬಿಜೆಪಿಯಲ್ಲಿ ಭಿನ್ನಮತವಿತ್ತು. ಯಡಿಯೂರಪ್ಪನವರ ವೋಟ್ ಪರ್ಸೆಂಟೇಜ್ ಡಿವೈಡ್ ಆಗಿತ್ತು. ಹಾಗಾಗಿ ಅಹಿಂದ ಸಮಾವೇಶ ಮಾಡಿದರು. ಆದರೀಗ ನಮ್ಮಲ್ಲಿ ಗೊಂದಲವಿಲ್ಲ, 150ಕ್ಕೂ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ ಎಂದರು.
ದೆಹಲಿಯಲ್ಲಿನ ರೈತ ಹೋರಾಟ ಕೈ ಬಿಡಬೇಕು, ರೈತ ಬೆಳೆದ ಬೆಳೆಯನ್ನು ಎಲ್ಲಾದರೂ ಮಾರಾಟ ಮಾಡಬಹುದು. ಸ್ವಇಚ್ಛೆಯಿಂದ ಮಾರಾಟ ಮಾಡೋದೇ ತಪ್ಪಾ? ದೇವೇಗೌಡರು ಸಹ ರಾಜ್ಯಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಎಪಿಎಂಸಿ ಅದೇಗೆ ವೀಕ್ ಆಗುತ್ತೆ. ಎಪಿಎಂಸಿ ನಲ್ಲೇ ಮಾರಾಟ ಮಾಡಬೇಕು ಅನ್ನೋ ಭ್ರಮೆ ಇದೆಯಾ? ಇದು ವಿರೋಧ ಪಕ್ಷದವರು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಕೋಲಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.