ಹತ್ತು ವರ್ಷಗಳ ನಂತರ ಕಳೆಗಟ್ಟಿದೆ ಕೋಲಾರದ "ಮಿನಿ ಕೆಆರ್ ಎಸ್"
ಕೋಲಾರ, ಸೆಪ್ಟೆಂಬರ್ 22: ಅದು ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಬಯಲು ಸೀಮೆಯ ಏಕೈಕ ಜಲಾಶಯ. ಮೈಸೂರು ಕೆ.ಆರ್.ಎಸ್.ನಂತೆ ಇದು ಬಯಲು ಸೀಮೆಗೆ ಮಿನಿ ಕೆಆರ್ಎಸ್ ಎಂದೇ ಪ್ರಸಿದ್ಧಿ. ಆದರೆ ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿ ಕಳೆ ಕಳೆದುಕೊಂಡಿತ್ತು ಈ ಜಲಾಶಯ. ಇದೀಗ ಕೋಲಾರದಲ್ಲಿ ಕೆಲವು ದಿನಗಳಿಂದೀಚೆ ಮಳೆಯಾಗುತ್ತಿದೆ.
ನಿರಂತರ ಮಳೆಯಿಂದಾಗಿ ಈ ಜಲಾಶಯದಲ್ಲೂ ನೀರು ತುಂಬಿದ್ದು, ಜಲಾಶಯ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ತನ್ನ ಅಭೂತಪೂರ್ವ ಸೌಂದರ್ಯದಿಂದಲೇ ಪ್ರವಾಸಿಗರನ್ನು ಸೆಳೆಯುತ್ತಿದೆ. ಆ ಜಲಾಶಯದ ಅಪೂರ್ವ ಚೆಲುವನ್ನು ಕಣ್ತುಂಬಿಕೊಳ್ಳಲು ಜನರು ದಾಂಗುಡಿಯಿಡುತ್ತಿದ್ದಾರೆ...
ಎಷ್ಟೋ ವರ್ಷದ ನಂತರ ಕೋಲಾರದಲ್ಲಿ ಈ ಪರಿ ಮಳೆ; ಜೀವಪಡೆದ ನೀರ ಸೆಲೆ
ನೀರಿಲ್ಲದೇ ಒಣಗಿ ಹೋಗಿದ್ದ "ಮಿನಿ ಕೆಆರ್ ಎಸ್"
ಸುಂದರ ಬೆಟ್ಟಗುಡ್ಡಗಳ ನಡುವೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಈ ಮಾರ್ಕಂಡೇಯ ಅಣೆಕಟ್ಟು ಇದೆ. ಕೋಲಾರದ ಮಿನಿ ಕೆಆರ್ಎಸ್ ಎಂದೇ ಕರೆಯಲಾಗುವ ಬೂದಿಕೋಟೆಯ ಈ ಮಾರ್ಕಂಡೇಯ ಅಣೆಕಟ್ಟು ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದು. ಈ ಭಾಗದ ರೈತರಿಗೆಂದು ನಿರ್ಮಾಣ ಮಾಡಲಾಗಿದ್ದ ಅಣೆಕಟ್ಟು ನೀರೇ ಇಲ್ಲದೇ ಒಣಗಿಹೋಗಿತ್ತು.
10 ವರ್ಷದಿಂದ ಬರಿದಾಗಿದ್ದ ಜಲಾಶಯ
ಕಳೆದ ಹತ್ತು ವರ್ಷಗಳಿಂದಲೂ ಕೋಲಾರ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲ. ಹೀಗಾಗಿಯೇ ಜಲಾಶಯಕ್ಕೂ ಅಂಥ ಪ್ರಮಾಣದಲ್ಲಿ ನೀರು ತುಂಬಿಲ್ಲ. ಆದರೆ ಕಳೆದೊಂದು ತಿಂಗಳಲ್ಲಿ ಕೋಲಾರದಲ್ಲಿ ಸುರಿದ ಮಳೆಯಿಂದ ಮಾರ್ಕಂಡೇಯ ಜಲಾಶಯ ಅರ್ಧದಷ್ಟು ತುಂಬಿಕೊಂಡಿದೆ. ಇದೀಗ ನೋಡುಗರ ಕಣ್ಣಿಗೆ ಹಬ್ಬವನ್ನೇ ಉಂಟು ಮಾಡಿದೆ.
ರೈತರ ಖಾತೆಗೆ ಇನ್ನೂ ಹಣ ಬಂದಿಲ್ಲ; ಬಿಸಿ ಮುಟ್ಟಿಸಿದ ಸಚಿವ ನಾರಾಯಣಗೌಡ
ಬೆಂಗಳೂರಿನಿಂದ 80 ಕಿ.ಮೀ. ದೂರ
ಈ ಸುಂದರ ವಾತಾವರಣವನ್ನು ಸವಿಯಲು ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸುಂದರ ಬೆಟ್ಟಗುಡ್ಡಗಳ ನಡುವೆ ಸುಂದರವಾದ ಈ ಜಲಾಶಯಕ್ಕೆ ಭೇಟಿ ಕೊಡುತ್ತಿದ್ದಾರೆ. ಬೆಂಗಳೂರಿಗೆ ಕೇವಲ 80 ಕಿ.ಮೀ ದೂರದಲ್ಲಿರುವ ಮಾರ್ಕಂಡೇಯ ಜಲಾಶಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಅಥವಾ ಪ್ರವಾಸೋದ್ಯಮ ಇಲಾಖೆ ಈ ಜಲಾಶಯದ ಸುತ್ತಮುತ್ತ ಭದ್ರತೆ ಸೇರಿದಂತೆ ಕೆಲವೊಂದು ಮೂಲ ಸೌಲಭ್ಯಗಳನ್ನು ಒದಗಿಸಬೇಕಿದೆ.
Recommended Video
ಜಿಲ್ಲೆಯ ಜನರಲ್ಲಿ ಸಂತಸ
ಒಟ್ಟಾರೆ ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆಯಲ್ಲಿ ಇರುವ ಏಕೈಕ ಜಲಾಶಯಕ್ಕೆ ಈಗ ನೀರು ತುಂಬಿ ಕಳೆ ಬಂದಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಜಿಲ್ಲೆಯಲ್ಲಿ ಭರ್ಜರಿ ಮಳೆ ಸುರಿದ ಪರಿಣಾಮ ಜಿಲ್ಲೆಯ ಜನರ ಜೊತೆಗೆ ಹೊರಗಿನ ಜನಕ್ಕೂ ಈ ಮಾರ್ಕಂಡೇಯ ಜಲಾಶಯ ಒಳ್ಳೆಯ ಪ್ರಕೃತಿಯ ತಾಣವಾಗಿ ಹಿತ ನೀಡುತ್ತಿದೆ.