ಮಾಲೂರಿನ ಈ ದೇಗುಲಕ್ಕೆ ಬಾಗಿಲೂ ಇಲ್ಲ, ಅರ್ಚಕರೂ ಇಲ್ಲ...
ಕೋಲಾರ, ಫೆಬ್ರವರಿ 24: ಈ ದೇಗುಲಕ್ಕೆ ಬಾಗಿಲಿಲ್ಲ, ಪೂಜೆ ಮಾಡಲು ಅರ್ಚಕರೂ ಇಲ್ಲ. ಭಕ್ತರೇ ಇಲ್ಲಿ ಅರ್ಚಕರು. ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾ ದಿನವಿಡೀ ಭಕ್ತರೇ ಈ ದೇವಿಗೆ ಪೂಜೆ ಮಾಡುತ್ತಾರೆ. ಅವರ ಕೋರಿಕೆಯೇ ಮಂತ್ರ, ಬೇಡಿಕೆಗಳೇ ಅರ್ಚನೆ... ದಿನದ 24 ಗಂಟೆಯೂ ಇಲ್ಲಿ ಪೂಜೆ ನಡೆಯುತ್ತದೆ. ನೂರಾರು ವರ್ಷಗಳಿಂದ ಊರನ್ನು ಕಾಪಾಡಿಕೊಂಡು ಬಂದಿರುವ ಈ ದೇವಿ ಅನುಮತಿ ಪಡೆದೇ ಈ ಊರಿನವರು ಶುಭ ಕಾರ್ಯಗಳನ್ನು ಮಾಡುತ್ತಾರೆ.
ಈ ಒಂದು ವಿಶೇಷ ದೇವಸ್ಥಾನ ಇರುವುದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ. ಮಾಲೂರಿನಲ್ಲಿನ ಈ ಮಾರಿಕಾಂಬ ದೇವಾಲಯ ಶಕ್ತಿ ದೇವತೆಯ ಕೇಂದ್ರವೆಂದೇ ಪ್ರಸಿದ್ಧಿ. ಇಂಥ ಹಲವು ವಿಶೇಷಗಳು, ಇತಿಹಾಸವನ್ನು ಈ ದೇಗುಲ ಹೊಂದಿದೆ. ಇದರ ಇನ್ನಷ್ಟು ವಿಶೇಷತೆ ಇಲ್ಲಿದೆ...
ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ
ಕಲ್ಯಾಣಿಯಲ್ಲಿ ಸಿಕ್ಕಿದ ವಿಗ್ರಹಗಳು
ಸುಮಾರು 500 ವರ್ಷಗಳ ಹಿಂದೆ ಮಾಲೂರಿನ ಮಧ್ಯ ಭಾಗದಲ್ಲಿರುವ ಗಜಗೊಂಡಲ ಬಾವಿಯೊಂದರಲ್ಲಿ ಸಿಕ್ಕಿದಂತಹ ಕಲ್ಲಿನ ಎರಡು ಮಾರಿಕಾಂಬೆಯ ವಿಗ್ರಹಗಳಿಗೆ ಅಂದಿನ ಪಾಳೇಗಾರರು ದೇವಾಲಯ ನಿರ್ಮಿಸಿದ್ದಾರೆ. ಹಿಂದೆ ಮಾಲೂರಿನ ಇರ್ದೆ ರಾಮ್ ಸಿಂಗ್ ಎಂಬುವವರಿಗೆ ಮಾರಮ್ಮ ದೇವಿ ಕನಸಲ್ಲಿ ಬಂದು, ಎರಡು ವಿಗ್ರಹಗಳು ಈ ಕಲ್ಯಾಣಿಯಲ್ಲಿ ಮುಳುಗಿ ಹೋಗಿದ್ದು ಅದನ್ನು ತೆಗೆದು ದೇವಾಲಯ ನಿರ್ಮಾಣ ಮಾಡುವಂತೆ ಹೇಳಿದ್ದು, ಅದರಂತೆ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. ದೇವಾಲಯ ನಿರ್ವಹಣಾ ಸಮಿತಿಯೂ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ.
ಮೀಸೆ ಇರುವ ಜೋಡಿ ಮಾರಮ್ಮ ವಿಗ್ರಹಗಳು
ಈ ಜೋಡಿ ಮಾರಮ್ಮ ವಿಗ್ರಹಗಳ ಕೆತ್ತನೆಯಲ್ಲಿ ಮೀಸೆ ಇದೆ. ಆ ಮೀಸೆ ಏಕಿದೆ ಎನ್ನುವ ಕುರಿತು ಯಾರಿಗೂ ಮಾಹಿತಿ ಇಲ್ಲ. ಬಾವಿಯ ಪಕ್ಕದಲ್ಲೇ ಇರುವ ಬಯಲು ಪ್ರದೇಶದಲ್ಲಿ, ಯಾವುದೇ ಗೋಪುರವನ್ನು ಕಟ್ಟಿಸದೆ ಮೊದಲು ಎರಡು ವಿಗ್ರಹವನ್ನು ಇಡಲಾಗಿತ್ತು. ನಂತರ ದೇವಸ್ಥಾನ ಕಟ್ಟಲಾಗಿದೆ. ಇಂದು ಈ ದೇಗುಲ ಅಪಾರ ಪ್ರಮಾಣದ ಭಕ್ತಾಧಿಗಳ ನೆರವಿನಿಂದ ಬೃಹದಾಕಾರವಾಗಿ ತಲೆಎತ್ತಿದೆ. ಮನೆಯಲ್ಲಿ ಎಂಥದ್ದೇ ಕಷ್ಟ ಬರಲಿ, ಯಾವುದೇ ಶುಭ ಕಾರ್ಯಗಳಿರಲಿ, ಮೊದಲು ಈ ದೇವಿಗೆ ಪೂಜೆ ಸಲ್ಲಿಸಿಯೇ ಮುಂದಿನ ಕಾರ್ಯ ಮಾಡುತ್ತಾರೆ.
ಬೆಟ್ಟದಪುರದಲ್ಲಿ ಸಂಭ್ರಮದಿಂದ ಜರುಗಿದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ
ದೇವಿಯಲ್ಲಿ ಹರಕೆ ಕಟ್ಟಿಕೊಳ್ಳುವ ಮುಸ್ಲಿಮರು
ಈ ದೇಗುಲಕ್ಕೆ ಬರುವವರಲ್ಲಿ ಯಾವುದೇ ಭೇದಭಾವ ಇಲ್ಲ. ಶ್ರೀಮಂತರು, ಬಡವ ಬಲ್ಲಿದರು, ಹಿಂದೂಗಳು, ಮುಸ್ಲಿಮರು ಎಂಬ ಯಾವುದೇ ಭೇದವಿಲ್ಲದೆ ಬಂದು ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ಮುಸ್ಲಿಂ ಜನಾಂಗದವರು ಈ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿಗೆ ಆಂಧ್ರ ಪ್ರದೇಶ, ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ದೇವಾಲಯಕ್ಕೆ ಪ್ರತಿನಿತ್ಯ, ದಿನದ ಎಲ್ಲಾ ಸಮಯದಲ್ಲೂ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಹೋಗುತ್ತಿರುತ್ತಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಮಾರಿಕಾಂಬ ದೇವಾಲಯ ವಾರದ 7 ದಿನಗಳಲ್ಲೂ, ದಿನದ 24 ಗಂಟೆಯೂ ಭಕ್ತಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ. ರಾತ್ರಿ ಹನ್ನೆರೆಡು ಗಂಟೆಗೆ ಬಂದರೂ ದೇವಾಲಯದಲ್ಲಿ ಜನರಿರುತ್ತಾರೆ, ಬೆಳಿಗ್ಗೆ ಮೂರು ಗಂಟೆಗೆ ಬಂದರೂ ಭಕ್ತರು ಇರುತ್ತಾರೆ.
ಮಾಲೂರಿನಲ್ಲಿ ಅಂಗಡಿ ಕಳ್ಳತನವೂ ಕಡಿಮೆ
ಮಹಾನಗರ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಮಾಲೂರು ಪಟ್ಟಣದಲ್ಲಿ ವ್ಯಾಪಾರ ವಹಿವಾಟಿಗೇನು ಕಡಿಮೆ ಇಲ್ಲ. ಜೊತೆಗೆ ಮಾಲೂರಿನ ಬೀದಿಬದಿ ವ್ಯಾಪಾರಿಯಿಂದಿಡಿದು ಚಿನ್ನದ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು ಎಲ್ಲರೂ ತಮ್ಮ ಅಂಗಡಿಯ ಬಾಗಿಲು ತೆರೆಯುವ ಮುನ್ನ ಅಂಗಡಿ ಬೀಗದ ಕೈ ಅನ್ನು ಮಾರಿಕಾಂಬಾ ದೇವಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಆನಂತರ ತಮ್ಮ ತಮ್ಮ ಅಂಗಡಿಗಳ ಬಾಗಿಲು ತೆರೆಯುತ್ತಾರೆ. ಹಾಗಾಗಿಯೇ ಮಾಲೂರು ಪಟ್ಟಣದಲ್ಲಿ ಅಂಗಡಿ ಕಳ್ಳತನ ಪ್ರಕರಣಗಳು ಅಪರೂಪದಲ್ಲಿ ಅಪರೂಪ ಎನ್ನಲಾಗುತ್ತದೆ.
ಮಾರಿಕಾಂಬ ದೇವಿ ಮಾಲೂರಿನ ಆರಾಧ್ಯ ದೈವ, ಊರ ದೇವತೆ. ತಮ್ಮನ್ನು ಪೊರೆಯುತ್ತಿರುವ ದೈವ ಮಾರಿಕಾಂಬ ಎಂದೇ ಇಲ್ಲಿನ ಜನರು ನಂಬಿದ್ದಾರೆ. ಹೀಗಾಗಿ ಪಟ್ಟಣದ ಯಾವುದೇ ಮಕ್ಕಳಿಗೆ ಜ್ವರ, ದಡಾರ, ಮಕ್ಕಳು ರಚ್ಚೆಹಿಡಿಯುವುದು, ನಿದ್ರೆಯಲ್ಲಿ ಬೆಚ್ಚಿ ಬೀಳುವುದು ಸೇರಿದಂತೆ ಬಾನಾಮತಿಯಂಥ ಸಮಸ್ಯೆಗಳಿದ್ದರೆ ದೇವಾಲಯಕ್ಕೊಮ್ಮೆ ಬಂದು ಇಲ್ಲಿನ ತೀರ್ಥ ಕುಡಿದು, ಕುಂಕುಮವನ್ನು ಹಣೆಗೆ ಹಚ್ಚುತ್ತಾರೆ. ಆಶ್ಚರ್ಯ ಎಂಬಂತೆ ಸಮಸ್ಯೆಗಳೂ ಪರಿಹಾರ ಕಂಡಿರುತ್ತವೆ. ಇಂಥ ಹಲವು ಪವಾಡಗಳ ತಾಣವಾಗಿ ಮಾಲೂರಿನ ಮಾರಿಕಾಂಬ ದೇಗುಲ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.