ರೈತರಿಂದ ನೇರ ಬೆಳೆ ಖರೀದಿಸಿ, ತಮ್ಮ ಕ್ಷೇತ್ರಕ್ಕೆ ಹಂಚುತ್ತಿರುವ ಮಾಲೂರು ಶಾಸಕ
ಕೋಲಾರ, ಏಪ್ರಿಲ್ 10: ಲಾಕ್ ಡೌನ್ ನಿಂದಾಗಿ ರೈತರು ತಾವು ಬೆವರು ಸುರಿಸಿ ಬೆಳೆದ ಬೆಳೆಗೆ ಸರಿಯಾದ ಬೆಲೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದಾಗ, ರೈತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ತಾವೇ ರೈತರಿಂದ ಬೆಳೆ ಖರೀದಿಗೆ ಮುಂದಾಗಿದ್ದಾರೆ.
Recommended Video
ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಬೆಳೆಯನ್ನು ರೈತರಿಗೆ ನಷ್ಟವಾಗದ ರೀತಿ ಶಾಸಕರೇ ತಮ್ಮ ಸ್ವಂತ ಹಣದಿಂದ ಖರೀದಿ ಮಾಡಿ, ಅದನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರ ಕುಟುಂಬಗಳಿಗೆ ವಿತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಸಂಕಷ್ಟದಲ್ಲಿದ್ದ ಚನ್ನಪಟ್ಟಣ ರೈತನ ಫಸಲು ಖರೀದಿಸಿದ ಸಂಸದ ಡಿ.ಕೆ.ಸುರೇಶ್
ರೈತರಿಗೂ ತಾವು ಬೆಳೆದ ಬೆಳೆಯಿಂದ ನಷ್ಟವಾಗದಂತೆ ನೋಡಿಕೊಳ್ಳುವುದು, ಜೊತೆಗೆ ತಮ್ಮ ಕ್ಷೇತ್ರದ ಕಡು ಬಡವರು, ಕೂಲಿ ಕಾರ್ಮಿಕರು ಯಾರೂ ಹಸಿವಿನಿಂದ ನರಳದಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶವಂತೆ. ಶಾಸಕ ಕೆ.ವೈ.ನಂಜೇಗೌಡ ತಾವೇ ರೈತರ ತೋಟಗಳಿಗೆ ಹೋಗಿ, ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿ ಅವರು ಬೆಳೆದ ಬೆಳೆಗಳನ್ನು ತಾವೇ ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕ್ಷೇತ್ರದ ಜನರ ನೆರವಿಗೆ ನಿಂತಿದ್ದಾರೆ.