ಕೋಲಾರದಲ್ಲಿ ಕೊರೊನಾ ಆತಂಕ ತಂದ ಮಹಾರಾಷ್ಟ್ರ ವೃದ್ಧನ ಸಾವು
ಕೋಲಾರ, ಮೇ 19: ಐವತ್ತು ದಿನಗಳ ಕಾಲ ಜಿಲ್ಲಾಧಿಕಾರಿ ಸತ್ಯಭಾಮ ಅವರ ಪರಿಶ್ರಮದಿಂದ ಕೊರೊನಾಮುಕ್ತವಾಗಿತ್ತು ಕೋಲಾರ ಜಿಲ್ಲೆ. ಆದರೆ ಏಳು ದಿನಗಳ ಹಿಂದೆ ಜಿಲ್ಲೆಗೆ ಕಾಲಿಟ್ಟ ಕೊರೊನಾ ತನ್ನ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಸಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 9 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮುಳಬಾಗಿಲು ತಾಲೂಕಿನಲ್ಲಿ 6, ಮಾಲೂರು ತಾಲೂಕಿನಲ್ಲಿ ಒಂದು, ಕೆಜಿಎಫ್ ತಾಲೂಕಿನಲ್ಲಿ 2 ಹಾಗೂ ಕೋಲಾರ ನಗರದಲ್ಲಿ ಒಂದು ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಕೊರೊನಾ ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳು ಹಾಗೂ ಕೆಲಸ ಮಾಡುವ ಸ್ಥಳಗಳನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ ಗೆ ಸೇರಿಸಿ, ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.
ಶಿವಮೊಗ್ಗ, ಹಾಸನ ಬಳಿಕ ಕೋಲಾರ ಜಿಲ್ಲೆಗೆ ಅಪ್ಪಳಿಸಿದ ಕೊರೊನಾ
ಈ ನಡುವೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮತ್ತೊಂದು ಆತಂಕ ಸೃಷ್ಟಿಸುವ ಘಟನೆ ಜರುಗಿದೆ. ಮೂರು ದಿನಗಳ ಹಿಂದಷ್ಟೇ ಮಾಲೂರಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ 60 ವರ್ಷದ ವೃದ್ಧನೊಬ್ಬ ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಈ ಸಂಗತಿ ವೈದ್ಯರ ನಿದ್ದೆಗೆಡಿಸಿದೆ. ಚಿಕ್ಕಬಳ್ಳಾಪುರ ಮೂಲದ ಲಾರಿ ಡ್ರೈವರ್ ಜೊತೆಯಲ್ಲಿ ತರಕಾರಿ ಲಾರಿಯಲ್ಲಿ ಮಹಾರಾಷ್ಟ್ರದಿಂದ ಈ ವೃದ್ಧ ಮಾಲೂರಿಗೆ ಬಂದಿದ್ದನು.
ಇದ್ದಕ್ಕಿದ್ದಂತೆ ಆರೋಗ್ಯ ಕೆಟ್ಟು, ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಂತೆ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾನೆ. ಈ ಒಂದು ಸಂಗತಿ ಜಿಲ್ಲೆಯಲ್ಲಿ ಆತಂಕ ತಂದಿದೆ. ಮೃತ ವೃದ್ಧನ ಗಂಟಲು ದ್ರವ ಹಾಗೂ ಆತನ ಸಂಪರ್ಕದಲ್ಲಿದ್ದ ಚಾಲಕನ ಗಂಟಲು ದ್ರವವನ್ನು ಸಹ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಮಾಲೂರು ಆಸ್ಪತ್ರೆಯ ಆವರಣವನ್ನು ಸೋಂಕು ನಿವಾರಕದಿಂದ ಸಿಂಪಡಣೆ ಮಾಡಲಾಗುತ್ತಿದ್ದು, ಹೊಸಬರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.