ಕೋಲಾರದಲ್ಲಿ ಮುನಿಯಪ್ಪಗೆ ಹೀನಾಯ ಸೋಲು, ಅರಳಿದ ಕಮಲ
ಕೋಲಾರ, ಮೇ 23: ಕೇಂದ್ರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ನ ಸಂಸದ ಕೆ. ಎಚ್. ಮುನಿಯಪ್ಪ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಭಾರಿ ಅಘಾತ ಅನುಭವಿಸಿದ್ದಾರೆ.
ಮತ್ತೆ ಲೋಕಸಭೆಗೆ ಆಯ್ಕೆಯಾಗುವ ಉತ್ಸಾಹದಲ್ಲಿದ್ದ ಅವರಿಗೆ ಸೋಲುಂಟಾಗಿದೆ. ಅವರ ಎದುರಾಳಿ ಬಿಜೆಪಿಯ ಎಸ್. ಮುನಿಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದ ಎಸ್. ಮುನಿಸ್ವಾಮಿ, ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರೂ ಆಗಿದ್ದ ಮುನಿಯಪ್ಪ ಅವರನ್ನು ಸೋಲಿಸಿದ್ದು ಭಾರಿ ಅಚ್ಚರಿ ಮೂಡಿಸಿದೆ. ಇದೇ ಮೊದಲ ಬಾರಿಗೆ ಕೋಲಾರದಲ್ಲಿ ಕಮಲ ಅರಳಿದೆ.
ಇಲ್ಲಿಯವರೆಗೆ ನಡೆದ 16 ಚುನಾವಣೆಗಳಲ್ಲಿ 15 ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. 1984ರಲ್ಲಿ ಒಂದು ಬಾರಿ ಮಾತ್ರ ಜನತಾಪಕ್ಷದ ವಿ. ವೆಂಕಟೇಶ್ ಗೆಲುವು ಸಾಧಿಸಿದ್ದರು. ವಿ. ಮುನಿಯಪ್ಪ ಅವರು ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು.
2011ರ ಜನಗಣತಿ ಪ್ರಕಾರ ಕೋಲಾರ ಜಿಲ್ಲೆಯ ಜನಸಂಖ್ಯೆ 15.30 ಲಕ್ಷ ಆಗಿತ್ತು. ಕೋಲಾರ ಲೋಕಸಭಾ ಕ್ಷೇತ್ರದ 2014ರ ಮತದಾರರ ಸಂಖ್ಯೆ ಅಂದಾಜು 12 ಲಕ್ಷವಿತ್ತು.