ಲಾಕ್ ಡೌನ್: ಹಸಿದವರ ನೆರವಿಗೆ ಬಂದ ಯುವ ಫೌಂಡೇಶನ್
ಕೋಲಾರ, ಏಪ್ರಿಲ್ 19: ಕೊರೊನಾ ವೈರಸ್ ಮಹಾಮಾರಿ ರೋಗವು ಇಡೀ ವಿಶ್ವವನ್ನು ಥರ ಥರವಾಗಿ ಹಿಂಸಿಸುತ್ತಿದೆ, ಕೊರೊನಾ ಕಾಟಕ್ಕೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈ ಕೊರೊನಾ ವೈರಸ್ ನಿಂದ ಮಹಾಮಾರಿಯಿಂದ ಪಾರಾಗಲು ಸರ್ಕಾರ ಲಾಕ್ಡೌನ್ ಮಾಡಿ ಜನರನ್ನು ರಾತ್ರೋ ರಾತ್ರಿ ಮನೆಯಲ್ಲಿ ಕೂಡಿಹಾಕಿಬಿಟ್ಟಿತ್ತು.
ಸರ್ಕಾರದ ಇಂತಹದೊಂದು ನಿರ್ಧಾರದಿಂದ ಜನರು, ಅಬ್ಬಾಬ್ಬಾ ನಾವೆಲ್ಲಾ ಕೊರೊನಾ ವೈರಸ್ ಸೋಂಕಿನಿಂದ ಜೀವ ಉಳಿಸಿಕೊಂಡೆವು ಎಂದು ಅದೆಷ್ಟೋ ಜನ ನಿಟ್ಟುಸಿರು ಬಿಟ್ಟರೆ, ಅಯ್ಯೋ ನಾಳೆ ನಮ್ಮ ಹೊಟ್ಟೆ ಪಾಡೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತವರು ಅದೆಷ್ಟೋ ಜನ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವೇನಾದರೂ ಮಾಡಲೇಬೇಕೆಂದು ನಿರ್ಧರಿಸಿದ ಯುವಕರ ತಂಡವೊಂದು, ಹಸಿವಿನಿಂದ ತಮ್ಮ ಬಾಗಿಲು ಹಾಕಿ ಕುಳಿತಿದ್ದವರ ಮನೆ ಬಾಗಿಲು ತಟ್ಟಿತು. ಹಸಿದವರಿಗೆ ತುತ್ತು ಅನ್ನವನ್ನಾದರೂ ನೀಡೋಣ ಎಂದು ನಿರ್ಧರಿಸಿ ಹೊರಟಿದ್ದ ಆ ತಂಡ, ಸದ್ದಿಲ್ಲದೆ ಸಾವಿರಾರು ಮಂದಿಯ ಮನೆ ಬಾಗಿಲು ಅನ್ನ ತಲುಪಿಸಿತ್ತು.
ಪಡಿತರ ಕಿಟ್ ಹಂಚಿಕೆ
ಯುವ ಫೌಂಡೇಶನ್ ಎನ್ನುವ ಯುವಕರ ತಂಡ ಕೊರೊನಾ ವೈರಸ್ ವಿಷಮ ಪರಿಸ್ಥಿತಿಯಲ್ಲಿ "ಯುವ ಅನ್ನದಾನಂ' ಅನ್ನೋ ಘೋಷ ವಾಕ್ಯದೊಂದಿಗೆ ಕೆಲಸ ಆರಂಭಿಸಿತ್ತು.
ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನ, ಈ ಮಾತನ್ನ ನಂಬಿದ್ದ ಯುವ ತಂಡ ಲಾಕ್ ಡೌನ್ ಆಗಿರುವ ಬೆಂಗಳೂರು ನಗರ, ಮೈಸೂರು, ಕೋಲಾರ ಹಾಗೂ ಮುಂಬೈನಲ್ಲಿ ಪೊಲೀಸರ ನೇತೃತ್ವದಲ್ಲಿ ಪ್ರತಿದಿನ ಅಗತ್ಯವಿದ್ದಷ್ಟು ಪಡಿತರ ಕಿಟ್ ಹಂಚುತ್ತಿದ್ದಾರೆ.
ಮಕ್ಕಳಿಗೆ ಹಾಲು ವಿತರಣೆ
ಬೆಂಗಳೂರಿನ ವೈಟ್ಪೀಲ್ಡ್ನ ಬಡವರ ಕಾಲೋನಿಗಳು, ಮಾರತಹಳ್ಳಿಯ ಹಸಿದವರ ಕಾಲೋನಿಗಳು, ಹಾಗೂ ಕೋಲಾರ ಜಿಲ್ಲೆ ಕೆಜಿಎಫ್ನ ಕೊಟ್ಟೆಪಲ್ಲಿ ಕಾರ್ಮಿಕರ ಕಾಲೋನಿಯ 50 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ನೀಡಿದರು. ಕೊಟ್ಟೆಪಲ್ಲಿ ಕಾಲೋನಿಯಲ್ಲಿ ಕುಡಿಯಲು ಹಾಲಿಲ್ಲದೆ ಬಾಡಿ ಹೋಗಿದ್ದ ಪುಟಾಣಿ ಮಕ್ಕಳಿಗೆ ಕುಡಿಯಲು ಹಾಲು ನೀಡಿತು.
ಬಿಹಾರದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಕೂಲಿಗಾಗಿ ಬಂದಿದ್ದ ಹತ್ತಾರು ಕುಟುಂಬಗಳು ಲಾಕ್ ಡೌನ್ ನಿಂದ ಬೀದಿ ಬದಿಯಲ್ಲೇ ಬದುಕು ಕಟ್ಟಿಕೊಂಡಿದ್ದರು. ಆ ಕುಟುಂಬಗಳಿಗೆ ದಿನಸಿ ನೀಡಲಾಯಿತು.
ಹೊರ ರಾಜ್ಯದ ಕಾರ್ಮಿಕರಿಗೂ ದಿನಸಿ ಕಿಟ್
ಇನ್ನು ನಮ್ಮದೇ ಉತ್ತರ ಕರ್ನಾಟಕದಿಂದ ಕಟ್ಟಡ ಕೆಲಸಕ್ಕಾಗಿ ಬಂದಿದ್ದ ಏಳೆಂಟು ಕುಟುಂಬಕ್ಕೆ ದಿಕ್ಕು ತೋಚದೆ ಕುಂತಾಗ, ದಿನಸಿ ಕಿಟ್ಗಳನ್ನು ಹಿಡಿದು ಯುವ ತಂಡ ಅವರ ಮುಂದೆ ಬಂದು ನಿಂತಿತು.
ಇನ್ನು ಕೈಗಾರಿಕಾ ಪ್ರದೇಶದ ಕೈಗಾರಿಕೆಳಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರಿಗೆ ಯುವ ತಂಡದ ದಿನಸಿ ಕೊಡುವುದಕ್ಕಿಂತ ಸ್ವತಃ ತಾವೇ ಆಹಾರ ತಯಾರಿಸಿ ನೂರಾರು ಮಂದಿಗೆ ಅನ್ನ ಉಣಬಡಿಸುತ್ತಿದ್ದಾರೆ.
ಮಾನವೀಯತೆ ಮೆರೆದ ಯುವ ಫೌಂಡೇಶನ್
ಕೇವಲ ಮನುಷ್ಯರನ್ನಷ್ಟೇ ಅಲ್ಲಾ ಲಾಕ್ ಡೌನ್ ನಿಂದ ಹಸಿವಿನಿಂದ ದಿಕ್ಕುಕಾಣದೆ ಪರಿತಪಿಸುತ್ತಿದ್ದ ಮೂಕ ಪ್ರಾಣಿಗಳ ಕಷ್ಟಗಳಿಗೂ ಸ್ಪಂದಿಸಿದೆ. ನಿತ್ಯ ಬೀದಿ ನಾಯಿಗಳಿಗೆ ಅನ್ನ, ಬ್ರೆಡ್ ನೀಡಲಾಗುತ್ತಿದೆ.
ಹೀಗೆ ಕೊರೊನಾ ಲಾಕ್ ಡೌನ್ ನಿಂದ ಜೀವಕ್ಕೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳದ ಯುವ ತಂಡ, ಹಸಿವಿನಿಂದ ಜೀವ ಉಳಿಸಿಕೊಳ್ಳಲು ಸಂಕಟ ಪಡುತ್ತಿದ್ದವರ ಸಂಕಷ್ಟಕ್ಕೆ ನೆರವಾಗಿರುವ ಯುವ ತಂಡ ಮಾನವೀಯತೆ ಮೆರೆದಿದ್ದಾರೆ.