ಲಾಕ್ಡೌನ್ ಎಫೆಕ್ಟ್: ಮರದಲ್ಲೇ ಕೊಳೆಯುತ್ತಿದೆ ಹಣ್ಣುಗಳ ರಾಜ ಮಾವು
ಕೋಲಾರ, ಜೂನ್ 25: ಹಣ್ಣುಗಳ ರಾಜ ಮಾವಿನ ತವರು ಕೋಲಾರದಲ್ಲಿ ಮಾವು ಮಂಕಾಗಿದ್ದು, ಸೂಕ್ತ ಬೆಲೆ ಇಲ್ಲದೆ ಮಾವಿನ ಹಣ್ಣುಗಳು ಮರದಲ್ಲೇ ಕೊಳೆಯುತ್ತಿವೆ. ರೈತರು ಬೆಲೆ ಇಲ್ಲದೆ ಮಾವಿನ ಹಣ್ಣನ್ನು ಮಾರುಕಟ್ಟೆಗೂ ಹಾಕಲಾಗದೆ, ಮರದಲ್ಲೂ ಬಿಡಲಾಗದೆ ರಸ್ತೆ ಬದಿಯಲ್ಲಿ ತಂದು ಸುರಿಯುತ್ತಿದ್ದಾರೆ. ಮಾವು ಬೆಳೆಗಾರರು ವರ್ಷಕ್ಕೊಂದು ಬೆಳೆಯಲ್ಲಿ ನಷ್ಟ ಅನುಭವಿಸಿ ದಿಕ್ಕು ಕಾಣದಂತಾಗುತ್ತಿದ್ದಾರೆ. ಹೀಗೆ ರಸ್ತೆ ಬದಿಯಲ್ಲಿ ಸುರಿದಿರುವ ರಾಶಿ ರಾಶಿ ಮಾವಿನ ಹಣ್ಣುಗಳು, ಮರದಲ್ಲೇ ಹಣ್ಣಾಗಿ ಕೊಳೆಯುತ್ತಿರುವ ಮಾವಿನ ಹಣ್ಣುಗಳು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಜ್ಯದ ಮಾವಿನ ತವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ.
ಹೀಗೆ ರಸ್ತೆ ಬದಿಯಲ್ಲಿ ಸುರಿದಿರುವ ರಾಶಿ ರಾಶಿ ಮಾವಿನ ಹಣ್ಣುಗಳು, ಮರದಲ್ಲೇ ಹಣ್ಣಾಗಿ ಕೊಳೆಯುತ್ತಿರುವ ಮಾವಿನ ಹಣ್ಣುಗಳು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಜ್ಯದ ಮಾವಿನ ತವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ.
48,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈತರ ಪ್ರಮುಖ ಕಸುಬು ಮಾವು ಬೆಳೆ, ತಾಲ್ಲೂಕೊಂದರಲ್ಲೇ ಸರಿಸುಮಾರು 48,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯುತ್ತಾರೆ. ವಿಶ್ವದಲ್ಲೇ ಎಲ್ಲೂ ಸಿಗದ ವಿವಿಧ ತಳಿಯ ಮಾವು ಇಲ್ಲಿ ಬೆಳೆಯಲಾಗುತ್ತದೆ. ಹಾಗಾಗಿ ಇಲ್ಲಿನ ಮಾವಿನ ಹಣ್ಣನ್ನು ದೇಶ ಹಾಗೂ ವಿದೇಶಗಳಿಗೂ ರಪ್ತು ಮಾಡಲಾಗುತ್ತಿತ್ತು. ಇಂಥ ಮಾವಿನ ತವರಲ್ಲಿ ಈ ವರ್ಷ ಕೊರೊನಾ ತಂದ ಆಘಾತ ಮಾವು ಬೆಳೆದ ರೈತರಿಗೆ ಹಿಂದೆಂದು ಕಾಣದಷ್ಟು ನಷ್ಟ ಉಂಟಾಗಿದೆ.
ಲಾಕ್ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು
ಲಕ್ಷಾಂತರ ರೂಪಾಯಿ ಸಾಲ
ವರ್ಷದೊಂದೇ ಬೆಳೆಯಲ್ಲಿ ಜೀವನ ಸಾಗಿಸುವ ಇಲ್ಲಿನ ರೈತರು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಸಾಕಷ್ಟು ನಿರೀಕ್ಷೆಯಿಂದ ಮಾವನ್ನು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಮಾವಿಗೆ ಕನಿಷ್ಠ ಬೆಲೆಯೂ ಸಿಗದ ಹಿನ್ನೆಲೆ ರೈತರು ಆಘಾತಕ್ಕೊಳಗಾಗಿ ದಿಕ್ಕು ತೋಚದಂತಾಗಿದ್ದಾರೆ. ಮಾವನ್ನು ಮರದಿಂದ ಕೀಳುವುದಾ? ಬೇಡವಾ? ಅನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಇನ್ನು ಈಗಾಗಲೇ ಕಟಾವು ಮಾಡಿರುವ ಕೆಲವರು ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗದೆ ರಸ್ತೆ ಬದಿಯಲ್ಲಿ ಸುರಿದು ಹೋಗಿದ್ದಾರೆ.
ಕೆಜಿ ಮಾವು ಬೆಲೆ 6 ರೂಪಾಯಿ
ಇನ್ನು ಶ್ರೀನಿವಾಸಪುರದಲ್ಲಿ ಅರ್ಧದಷ್ಟು ಮಾವು ಕಟಾವು ಮಾಡಬೇಕಿದೆ. ಆದರೆ ಮಾವಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಸದ್ಯ ಜ್ಯೂಸ್ ಪ್ಯಾಕ್ಟರಿಗಳು ಹಾಗೂ ಪಲ್ಪ್ ಇಂಡಸ್ಟ್ರೀಗಳಿಂದಲೂ ಮಾವನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿವೆ. ಸದ್ಯ ಕೆಜಿ ಮಾವು 6 ರೂಪಾಯಿಗೆ ಪಡೆಯುತ್ತಿರುವ ವರ್ತಕರು, ಮಾವನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಿಲ್ಲ. ಹೊರ ರಾಜ್ಯಗಳಿಂದ ನಿರೀಕ್ಷೆಯಷ್ಟು ಬೇಡಿಕೆ ಇಲ್ಲದೆ ಇಂದು ಬೆಲೆ ಜಾಸ್ತಿ ಆಗುತ್ತದೆ, ನಾಳೆ ಬೆಲೆ ಜಾಸ್ತಿ ಆಗುತ್ತದೆ ಅನ್ನುವ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು ಮಾರುಕಟ್ಟೆ ಎದುರು ನೋಡುತ್ತಿದ್ದಾರೆ.
Recommended Video
ಲಾಕ್ಡೌನ್ನಿಂದ ಮಾವು ಬೆಳೆಗಾರರಿಗೆ ಸಂಕಷ್ಟ
ಅತ್ತ ಮಾರುಕಟ್ಟೆಗೆ ಬಂದ ಮಾವು ಮಾರುಕಟ್ಟೆಯಲ್ಲೇ ಕೊಳೆಯುತ್ತಿದ್ದು, ಮಾವನ್ನು ವ್ಯಾಪಾರಸ್ಥರು ಬೇರೆ ದಾರಿ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಈಗಿರುವ ಬೆಲೆಯಲ್ಲಿ ರೈತರು ಕಟಾವು ಮಾಡುವ ಖರ್ಚು ಸಿಗದಂತಾಗಿದೆ. ಈ ವರ್ಷ ಕೊರೊನಾ ನಡುವೆ ಮಾವು ಬೆಳೆಗಾರರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗಾಗಿ ಸರ್ಕಾರ ಮಾವು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು ಅನ್ನೋದು ವ್ಯಾಪಾರಸ್ಥರು ಹಾಗೂ ರೈತರ ಬೇಡಿಕೆ.
ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ನಿಂದ ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ರೈತ, ವ್ಯಾಪಾರಸ್ಥರು ಎಲ್ಲರೂ ಬೀದಿಗೆ ಬಿದ್ದಿದ್ದು, ವರ್ಷದೊಂದೇ ಬೆಳೆಯಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದವರ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಸರ್ಕಾರ ಅವರ ನೆರವಿಗೆ ಬಂದು ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಹಸ್ತ ಚಾಚಬೇಕಿದೆ.