ಭಾನುವಾರ ಮದ್ಯದಂಗಡಿ ತೆರೆದಿರುತ್ತಾ?; ಅಬಕಾರಿ ಸಚಿವರ ಉತ್ತರ...
ಕೋಲಾರ, ಮೇ 20: ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಭಾನುವಾರವೂ ಸಂಪೂರ್ಣ ಬಂದ್ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಭಾನುವಾರ ಮದ್ಯದಂಗಡಿಗಳನ್ನು ಮುಚ್ಚಬೇಕೇ ಬೇಡವೇ ಎನ್ನುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ. ಭಾನುವಾರ ಮಾತ್ರ ಸಂಪೂರ್ಣ ಬಂದ್ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಆದರೆ ಮದ್ಯದಂಗಡಿಗಳ ಬಂದ್ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಮದ್ಯದ ವ್ಯಾಪಾರ ಕಳೆದ ಒಂದು ವಾರದಂತೆ ಇಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ" ಎಂದು ತಿಳಿಸಿದರು. ಇದೇ ಸಂದರ್ಭ ಕೋಲಾರದಲ್ಲಿ ಕೊರೊನಾ ಪ್ರಕರಣಗಳ ಕುರಿತೂ ಮಾತನಾಡಿದರು.
ಕೋಲಾರದ ಚೆಕ್ ಪೋಸ್ಟ್ ಗಳಲ್ಲಿ ಬಂದೋಬಸ್ತ್
ಕೊರೊನಾ ಸೋಂಕು ಹೊರ ರಾಜ್ಯಗಳಿಂದ ಬರುತ್ತಿರುವುದರಿಂದ ಗಡಿಗಳಲ್ಲಿರುವ ಚೆಕ್ ಪೋಸ್ಟ್ ಗಳನ್ನು ಬಿಗಿಗೊಳಿಸಬೇಕಿದೆ. ಪಕ್ಕದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಈ ಸೋಂಕು ನಮ್ಮ ಜಿಲ್ಲೆಗೂ ಹರಡಿದೆ. ಇದನ್ನು ತಡೆಯಲು ಗಡಿಭಾಗದ ಚೆಕ್ ಪೋಸ್ಟ್ ಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದರು. ಅಂತರ್ ರಾಜ್ಯ ಮಟ್ಟದ ಓಡಾಟಕ್ಕೆ ಲಾಕ್ ಡೌನ್ ಸಡಿಲಿಕೆ ಆಗಿಲ್ಲ. ಈಗ ಅಂತರ್ ಜಿಲ್ಲಾ ಮಟ್ಟದಲ್ಲಿ ಮಾತ್ರ ಆಗಿದೆ. ಮೇ.31 ರ ಸಡಿಲಿಕೆ ಆಗಬಹುದು, ಆದರೆ ಸೋಂಕು ಹರಡುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಭಾರತ ಲಾಕ್ ಡೌನ್ 4.O: ದೇಶದಲ್ಲಿ ಏನಿರುತ್ತೆ ಏನಿರುವುದಿಲ್ಲ?
"ಸೋಂಕಿತರ ಸ್ಥಳಾಂತರದ ಬಗ್ಗೆ ಏನೂ ಗೊತ್ತಿಲ್ಲ"
ಕೊರೊನಾ ಸೋಂಕಿತರನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಯಿಂದ ಇದ್ದಕ್ಕಿದ್ದಂತೆ ಎಸ್ಎನ್ಆರ್ ಆಸ್ಪತ್ರೆಗೆ ಸ್ಥಳಾಂತರಗೊಳಿಸಿರುವ ವಿಚಾರ ನನಗೆ ಗೊತ್ತಿಲ್ಲ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರ್.ಎಲ್.ಜಾಲಪ್ಪ ಆಸ್ಪತ್ರೆಯನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ನಡೆದಿರುವ ರಾಜಕೀಯ ಒತ್ತಡಗಳ ಬಗ್ಗೆ ನನಗೇನೂ ತಿಳಿದಿಲ್ಲ. ಎಸ್ಎಲ್ಆರ್ ಆಸ್ಪತ್ರೆಯಲ್ಲೂ ಉತ್ತಮ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯ ಇದೆ ಎಂದರು.
"ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುವುದು"
ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರು ಅಲ್ಲಲ್ಲಿ ದುರ್ಬಳಕೆಯಾಗುತ್ತಿದ್ದು, ಈ ಸೋರಿಕೆಯನ್ನು ತಡೆಗಟ್ಟಿ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಲು ಸುಪ್ರೀಂಕೋರ್ಟ್ ಅನುಮತಿ
ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರಿನ ಸೋರಿಕೆ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ್ದು, ನೀರನ್ನು ಕಳವು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೆ.ಸಿ.ವ್ಯಾಲಿ ನೀರು ಹರಿವಿನ 100 ಮೀಟರ್ ವ್ಯಾಪ್ತಿಯಲ್ಲಿ ಬೋರ್ವೆಲ್ ಕೊರೆಸುವುದನ್ನು ನಿಷೇಧಿಸಲಾಗಿದೆ ಎಂದರು.
ನೀರಿನ ಹರಿವಿಗೆ ಅಡ್ಡಿಯಾಗಿರುವ ಚೆಕ್ ಡ್ಯಾಂಗಳು
ಕೆ.ಸಿ. ವ್ಯಾಲಿ ನೀರು ಹರಿವಿನ ಕಡೆಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದು, ಈ ಚೆಕ್ ಡ್ಯಾಂಗಳು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿರುವುದರಿಂದ, ಈ ಚೆಕ್ ಡ್ಯಾಂಗಳಿಗೆ ವಾಲ್ವ್ ಗಳನ್ನು ನಿರ್ಮಿಸಿ 2 ಅಡಿ ಮಾತ್ರ ಸಂಗ್ರಹಣೆ ಮಾಡಿ ನೀರನ್ನು ಮುಂದಕ್ಕೆ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗ 260 ಎಂ.ಎಲ್.ಡಿ ನೀರು ಬರುತ್ತಿದ್ದು ಸೆಪ್ಟೆಂಬರ್ ವೇಳೆಗೆ 400 ಎಂ.ಎಲ್.ಡಿ ನೀರು ಹರಿಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್. ವೆಂಕಟೇಶ್ ಅವರು ಉಪಸ್ಥಿತರಿದ್ದರು.