ಕೋಲಾರದಲ್ಲಿ ಡಿಕೆಶಿ ವಿರುದ್ಧ ಗುಡುಗಿದ ಈಶ್ವರಪ್ಪ
ಕೋಲಾರ, ಏಪ್ರಿಲ್ 27: "ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವುದನ್ನು ತೋರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಹೀಗೆ ನಾಟಕ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಜನ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಇದ್ದಾರೆ. ಡಿ.ಕೆ.ಶಿವಕುಮಾರ್ ಆರೋಪದಲ್ಲಿ ಹುರುಳಿಲ್ಲ" ಎಂದು ಕಿಡಿಕಾರಿದ್ದಾರೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ.
ಕೋಲಾರದಲ್ಲಿ ಇಂದು ಮಾತನಾಡಿದ ಅವರು, "ಕೊರೊನಾ ವಿಚಾರದಲ್ಲಿ ಡಿಕೆಶಿ ಬಹಳ ನಾಟಕ ಆಡುತ್ತಿದ್ದಾರೆ. ಇಷ್ಟು ದಿನ ಈಶ್ವರಪ್ಪ ಎಲ್ಲಿ ಮಲಗಿದ್ದಾರೆ ಎಂದು ಕೇಳುವ ಡಿಕೆಶಿ ಅವರು ಇಷ್ಟು ದಿನ ಎಲ್ಲಿ ಮಲಗಿದ್ರು ಅಂತ ಗೊತ್ತಿದೆ. ನಾನು ಅಲ್ಪ ಸಂಖ್ಯಾತರ ಪರವಾಗಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಎಂದೂ ಕೋಮು ಭಾವನೆ ಸೃಷ್ಟಿಸಲು ಬಿಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭ ನರೇಗಾ ಕಾಮಗಾರಿ ಕುರಿತು ಮಾತನಾಡಿ, "ರಾಜ್ಯ ಸರ್ಕಾರದ ವಿರುದ್ಧ ರಾಜ್ಯದ ಕೇಂದ್ರ ಸಚಿವರು ದೂರು ಕೊಟ್ಟಿರುವುದು ತಪ್ಪು. ಜನರಿಗೆ ನೆರವಾಗುವಂಥ ನರೇಗಾ ಕಾಮಗಾರಿ ನಿಲ್ಲಿಸುವಂತೆ ಮನವಿ ನೀಡಿದ್ದು ತಪ್ಪು. ಪ್ರಧಾನಿ ಮೋದಿ ಅವರೇ ಕಾಮಗಾರಿ ನಡೆಸಲು ಸೂಚಿಸಿದ್ದಾರೆ. 1861 ಕೋಟಿ ಹಣ ನರೇಗಾ ಕಾಮಗಾರಿಗೆ ಬಂದಿದೆ. ಯಾರೊ ಒಬ್ಬರು ಹೇಳಿದರೆಂದು ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.