ಕೋಟಿಲಿಂಗೇಶ್ವರ ದೇವಾಲಯ ಕಾರ್ಯದರ್ಶಿ ಮೇಲೆ ತಲ್ವಾರ್ ನಿಂದ ಹಲ್ಲೆ
ಕೆಜಿಎಫ್, ಅಕ್ಟೋಬರ್ 17: ಇಲ್ಲಿನ ಕಮ್ಮಸಂದ್ರದಲ್ಲಿರುವ ಕೋಟಿ ಲಿಂಗೇಶ್ವರ ದೇವಾಲಯ ಕಚೇರಿ ಹಿಂಭಾಗ ಭಾನುವಾರ ರಾತ್ರಿ ಕಾರ್ಯದರ್ಶಿ ಕುಮಾರಿ ಅವರ ಮೇಲೆ ಸಂತೋಷ್ ಎಂಬಾತ ತಲ್ವಾರ್ ನಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಕುಮಾರಿ ಅವರಿಗೆ ಬೆಮಲ್ ನಗರದ ಸಂಭ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಹಿಂದಿನ ಅವಧಿಯಲ್ಲಿ ಕುಮಾರಿ ಅವರು ಕಮ್ಮಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಗಿದ್ದರು. ಆಗ ಸಂತೋಷ್ ತಂದೆ ವೆಂಕಟೇಶ್ ಗೋಕುಂಟೆ ಕಾಮಗಾರಿಯೊಂದನ್ನು ಮಾಡಿದ್ದರು. ಅದರ ಗುಣಮಟ್ಟ ಸರಿಯಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದ್ದರಿಂದ ಅದರ ಬಿಲ್ ಬಿಡುಗಡೆ ಆಗಿರಲಿಲ್ಲ.[ಆರೋಪಿಯಿಂದ ಹಣ ಪೀಕಿ, ಬಿಟ್ಟು ಕಳಿಸಿದ ಹೆಡ್ ಕಾನ್ಸ್ಟೇಬಲ್!]
ಆ ಮೊತ್ತ ಆರು ಲಕ್ಷ ರುಪಾಯಿಯಷ್ಟಿತ್ತು. ಆ ನಂತರ ಬಿಲ್ ಬಿಡುಗಡೆ ಆಗಿದ್ದರೂ ಅದಕ್ಕೆ ಕುಮಾರಿ ಅವರು ತಡೆಯೊಡ್ಡಿದ್ದರು ಎಂಬ ಸಿಟ್ಟಿತ್ತು. ಆ ಘಟನೆ ನಂತರ ವೆಂಕಟೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಣ ಪಡೆಯುವುದಕ್ಕಾಗಿ ಸಂತೋಷ್ ಕೂಡ ಯತ್ನಿಸುತ್ತಿದ್ದ. ಆದರೆ ಆ ಹಣ ಕುಮಾರಿ ಅವರ ಬಳಿಯೇ ಇದೆ, ಬೇನಾಮಿ ಹೆಸರಿನಲ್ಲಿ ಹಣ ಪಡೆದಿದ್ದಾರೆ ಎಂದು ಅಂದುಕೊಂಡಿದ್ದ ಸಂತೋಷ್.[ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಏಳು ಮಂದಿ ಬಂಧನ]
ಆ ಸಿಟ್ಟಿನಿಂದ ಭಾನುವಾರ ರಾತ್ರಿ 8.30ರ ವೇಳೆಗೆ ಕೋಟಿ ಲಿಂಗೇಶ್ವರ ದೇವಾಲಯದ ಕಚೇರಿ ಹಿಂಭಾಗ ಕಾರ್ಯದರ್ಶಿ ಕುಮಾರಿ ಅವರ ಮೇಲೆ ಸಂತೋಷ್ ತಲ್ವಾರ್ ನಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.