ಕೋಲಾರಕ್ಕೆ ನೀರು ಹರಿಸಲು ಅಟಲ್ ಭೂಜಲ್ ಯೋಜನೆ ಜಾರಿ
ಕೋಲಾರ, ಮಾರ್ಚ್ 9: ದೇಶದ ಪ್ರತಿಯೊಂದು ಮನೆಮನೆಗೂ ಅಗತ್ಯ ಕುಡಿಯುವ ನೀರನ್ನು ಪೂರೈಸಲು ಹಾಗೂ ಅಂತರ್ಜಲ ಮಟ್ಟವನ್ನು ವೃದ್ದಿಸಲು ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ಅವರು ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತರ್ಜಲ ಜನಜಾಗೃತಿ ಅಭಿಯಾನ ಯೋಜನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳು
ಸಂಸದನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಪ್ರಧಾನಿಯನ್ನು ಭೇಟಿ ಮಾಡಿದಾಗ ಕೋಲಾರ ಜಿಲ್ಲೆಯ ರೈತರಿಗೆ ನೀರು ಕೊಡಿ ಎಂದು ಮನವಿ ಮಾಡಿದ್ದೆ. ಈ ಅಟಲ್ ಭೂಜಲ ಯೋಜನೆಗೆ ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಆಯ್ಕೆಯಾಗಿವೆ ಎಂದರು.
ಅಟಲ್ ಭೂ ಜಲ ಯೋಜನೆಗೆ 6 ಸಾವಿರ ಕೋಟಿ ರೂಪಾಯಿ ನಿಗದಿಯಾಗಿದ್ದು. 3 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರದಿಂದ ಹಾಗೂ 3 ಸಾವಿರ ಕೋಟಿ ರೂಪಾಯಿ ವಿಶ್ವ ಬ್ಯಾಂಕ್ ನಿಂದ ಅನುದಾನ ನೀಡಿರುತ್ತದೆ. ಈ ಯೋಜನೆಗೆ ಭಾರತದ 7 ರಾಜ್ಯಗಳನ್ನು ಗುರುತಿಸಿದ್ದು ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಲಾಗಿದೆ ಎಂದರು.
ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ
ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದರಂತೆಯೇ ಎತ್ತಿನ ಹೊಳೆ ಯೋಜನೆಗೆ 1500 ಕೋಟಿ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಕೆ ಜಿ ಎಫ್ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಬೋರ್ವೆಲ್ ಕೊರೆಸಿದ್ದು 3-4 ಇಂಚಿನಷ್ಟು ನೀರು ಸಿಗುತ್ತಿದ್ದು ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಎಂದರು.
ಕೋಲಾರವು ರೇಷ್ಮೆ, ಹಾಲು, ಚಿನ್ನಕ್ಕೆ ಪ್ರಸಿದ್ಧಿಯಾಗಿದೆ ಅದರಂತೆಯೇ ಮುಂದಿನ ದಿನಗಳಲ್ಲಿ ಕೆ ಜಿ ಎಫ್ ಗಣಿ ಪುನರಾರಂಭ ಆಗುತ್ತದೆ. ಬಿ.ಜಿ.ಎಂ.ಎಲ್ ನ 900 ಎಕರೆ ಪ್ರದೇಶದಲ್ಲಿ ಟೈಕ್ಸ್ ಟೈಲ್ಸ್ ಕೈಗಾರಿಕೆಯನ್ನು ಪ್ರಾರಂಭಿಸಲು ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಉಪಯುಕ್ತವಾಗುವ ಗಿಡಗಳನ್ನು ನೆಡುವಂತೆ ಕರೆ
ಜಿಲ್ಲೆಯಲ್ಲಿ ನೀಲಗಿರಿ ಬೆಳೆಯನ್ನು ತೆಗೆದು ಉಪಯುಕ್ತವಾಗುವ ಗಿಡಗಳನ್ನು ನೆಡುವಂತೆ ರೈತರಿಗೆ ಸೂಚಿಸಿ ಈ ಅಟಲ್ ಭೂಜಲ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಶ್ರೀನಿವಾಸ ಗೌಡ ಅವರು ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 4,840 ಕೆರೆಗಳು ಇದ್ದವು, ಈ ಕೆರೆಗಳನ್ನು ಮುಂದಾಲೋಚನೆಯಿಂದ ನಿರ್ಮಿಸಿರುವ ನಮ್ಮ ಪೂರ್ವಜರನ್ನು ನೆನಪಿಸಕೊಳ್ಳಬೇಕು ನಾವು ಬದುಕಿರುವುದು ಕೆರೆಗಳಿಂದಲೇ, ಹಿಂದಿನ ಕಾಲದಲ್ಲಿ 10 ಅಡಿಯಲ್ಲಿ ನೀರು ಸಿಗುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಸು 1200 ರಿಂದ 1500 ಅಡಿಗಳಷ್ಟು ಆಳದಿಂದ ನೀರು ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆ.ಸಿ ವ್ಯಾಲಿ ನೀರು ಜಿಲ್ಲೆಗೆ ವರದಾನವಾಗಿದೆ
ಕೆ.ಸಿ ವ್ಯಾಲಿ ನೀರು ಜಿಲ್ಲೆಗೆ ವರದಾನವಾಗಿದೆ. ರೈತರು ಈ ದೇಶದ ಬೆನ್ನೆಲುಬು. ಆದರೆ ರೈತರ ಬದುಕು ಇಂದಿನ ದಿನಗಳಲ್ಲಿ ಕಷ್ಟಕರವಾಗಿದೆ. ಕೆ.ಸಿ ವ್ಯಾಲಿ ನೀರು ಜಿಲ್ಲೆಯ ಪ್ರತಿಯೊಂದು ಕೆರೆಗೆ ತುಂಬಲು ಅನುವು ಮಾಡಿಕೊಡಬೇಕು ಎಂದರು.
ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾರಗೋಳ್ ಡ್ಯಾಂ ನಿರ್ಮಾಣಕ್ಕೆ 155 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ ಅಡಿಪಾಯ ಹಾಕಿಸಿದ್ದೆ, ಡ್ಯಾಂನಲ್ಲಿ ಈಗಾಗಲೇ 5 ಅಡಿ ನೀರು ಶೇಖರಣೆಯಾಗಿದೆ. ಮುಂದಿನ ಮೂರು ತಿಂಗಳಲ್ಲಿ ಡ್ಯಾಂ ಪೂರ್ಣವಾಗುತ್ತದೆ. ಈ ಯೋಜನೆಯು ಅನುಷ್ಠಾನವಾಗಿ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ತಾಲ್ಲೂಕಿನ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ಕೆರೆಗಳು ಅಭಿವೃದ್ಧಿಯಾಗಬೇಕು
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ಮಾತನಾಡಿ, ಜಿಲ್ಲೆಯ ಕೆರೆಗಳು ಅಭಿವೃದ್ಧಿಯಾಗಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು. ಕೆರೆಗಳಲ್ಲಿ ಇರುವ ಜಾಲಿಗಿಡ, ಬಳ್ಳಾರಿ ಜಾಲಿಗಿಡಗಳಂತಹ ಕಳೆಗಳನ್ನು ತೆರವುಗೊಳಿಸಬೇಕು ಎಂದರು.
ಅಧಿಕಾರದಲ್ಲಿದ್ದಾಗ ಜನಪ್ರತಿನಿಧಿಗಳು ಮಾಡಿರುವ ಕೆಲಸಗಳೇ ಅವರ ಬಗ್ಗೆ ಹೇಳುತ್ತವೆ. ಕೆ ಸಿ ವ್ಯಾಲಿ ಯೋಜನೆಯನ್ನು ಜಾರಿಗೆ ತಂದಂತಹ ಜನಪ್ರತಿನಿಧಿಗಳನ್ನು ನೆನಪಿಸಕೊಳ್ಳಬೇಕು. ಮೊದಲ ಹಂತದಲ್ಲಿ 126 ಕೆರೆಗಳನ್ನು ತುಂಬಿಸುವ ಯೋಜನೆ ಇದ್ದು ಈಗಾಗಲೇ 51 ಕೆರೆಗಳು ಹಾಗೂ 93 ಚೆಕ್ಡ್ಯಾಂಗಳು ತುಂಬಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿವೆ ಯೋಜನೆಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ನೀರನ್ನು ಮಿತವಾಗಿ ಬಳಸಬೇಕು
ಬೆಂಗಳೂರು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರಾದ ಬಿ.ಟಿ ಕಾಂತರಾಜ್ ಅವರು ಮಾತನಾಡಿ, ಅಟಲ್ ಭೂಜಲ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯೋಜನೆಯು ಕಾರ್ಯನಿರ್ವಹಿಸುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ, ರೈತರಿಗೆ ಈ ಯೋಜನೆ ಬಗ್ಗೆ ತಿಳಿಸಲು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕೋಲಾರ ಜಿಲ್ಲೆಯಲ್ಲಿ ವಾರ್ಷಿಕವಾರು 700 ಎಂಎಂ ಮಳೆಯಾಗುತ್ತಿದ್ದು ರಾಜ್ಯದಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವುದು ಕೋಲಾರ ಜಿಲ್ಲೆಯಾಗಿದೆ. ಕಾರಣ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳು ಇಲ್ಲ. ಜಿಲ್ಲೆಯಲ್ಲಿ ಬಿದ್ದ ಮಳೆಯನ್ನ ರೈತರು ಉಪಯೋಗಿಸಿಕೊಳ್ಳುತ್ತಿದ್ದಾರೆ. ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದರು.