ಬೌನ್ಸರ್ ವಶಕ್ಕೆ: ಟ್ವಿಸ್ಟ್ ಪಡೆದುಕೊಂಡ ವರ್ತೂರು ಪ್ರಕಾಶ್ ಅಪಹರಣ ಕೇಸ್!
ಬೆಂಗಳೂರು, ಡಿ. 05: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ಒಬ್ಬನ ಬಂಧನವಾಗಿದ್ದು, ಕೋಲಾರ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂದಿರುಗುವಾಗ ತಮ್ಮನ್ನು ಅಪಹರಿಸಿ ಮೂರು ದಿನಗಳ ಕಾಲ ಗನ್ಪಾಯಿಂಟ್ನಲ್ಲಿ ಕೂಡಿಟ್ಟಿದ್ದರು ಎಂದು ವರ್ತೂರು ಪ್ರಕಾಶ್ ಅವರೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು.
ಬೆಂಗಳೂರಿನ ಬೆಳ್ಳಂದೂರು ಕೆರೆಯ ಸಮೀಪ ಕಾರೊಂದು ಪತ್ತೆಯಾಗಿತ್ತು. ಕಾರು ವಶಪಡಿಸಿಕೊಂಡಿದ್ದ ವೈಟ್ಫೀಲ್ಡ್ ಪೊಲೀಸರಿಗೆ ಪ್ರಾಥಮಿಕ ತನಿಖೆಯ ಬಳಿಕ ಅದು ವರ್ತೂರು ಪ್ರಕಾಶ್ ಅವರಿಗೆ ಸೇರಿದ್ದ ಕಾರು ಎಂಬುದು ತಿಳಿದು ಬಂದಿತ್ತು. ಬಳಿಕ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ ಅಪಹರಣದ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು. ಅದಾದ ಬಳಿಕ ಸ್ವತಃ ವರ್ತೂರು ಪ್ರಕಾಶ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪ್ರಕರಣದ ತನಿಖೆಗೆ ಎರಡು ಪ್ರತ್ಯೇಕ ತಂಡಗಳನ್ನು ಡಿಸಿಪಿ ಡಿ. ದೇವರಾಜ್ ಅವರು ರಚಿಸಿದ್ದರು. ಇದೀಗ ಕೃತ್ಯ ಎಸಗಿದ್ದ ತಂಡದಲ್ಲಿದ್ದ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಡೀ ಪ್ರಕರಣ ತಿರುವು ಪಡೆದುಕೊಂಡಿದೆ.
ಪುತ್ರನಿಂದಲೇ ಅಪಹರಣ ಎನ್ನಲಾಗಿತ್ತು!
ಪುತ್ರನಿಂದಲೇ ವರ್ತೂರು ಪ್ರಕಾಶ್ ಅವರು ಅಪಹರಣ ನಡೆದಿರಬಹುದು ಎನ್ನಲಾಗಿತ್ತು. ಮತ್ತೊಂದೆಡೆ ಹಸು ಖರೀದಿ ಹಾಗೂ ಹಾಲಿನ ಡೈರಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪಹರಣವಾಗಿರಬಹುದು ಎಂದೂ ಶಂಕಿಸಲಾಗಿತ್ತು. ಒಟ್ಟಾರೆ ವರ್ತೂರು ಪ್ರಕಾಶ್ ಅಪಹರಣದ ಇಡೀ ಪ್ರಕರಣ ಗೊಂದಲದಿಂದ ಕೂಡಿತ್ತು. ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣವನ್ನು ಕಾರು ಪತ್ತೆಯಾಗಿದ್ದ ವೈಟ್ಫೀಲ್ಡ್ ಪೊಲೀಸ್ ಠಾಣೆಯಿಂದ ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಕೃತ್ಯದಲ್ಲಿ ಭಾಗಿಯಾಗಿದ್ದ ಒಬ್ಬ ಅಪಹರಣಕಾರನನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದವ ವಶಕ್ಕೆ
ವರ್ತೂರು ಪ್ರಕಾಶ್ ಅವರನ್ನು ಒತ್ತೆಯಿರಿಸಿಕೊಂಡು ಹಣಕ್ಕಾಗಿ ಪೀಡಿಸಿದ್ದರು. ಅದರಿಂದಾಗಿ ವರ್ತೂರು ಪ್ರಕಾಶ್ ಅವರು ಕೋಲಾರದ ತಮ್ಮ ಆಪ್ತರಿಗೆ ನೂರಾರು ಮೊಬೈಲ್ ಕರೆ ಮಾಡಿದ್ದರು. ಉತ್ತನೂರಿನ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಅವರಿಗೆ ನಲವತ್ತು ಬಾರಿ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರಿಗೆ ಸತತ ಮೂರು ದಿನಗಳ ಕಾಲ ಮೊಬೈಲ್ ಕರೆ ಮಾಡಿದ್ದರು. ಅದೇ ದಿಕ್ಕಿನಲ್ಲಿ ತನಿಖೆ ನಡೆಸಿದ್ದ ಕೋಲಾರ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ. ದೂರವಾಣಿ ಕರೆ ಆಧರಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ತಂಡದಲ್ಲಿದ್ದ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಬೌನ್ಸರ್
ಮೂರು ದಿನಗಳ ಕಾಲ ಒತ್ತೆಯಾಳಾಗಿದ್ದ ಕಾಲದಲ್ಲಿ ವರ್ತೂರು ಪ್ರಕಾಶ್ ಅವರ ಮೊಬೈಲ್ ಕರೆ ಆಧರಿಸಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರು ಮೂಲದ ಒಬ್ಬ ಬೌನ್ಸರ್ನನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಅಜ್ಞಾತ ಸ್ಥಳದಲ್ಲಿಟ್ಟು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೆರೆ ಸಿಕ್ಕಿರುವವನಿಂದ ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಉಳಿದವರ ಬಂಧನ ಕೂಡ ಶೀಘ್ರವಾಗಿ ಆಗಲಿದೆ ಎಂಬ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
Recommended Video
ಇನ್ನಿತರ ಆರೋಪಿಗಳಿಗೆ ಬಲೆ
ಹಣಕ್ಕಾಗಿ ನುರಿತ ತಂಡದಿಂದಲೆ ವರ್ತೂರು ಪ್ರಕಾಶ್ ಅವರ ಅಪಹರಣ ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿಯೇ ಬೌನ್ಸರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಅವರಲ್ಲಿ ಒಬ್ಬ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಪತ್ತೆಯಾಗಿದೆ. ಅವನು ನೀಡಿರುವ ಮಾಹಿತಿ ಆಧರಿಸಿ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರೆ ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.