ಶ್ರೀರಾಮ ಕೋಟಿ ಬರೆದು ವ್ರತ ಪೂರ್ಣಗೊಳಿಸುತ್ತಿರುವ ನಿವೃತ್ತ ಮುಸ್ಲಿಂ ಶಿಕ್ಷಕ
ಕೋಲಾರ, ಅಕ್ಟೋಬರ್ 29: ಶ್ರೀರಾಮ ಅಂತ ಒಂದು ಕೋಟಿ ಸಲ ಬರೆದರೆ ರಾಮಕೋಟಿ ವ್ರತ ಪೂರ್ಣವಾಗುತ್ತದೆ. ಶ್ರೀರಾಮ ಎಂದು ಕೋಟಿ ಸಲ ಬರೆದಿರುವ ಇವರು ಧರ್ಮದಲ್ಲಿ ಮುಸಲ್ಮಾನರಾಗಿರುವ ಇವರ ವಯಸ್ಸು 97.
ಕೋಲಾರದ ಈ ಮುಸಲ್ಮಾನ ಅಜ್ಜನ ಶಿಸ್ತು ಮತ್ತು ಧರ್ಮಾತೀತ ಮನಸ್ಥಿತಿ ಎಂಥವರಿಗೂ ಮಾದರಿಯಾಗಿದೆ. ಶ್ರೀರಾಮ ಎಂದು ಕೋಟಿ ಬಾರಿ ಬರೆಯೋದಿಕ್ಕೆ ಇವರ ಶ್ರದ್ಧೆ ಯಥಾಪ್ರಕಾರ ಮುಂದುವರೆದಿದೆ.
ನಿವೃತ್ತ ಕೃಷಿ ಅಧಿಕಾರಿ ಡಾ.ವಿ.ಮುನಿವೆಂಕಟಪ್ಪರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ಪಾಚಾಸಾಬ್ ಅಂದರೆ ಗೊತ್ತಾಗುವುದಿಲ್ಲ. ಆದರೆ, ರಾಮಕೋಟಿ ಬರೆದಿರುವ ಪಾಚಾಜಿ ಮನೆ ಎಲ್ಲಿ ಅಂದರೆ ಮನೆದಾರಿ ತೋರಿಸ್ತಾರೆ. ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಮತ್ತು ಒಂದು ಹಂತಕ್ಕೆ ಶಾಸ್ತ್ರಗಳನ್ನೂ ಹೇಳುವ ಪಂಡಿತ್ ಪಾಚಾಜಿ ಧರ್ಮವನ್ನೂ ಮೀರಿದ ಬಾಂಧವ್ಯವನ್ನು ಬೆಳೆಸಿಕೊಂಡವರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಕ್ತನಾಗಿರುವ 97 ರ ಹರೆಯದ ಪಂಡಿತ್ ಪಾಚಾಜಿ ಇದೀಗ ರಾಮಕೋಟಿಯನ್ನು ಬರೆಯುವ ಮೂಲಕ ಸುದ್ದಿಯಾಗಿದ್ದಾರೆ.
ಮುಸ್ಲಿಂ ಧರ್ಮವನ್ನು ಮರೆತಿಲ್ಲ
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಮೇಲೆ ಇಪ್ಪತ್ತು ವರ್ಷಗಳ ಹಿಂದೆ ಪಾಚಾಸಾಬ್ ಅವರು ಗೆಳೆಯರ ಜೊತೆಗೆ ಭದ್ರಾಚಲಂನಲ್ಲಿರುವ ಶ್ರೀರಾಮನ ಮಂದಿರಕ್ಕೆ ಹೋಗಿದ್ದರು. ಶ್ರೀರಾಮನ ಮಹಿಮೆ ಮತ್ತು ಲೀಲೆಗಳ ಬಗ್ಗೆ ಅಲ್ಲಿನ ಸಂತರೊಬ್ಬರಿಂದ ಕಥೆಯನ್ನು ಕೇಳಿದ ಪಾಚಾಸಾಬ್ ಅಲ್ಲಿಂದ ವಾಪಾಸ್ಸಾಗಿದ್ದೇ ತಡ, ರಾಮಕೋಟಿಯನ್ನು ಬರೆಯುವುದದಿಕ್ಕೆ ಶುರು ಮಾಡಿದರು.
ಏಕಾಗ್ರತೆ ಮತ್ತು ತಾಳ್ಮೆಯನ್ನು ಕಲಿಸಿಕೊಡುವ ರಾಮಕೋಟಿಯ ಬರಹವು ಆರೋಗ್ಯ ಮತ್ತು ಆಯುಸ್ಸನ್ನೂ ಹೆಚ್ಚಿಸುತ್ತದೆ ಅನ್ನುವುದು ಪಾಚಾಸಾಬ್ ಅವರ ಅನುಭವವಾಗಿದೆ. ಶ್ರೀರಾಮನ ನಾಮವನ್ನು ಬರೆಯಲು ಶುರು ಮಾಡಿದ್ದರಿಂದಾಗಿ ಪಾಚಾಸಾಬ್ ಮುಸ್ಲಿಂ ಧರ್ಮವನ್ನು ಮರೆತಿಲ್ಲ. ಮುಸ್ಲಿಂ ಧರ್ಮದ ಎಲ್ಲ ರೀತಿ-ರಿವಾಜುಗಳನ್ನೂ ಅನುಸರಿಸುತ್ತಲೇ ರಾಮಕೋಟಿ ಬರಹ ಮತ್ತು ಶಾಸ್ತ್ರಗಳನ್ನು ಹೇಳುವುದನ್ನು ಪಾಚಾಸಾಬ್ ರೂಢಿಸಿಕೊಂಡಿದ್ದಾರೆ ಅನ್ನೋದು ವಿಶೇಷ. ರಾಮಕೋಟಿಯನ್ನು ಊರಿನ ನೆರೆಯಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗೂ ಬರೆಯಲು ಪಾಚಾಸಾಬ್ ಪ್ರೇರೇಪಿಸುತ್ತಾರೆ.
ಅಯೋಧ್ಯೆಯ ಶ್ರೀರಾಮನ ಸನ್ನಿಧಿಗೆ ತಲುಪಿಸಲು ಸಂಕಲ್ಪ
ಕಳೆದ 20 ವರ್ಷಗಳಿಂದಲೂ ಪಾಚಾಸಾಬ್ ಅವರು ನಡೆಸುತ್ತಿರುವ ಧರ್ಮಕಾಯಕದ ಬಗ್ಗೆ ಊರಿನವರಿಗೆ ಅಭಿಮಾನವಿದೆ. ಒಂದು ಕೋಟಿ ಸಲ ಶ್ರೀರಾಮನ ನಾಮ ಬರೆಯುವುದು ಇದೇ ಆಗಸ್ಟ್ 15 ರಂದು ಮುಕ್ತಾಯವಾಗಿದೆ, ಭದ್ರಾಚಲಂನ ಶ್ರೀರಾಮನ ಮಂದಿರಕ್ಕೆ ಹಸ್ತಪ್ರತಿಗಳನ್ನು ಅರ್ಪಿಸಲು ನಿರ್ಧರಿಸಿದ್ದ ಪಾಚಾಜೀ ಅವರು, ಇದೀಗ ತಮ್ಮ ನಿರ್ಧಾವನ್ನು ಬದಲಾಯಿಸಿ ಅಯೋಧ್ಯೆಯ ಶ್ರೀರಾಮನ ಸನ್ನಿಧಿಗೆ ತಲುಪಿಸಲು ಸಂಕಲ್ಪ ಮಾಡಿದ್ದಾರೆ. ಸಂತ ಕಬೀರದಾಸರ ಬದುಕಿನಿಂದ ಪ್ರೇರಿತಗೊಂಡಿರುವ ಪಾಚಾಸಾಬ್, ಭಕ್ತಿ ಮಾರ್ಗದಿಂದಲೇ ಮೋಕ್ಷ ಸಾಧ್ಯ ಅನ್ನುವುದನ್ನು ನಂಬಿದ್ದಾರೆ. ಪಾಚಾಸಾಬ್ ಅವರ ಸಜ್ಜನಿಕೆ ಮತ್ತು ಧರ್ಮವನ್ನೂ ಮೀರಿದ ಮನುಷ್ಯ ಪ್ರೇಮವು ಜಾತಿ-ಧರ್ಮವೆಂದು ಬಡಿದಾಡುವ ಎಲ್ಲರಿಗೂ ಮಾದರಿಯಾಗಬೇಕಾಗಿದೆ.
ಸ್ವಾತಂತ್ರ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು
ಇನ್ನು ಗ್ರಾಮದಲ್ಲಿ ಒಂದು ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಸಹ ಪಾಚಾಜೀಗಿದೆ. ಗಾಂಧೀಜಿ, ನೆಹರು, ಇಂದಿರಾ ಗಾಂಧಿ, ಕೆ.ಸಿ ರೆಡ್ಡಿ, ಎಂ.ವಿ.ಕೃಷ್ಣಪ್ಪ ಅವರೊಂದಿಗೆ ಒಡನಾಡಿಗಳಾಗಿದ್ದವರು. ಕೆ.ಸಿ.ರೆಡ್ಡಿ ಅವಧಿಯಲ್ಲಿ ಎಲ್ಲೆಡೆ ಮತ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟವರಾಗಿದ್ದು, ಗೋವಾ ಲೋಕಾಸೇವಾದಿಂದ ನಡೆದ ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯ ಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಅದರ ಸವಿ-ನೆನಪುಗಳನ್ನು ಇಂದಿಗೂ ಹಂಚಿಕೊಳ್ಳುತ್ತಾರೆ. ಜೀವನದಲ್ಲಿ ನೆಮ್ಮದಿ ಸಿಕ್ಕಿದೆ, ಆರೋಗ್ಯವಾಗಿದ್ದೇನೆ, ಸಕ್ಕರೆ, ಬಿಪಿ, ಆಗಲಿ ಯಾವುದೇ ಕಾಯಿಲೆ ಇಲ್ಲ, ಬೇರೆ ಹವ್ಯಾಸಗಳು ಇಲ್ಲ, ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎನ್ನುತ್ತಾರೆ. ಇನ್ನು ಪಾಚಾಸಾಬ್ ಅವರೂ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿರುವುದು ಮತ್ತೊಂದು ವಿಶೇಷ ಸಂಗತಿ. ಈಗಾಗಿ ಇವರ ಸ್ನೇಹಿತರಾದ ವೆಂಕಟರಾಮಯ್ಯ, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನು ಕೆಲವರು ಸೇರಿ ಇಂದಿಗೂ ಇವರಿಗೆ ಪಿಂಚಣಿ ಬರುವಂತೆ ಮಾಡಿಕೊಟ್ಟಿದ್ದಾರೆ. ಅವರನ್ನು ಇಂದಿಗೂ ಪಾಚಾಸಾಬ್ ಅವರು ನೆನೆಯುತ್ತಿದ್ದಾರೆ. ಇಂದಿಗೂ ಇವರಿಗೆ ಬರುತ್ತಿರುವ 15 ಸಾವಿರ ರುಪಾಯಿ ಪಿಂಚಣಿ ಹಣದಿಂದಲೇ ಇವರ ಜೀವನ ಸಾಗಿಸುತ್ತಿದ್ದಾರೆ.
Recommended Video
ಮಂದಿರಕ್ಕೆ ಹೋಗಿ ಶ್ರೀರಾಮನ ಜಪ ಮಾಡುತ್ತಾರೆ
97ರ ಇಳಿ ವಯಸ್ಸಿನಲ್ಲೂ ತಮ್ಮ ಹಠ ಬಿಡದ ಸಾಧನೆ ಮಾಡಿರುವ ಪಾಚಾಸಾಬ್ ಅವರು, ಪಾದರಸದಂತೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿರುವುದನ್ನು ಕಂಡರೆ ಯುವಕರನ್ನು ನಾಚಿಸುವುದಂತೂ ಖಂಡಿತ. ಪ್ರತಿದಿನ ಒಂದೂ ಮೈಲಿಯಷ್ಟು ದೂರ ವಾಕಿಂಗ್ ಹೋಗುವ ಇವರಿಗೆ ಯಾವುದೇ ಚಿಕ್ಕಪುಟ್ಟ ಖಾಯಿಲೆ ಇಲ್ಲದೆ ಆರೋಗ್ಯವಾಗಿರುವುದನ್ನು ಕಂಡು ಪ್ರತಿಯೊಬ್ಬರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನಾನು ಆರೋಗ್ಯವಾಗಿರಲು ಕಾರಣ ರಾಮಕೋಟಿ ಬರೆದಿರುವುದೇ ಅನ್ನೋದು ಪಾಚಾಸಾಬ್ ಅವರ ನಂಬಿಕೆ ಕೂಡ. ಸರ್ವಧರ್ಮ ಸಮನ್ವಯದಿಂದ ಹಿಂದೂ, ಮುಸ್ಲಿಂ ಸಮುದಾಯದವರು ಬಾಳಬೇಕು ಅಂತ ಪಾಚಾಸಾಬ್ ಅವರು ಈಗಲೂ ಮಸೀದಿಗೆ ಹೋಗಿ ನಮಾಜ್ ಮಾಡುತ್ತಾರೆ. ಮಂದಿರಕ್ಕೆ ಹೋಗಿ ಶ್ರೀರಾಮನ ಜಪ ಮಾಡುತ್ತಿದ್ದಾರೆ. ಕೋಮು ಸಂಘರ್ಷಗಳ ನಡುವೆ ಪಾಚಾಸಾಬ್ ಅವರ ಜೀವನ ಶೈಲಿ ಮಾದರಿಯಾಗಲಿ, ದೇಶದಲ್ಲಿ ಎಲ್ಲಾ ಧರ್ಮದವರು ಒಂದಾಗಿ ಬಾಳಲಿ ಅನ್ನುವುದು ನಮ್ಮ ಆಶಯ ಕೂಡ.