ಕೋಲಾರ: ಸಿಎಎ-ಎನ್ಆರ್ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟು
ಕೋಲಾರ, ಜನವರಿ 04: ಪೌರತ್ವ ಕಾಯ್ದೆ (ಸಿಎಎ) ಪರವಾಗಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ.
ನಗರದಲ್ಲಿ ಸಿಎಎ ಮತ್ತು ಎನ್ಆರ್ಸಿ ಪರ ಬಿಜೆಪಿ ಬೆಂಬಲಿಗರು ಮತ್ತು ಹಿಂದೂ ಪರ ಸಂಘಟನೆಗಳ ಸದಸ್ಯರು ಮೆರವಣಿಗೆ ಮಾಡಿದರು. ಆದರೆ ಇವರನ್ನು ಅಡ್ಡಗಟ್ಟಿದ ಪೊಲೀಸರು ಲಾಠಿಬೀಸಿ ಗುಂಪು ಚದುರಿ ಚೆಲ್ಲಾ-ಪಿಲ್ಲಿ ಆಗುವಂತೆ ಮಾಡಿದ್ದಾರೆ.
ನಗರದಲ್ಲಿ ಸಾಗಿಬಂದ ಮೆರವಣಿಗೆ ಮುಸ್ಲೀಮರು ಹೆಚ್ಚಿಗಿರುವ ಕ್ಲಾರ್ಕ್ ಟವರ್ ಏರಿಯಾದ ಒಳಗೆ ನುಗ್ಗಲು ಯತ್ನಿಸಿದಾಗ ಅದನ್ನು ತಡೆದ ಪೊಲೀಸರು, ಮೊದಲಿಗೆ ಅವರಿಗೆ ಪರಿಸ್ಥಿತಿಯ ಬಗ್ಗೆ ತಿಳಿಹೇಳುವ ಯತ್ನ ಮಾಡಿದ್ದಾರೆ, ಮೆರವಣಿಗೆಯಲ್ಲಿ ಭಾಗವಹಿಸಿದವರು ಒಪ್ಪದಿದ್ದಾಗ ಅವರ ಮೇಲೆ ಲಾಠಿ ಬೀಸಲಾಗಿದೆ.
ಮೆರವಣಿಗೆಗೆ ಅನುಮತಿ ಕೊಡುವಾಗ ಪೊಲೀಸರು ಬೇರೆಯ ಮಾರ್ಗಕ್ಕೆ ಅನುಮತಿ ಕೊಟ್ಟಿದ್ದರು, ಆದರೆ ಮೆರವಣಿಗೆಯು ಅನುಮತಿ ಪಡೆದ ಮಾರ್ಗದ ಹೊರತಾಗಿ ಬೇರೆ ಮಾರ್ಗದಲ್ಲಿ ಹೋಗುವ ಯತ್ನ ಮಾಡಿದಾಗ ಅವರನ್ನು ತಡೆಯಲಾಗಿದೆ. ಕ್ಲಾರ್ಕ್ ಟವರ್ ಏರಿಯಾಕ್ಕೆ ಹೋಗದಂತೆ ಬ್ಯಾರಿಕೆಡ್ ಗಳನ್ನು ಪೊಲೀಸರು ಹಾಕಿದ್ದರು, ಆದರೆ ಇದನ್ನು ದಾಟುವ ಯತ್ನ ಮಾಡಿದಾಗ ಲಾಠಿ ಬೀಸಿ ಹಿಮ್ಮೆಟ್ಟಿಸಲಾಗಿದೆ.
ಘಟನೆಯನ್ನು ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ, ವೈ.ಎ.ನಾರಾಯಣಸ್ವಾಮಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ಅಮಾನತು ಮಾಡಬೇಕೆಂದು ಬಿಜೆಪಿ ಕಾರ್ಯಕರ್ತರು ಕೆಲ ಕಾಲ ಧರಣಿ ಮಾಡಿದರು.