ಏಳು ಬಾರಿ ಗೆದ್ದಿದ್ದ ಮುನಿಯಪ್ಪಗೆ ಏಳು ಕೆರೆ ನೀರು ಕುಡಿಸಿದ ಬಿಜೆಪಿಯ ಮುನಿಸ್ವಾಮಿ
ಕೋಲಾರ, ಮೇ 23: ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಹಿಂದೆಂದೂ ಕಾಣದ ಇತಿಹಾಸದ ಸೃಷ್ಟಿಸಿದೆ. ಮಾಜಿ ಪ್ರಧಾನಿ, ಸೋಲಿಲ್ಲದ ಸರದಾರರು ಈ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ.
ವಿಶೇಷವೆಂದರೆ ಸ್ವತಂತ್ರ್ಯ ಬಂದಂದಿನಿಂದ ಒಂದೂ ಬಾರಿಯೂ ಗೆಲುವೆಂಬುದನ್ನೇ ಕಾಣದಿದ್ದ ಕ್ಷೇತ್ರಗಳಲ್ಲಿಯೂ ಬಿಜೆಪಿ ಈ ಬಾರಿ ಗೆಲುವು ಸಾಧಿಸಿದೆ. ಅದರಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಕೋಲಾರ ಕ್ಷೇತ್ರದಲ್ಲಿ ದೊರೆತ ಗೆಲುವು.
ಕರ್ನಾಟಕ ಲೋಕಸಭೆ ಚುನಾವಣಾ ಫಲಿತಾಂಶ LIVE: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಮುನ್ನಡೆ
ಕೋಲಾರ ಕ್ಷೇತ್ರದಲ್ಲಿ ಸತತವಾಗಿ ಏಳು ಬಾರಿ ಗೆದ್ದಿದ್ದ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಾರ್ಪೊರೇಟರ್ ಆಗಿದ್ದ ಬಿಜೆಪಿಯ ಎಸ್.ಮುನಿಸ್ವಾಮಿ ಭೀಕರವಾಗಿ ಸೋಲುಣಿಸಿದ್ದಾರೆ. ಸತತ 35 ವರ್ಷದಿಂದ ಕೆ.ಎಚ್.ಮುನಿಯಪ್ಪ ಸೋಲೆಂಬುದನ್ನೇ ಕಂಡಿರಲಿಲ್ಲ.
ಭಾರಿ ಅಂತರದ ಜಯಗಳಿಸಿದ ಮುನಿಸ್ವಾಮಿ
ಮೊದಲ ಬಾರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸಿದ್ದ ಮುನಿಸ್ವಾಮಿ ಭಾರಿ ಅಂತರದಲ್ಲಿ ಅನುಭವಿ ರಾಜಕಾರಣಿಯನ್ನು ಮಣಿಸಿದ್ದಾರೆ. ಮುನಿಸ್ವಾಮಿ ಅವರು 707930 ಮತಗಳಿಸಿದ್ದರೆ ಕೆ.ಎಚ್.ಮುನಿಯಪ್ಪ ಗಳಿಸಿದ್ದು ಕೇವಲ 498259 ಮತಗಳನ್ನು ಮಾತ್ರ.
ಠೇವಣಿ ಕಳೆದುಕೊಂಡಿದ್ದ ಬಿಜೆಪಿ
ಕೋಲಾರದಲ್ಲಿ ಈ ಹಿಂದೆ ನಡೆದಿದ್ದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ತೋರಿ, ಹಲವು ಚುನಾವಣೆಗಳಲ್ಲಿ ಠೇವಣಿಯನ್ನೇ ಕಳೆದುಕೊಂಡಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು 2,09,671 ಮತಗಳ ಅಂತರದಿಂದ ಸೋಲುಣಿಸಿದ್ದಾರೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ.
ಜೆಡಿಎಸ್ ಮತಗಳು ಕಾಂಗ್ರೆಸ್ಗೆ ಬರಲಿಲ್ಲ
ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರ ಸ್ಪರ್ಧೆ ಮಾಡಿದ್ದರು, ಆದರೆ ದಶಕಗಳಿಂದ ವಿರೋಧಿಗಳಾಗಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪರಸ್ಪರ ಈಗ ಅಪ್ಪಿಕೊಳ್ಳಲು ನಿರಾಕರಿಸಿದರು, ಇದರಿಂದಾಗಿ ಜೆಡಿಎಸ್ನ ಮತಗಳು ಕಾಂಗ್ರೆಸ್ಗೆ ಬರಲೇ ಇಲ್ಲ, ಇದು ಮುನಿಯಪ್ಪ ಸೋಲಿಗೆ ಪ್ರಮುಖ ಕಾರಣವಾಯಿತು.
ಕೈಕೊಟ್ಟ ಕಾಂಗ್ರೆಸ್ ನಾಯಕರು
ಕೆ.ಎಚ್.ಮುನಿಯಪ್ಪ ಅವರಿಗೆ ಕ್ಷೇತ್ರದ ಕಾಂಗ್ರೆಸ್ನ ನಾಯಕರೇ ಕೈಕೊಟ್ಟರು, ಮಾಲೂರು ಮಂಜುನಾಥ, ಕೆ.ಎಚ್.ಮುನಿಯಪ್ಪ ವಿರುದ್ಧ ಬಹಿರಂಗವಾಗಿಯೇ ಸವಾಲು ಹಾಕಿ ಬಿಜೆಪಿ ಪರ ನಿಂತರು. ಇನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಸಹ ಮುನಿಯಪ್ಪ ಪರ ನಿಲ್ಲನಿಲ್ಲ, ಶಿಡ್ಲಘಟ್ಟ ಶಾಸಕ ಮುನಿಯಪ್ಪ ಸಹ ಕಾಂಗ್ರೆಸ್ಗೆ ವಿರುದ್ಧವಾಗಿ ಕೆಲಸ ಮಾಡಿದರು ಎನ್ನಲಾಗಿದೆ ಹಾಗಾಗಿಯೇ ಮುನಿಯಪ್ಪ ಹೀನಾಯವಾಗಿ ಸೋತರು.