ಸಕ್ರಮ ಮೈನಿಂಗ್ ಗೆ ಕೋಲಾರ ಜಿಲ್ಲಾಡಳಿತದಿಂದ ಬಂಪರ್ ಆಫರ್
ಕೋಲಾರ, ಫೆಬ್ರವರಿ 25: ಅವರೆಲ್ಲಾ ಕಲ್ಲು ಕ್ವಾರಿಯಲ್ಲಿ ಬೆವರಿಳಿಸಿ ಕೆಲಸ ಮಾಡೋ ಕೆಲಸಗಾರರು, ಆದರೆ ಅವರ ಮಧ್ಯೆ ಕೆಲವು ದೊಡ್ಡ ವ್ಯಕ್ತಿಗಳು ಬಂದು ಸೇರಿ ದೊಡ್ಡ ಮಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿ ಎಲ್ಲರೂ ಆತಂಕಪಡುವಂತೆ ಇತ್ತು. ಆದರೆ ಇಂತಹದೊಂದು ಅಕ್ರಮಕ್ಕೆ ಕಡಿವಾಣ ಹಾಕಲು ಕೋಲಾರ ಜಿಲ್ಲಾಡಳಿತ ಹೊಸದೊಂದು ಪ್ಲಾನ್ ಮಾಡಿದೆ. ಇನ್ಮುಂದೆ ಅಕ್ರಮದ ಮಾತಿಲ್ಲ ಏನಿದ್ದರೂ ಬರೀ ಸಕ್ರಮವಷ್ಟೇ..
ಕೋಲಾರ ತಾಲ್ಲೂಕು ದಿನ್ನೆಹೊಸಹಳ್ಳಿ ಹಾಗೂ ದಾನಹಳ್ಳಿ ಗ್ರಾಮಗಳ ಬಳಿ ಕಳೆದ ಹತ್ತಾರು ವರ್ಷಗಳಿಂದ ಕಲ್ಲು ಬಂಡೆಗಳ ಮೇಲೆ ಸ್ಥಳೀಯ ಕಲ್ಲು ಕೆಲಸಗಾರರು ಬೆವರು ಹರಿಸಿ ದುಡಿದು ಕಲ್ಲು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು.
ಮಾಲೂರಿನ ಈ ದೇಗುಲಕ್ಕೆ ಬಾಗಿಲೂ ಇಲ್ಲ, ಅರ್ಚಕರೂ ಇಲ್ಲ...
ಆದರೆ ಇವರ ಮಧ್ಯೆ ಕೆಲವು ದೊಡ್ಡ ಗಣಿ ಕುಳಗಳು ಬಂದು ಸೇರಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡಿಕೊಂಡು ಕೋಟ್ಯಂತರ ರುಪಾಯಿ ಲೂಟಿ ಹೊಡೆಯಲು ಶುರುಮಾಡಿಕೊಂಡಿದ್ದರು.
ಕಾನೂನು ಪ್ರಕಾರ ಕಲ್ಲು ಕ್ವಾರಿ ಹಂಚಿಕೆ ಮಾಡಲಾಗುತ್ತಿದೆ
ಇದರಿಂದ ಕಲ್ಲು ಬಂಡೆಗಳ ಮೇಲೆ ಹೊಟ್ಟೆಪಾಡಿಗಾಗಿ ಸಣ್ಣ ಕೆಲಸ ಮಾಡುವವರಿಗೂ ಇಲಾಖೆ ಅಧಿಕಾರಿಗಳು ಕೆಲಸ ಮಾಡಲು ಅನುಮತಿ ನೀಡದೇ ಆಗಾಗ ತೊಂದರೆ ಕೊಡುತ್ತಿದ್ದರು.
ಆದರೆ ಈಗ ಜಿಲ್ಲಾಡಳಿತ ಹೊಸದೊಂದು ಕಾನೂನು ಮಾಡಿ ಸ್ಥಳೀಯವಾಗಿ ಕಲ್ಲುಕೆಲಸ ಮಾಡುವವರಿಗೆ ಕಾನೂನಿನ ಪ್ರಕಾರ ಕಲ್ಲು ಕ್ವಾರಿಯನ್ನು ಹಂಚಿಕೆ ಮಾಡಲು ನಿರ್ಧರಿಸಿದೆ.
ಸ್ಥಳೀಯರಿಗೆ ಆದ್ಯತೆ ನೀಡಲು ಕ್ರಮ
ಅದರಂತೆ ಮೊದಲ ಹಂತವಾಗಿ ದಿನ್ನೆಹೊಸಹಳ್ಳಿ ಹಾಗೂ ದಾನಹಳ್ಳಿ ಗ್ರಾಮಗಳಲ್ಲಿ 9 ಬ್ಲಾಕ್ ಮಾಡಿ ಅಲ್ಲಿನ ಸ್ಥಳೀಯರಿಗೆ ಕಲ್ಲು ಕ್ವಾರಿ ಹಂಚಿಕೆ ಮಾಡಲು ನಿರ್ಧರಿಸಿದ್ದು, ಇನ್ನೇನು ಅರಣ್ಯ ಇಲಾಖೆ ಮತ್ತು ಉಪವಿಭಾಗಾಧಿಕಾರಿಗಳಿಂದ ಎನ್ಓಸಿ ಪಡೆದರೆ ಅರ್ಜಿ ಹಾಕಿಕೊಂಡಿರುವ ಸ್ಥಳೀಯರಿಗೆ ಕಾನೂನಾತ್ಮಕವಾಗಿ ಕಲ್ಲುಕೆಲಸ ಮಾಡಲು ಕ್ವಾರಿ ಹಂಚಿಕೆ ಮಾಡಲಾಗುತ್ತದೆ.
ಇದು ಇಂದು ನಿನ್ನೆಯ ಬೇಡಿಕೆಯಲ್ಲ, ಕಲ್ಲು ಕೆಲಸ ಮಾಡೋ ಕಲ್ಲು ಕೆಲಸಗಾರರು ಹತ್ತಾರು ವರ್ಷಗಳಿಂದ ಅಧಿಕಾರಿಗಳ ಬಳಿ ಸಕ್ರಮವಾಗಿ ಕಲ್ಲುಕೆಲಸ ಮಾಡಿಕೊಡಿ ಎಂದು ಮನವಿ ಮಾಡಿದ್ದರು, ಆದರೆ ಈಗ ಅದಕ್ಕೆ ಕಾಲ ಕೂಡಿಬಂದಿದೆ.
ರೈತರು, ಹೈನುಗಾರರಿಗೆ ಕೋಚಿಮುಲ್ ನಿಂದ ಬಂತು ಭರ್ಜರಿ ಆಫರ್
ಹಂಚಿಕೆ ಮಾಡುವವರೆಗೂ ಕೆಲಸ ಮಾಡದಂತೆ ನಿರ್ಬಂಧ
ಇದರಿಂದ ಸ್ಥಳೀಯರನ್ನು ಬೆದರಿಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಕಲ್ಲು ಲೂಟಿ ಮಾಡುತ್ತಿದ್ದವರಿಗೆ ಕಡಿವಾಣ ಬೀಳುತ್ತದೆ ಅನ್ನೋದು ಕಲ್ಲು ಕೆಲಸ ಮಾಡೋ ಕಾರ್ಮಿಕರಿಗೆ ನೆಮ್ಮದಿಯ ವಿಷಯ.
ಆದರೆ ಈಗ ಗಣಿ ಪರವಾನಿಗೆ ಹಂಚಿಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನಾತ್ಮಕವಾಗಿ ಕಲ್ಲು ಕ್ವಾರಿ ಬ್ಲಾಕ್ ಮಾಡಿ, ಹೊಸದಾಗಿ ಹಂಚಿಕೆ ಮಾಡುವವರೆಗೂ ಕಲ್ಲು ಕೆಲಸ ಮಾಡದಂತೆ ನಿರ್ಬಂಧ ವಿಧಿಸಿದೆ.
ಜಿಲ್ಲಾಡಳಿತದ ಕ್ರಮಕ್ಕೆ ಪ್ರಶಂಸೆ
ಹೀಗಿದ್ದರೂ ಕಲ್ಲು ಬಂಡೆಗಳ ಮೇಲೆ ಕೆಲವು ಪ್ರಭಾವಿಗಳು ಹಗಲು ರಾತ್ರಿ ಬೃಹತ್ ಯಂತ್ರೋಪಕರಣಗಳ ಮೂಲಕ ಕಲ್ಲು ಕೆಲಸ ಮಾಡುತ್ತಿದ್ದು, ಅವರಿಗೆ ಕಡಿವಾಣ ಹಾಕಬೇಕು ಅನ್ನೋದು ಸ್ಥಳೀಯ ಗ್ರಾಮಸ್ಥರುಗಳ ಬೇಡಿಕೆಯಾಗಿದೆ.
ದಿನದ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆವರು ಹರಿಸುವ ಜನರನ್ನು ತೋರಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದ ಲೂಟಿಕೋರರಿಗೆ ಇನ್ನು ಕಡಿವಾಣ ಬೀಳಲಿದ್ದು, ಜಿಲ್ಲಾಡಳಿತದ ಈ ಕ್ರಮಕ್ಕೆ ಸ್ಥಳೀಯ ಕಲ್ಲುಕೆಲಸ ಮಾಡುವವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಅಧಿಕಾರಿಗಳು ದೊಡ್ಡ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೆ ಬಡವರ ಪರ ಕೆಲಸ ಮಾಡಬೇಕು ಅನ್ನೋ ಬೇಡಿಕೆ ಇದೆ.