ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ
ಕೋಲಾರ, ಏಪ್ರಿಲ್ 06: ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ರೈತರು ತ್ರೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಸರಿಯಾದ ಬೆಲೆ ಇಲ್ಲದೇ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅದನ್ನು ಮಾರಲೂ ಆಗದೇ ಹೆಣಗಾಡುತ್ತಿದ್ದಾರೆ.
ರೈತರು, ಸೂಕ್ತ ಬೆಲೆಯಿಲ್ಲದೇ ಬೇಸತ್ತು ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನೇ ಬಿಸಾಡುತ್ತಿರುವ ಸಂಗತಿಗಳು ನಡೆಯುತ್ತಿವೆ. ತಮಗಾದ ಕಷ್ಟ, ನಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲೂ ಆಗದೇ ಒದ್ದಾಡುತ್ತಿದ್ದಾರೆ. ಕೋಲಾರದ ರೈತರೊಬ್ಬರ ಪರಿಸ್ಥಿತಿಯೂ ಇದಕ್ಕೆ ಭಿನ್ನವಿಲ್ಲ. ತಾವು ಬೆಳೆದಿದ್ದ ಸೀಬೆ ಹಣ್ಣು ಮಾರಾಟವಾಗದೇ, ಅದನ್ನು ಕೊಳೆಯಲು ಬಿಡಲೂ ಆಗದೇ ಪ್ರಾಣಿ ಪಕ್ಷಿಗಳಿಗೆ ಅವುಗಳನ್ನು ಹಂಚುತ್ತಿದ್ದಾರೆ...
ಪ್ರಾಣಿಪಕ್ಷಿಗಳಿಗೆ ಆಹಾರವಾಗಲು ಬಿಟ್ಟ ರೈತ
ಕೋಲಾರದ ರಾಮಸಂದ್ರ ಗ್ರಾಮದಲ್ಲಿ ಶ್ರೀನಿವಾಸ್ ಎಂಬ ರೈತ ಸುಮಾರು 10 ಎಕರೆಯಲ್ಲಿ ಸೀಬೆಹಣ್ಣು ಬೆಳೆದಿದ್ದು, ಅದನ್ನು ಕೊಳ್ಳಲು ವ್ಯಾಪಾರಸ್ಥರು ಯಾರೂ ಬಾರದ ಹಿನ್ನೆಲೆ ಬೆಳೆಯನ್ನು ಪ್ರಾಣಿಪಕ್ಷಿಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ. ಸೀಬೆ ಫಸಲು ಉತ್ತಮವಾಗಿ ಬಂದಿದೆ. ಆದ್ರೆ ಲಾಕ್ ಡೌನ್ ನಿಂದಾಗಿ ಕೊಳ್ಳುವವರು ಇಲ್ಲದೇ ಗಿಡದಲ್ಲಿ ಹಣ್ಣುಗಳು ಕೊಳೆಯುತ್ತಿವೆ.
ಕೊರೊನಾ ಎಫೆಕ್ಟ್: ತರಕಾರಿ ಬೆಳೆದು ಕಂಗಾಲಾದ ಚಿತ್ರದುರ್ಗ ರೈತ
ಸೀಬೆ ಕೀಳಲು ಕಾರ್ಮಿಕರೂ ಇಲ್ಲ
ಅಷ್ಟೂಇಷ್ಟೂ ಸೀಬೆಹಣ್ಣು ಕಿತ್ತು ಮಾರುಕಟ್ಟೆಗೆ ಹಾಕೋಣ ಎಂದರೆ ಲಾಕ್ ಡೌನ್ ನಿಂದಾಗಿ ಕಾಯಿಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲ. ಕಾಯಿ ಕೀಳಲು ಕೂಲಿ ಕಾರ್ಮಿಕರೂ ಬರುತ್ತಿಲ್ಲ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಸುಮ್ಮನೆ ಕೊಳೆಯಬಾರದು ಎಂದು ಈ ರೈತ ಪ್ರಾಣಿ ಪಕ್ಷಿಗಳಿಗಾದರೂ ಹಣ್ಣಾಗಲಿ ಎಂದು ಹಂಚಿದ್ದಾರೆ.
ಕೋತಿ, ನವಿಲುಗಳಿಗೆ ಹಸಿವು ತಣಿಸುವ ಕೆಲಸ
ಹಣ್ಣುಗಳನ್ನು ಕೋಲಾರದ ಅಂತರಗಂಗೆ ಬೆಟ್ಟದಲ್ಲಿ 600ಕ್ಕೂ ಹೆಚ್ಚು ಕೋತಿಗಳು ಹಾಗೂ 50ಕ್ಕೂ ಹೆಚ್ಚು ನವಿಲುಗಳಿಗೆ ಪ್ರತಿದಿನ ಗಿಡಗಳಿಂದ ಕಾಯಿಗಳನ್ನು ತಂದು ಹಾಕಲಾಗುತ್ತಿದೆ. ಗಿಡಗಳಲ್ಲಿ ಹಣ್ಣುಗಳನ್ನು ಹಾಗೇ ಬಿಟ್ಟರೆ ಕೊಳೆತು ಹೋಗುತ್ತವೆ ಅದರ ಬದಲು ಬೇಸಿಗೆಯಲ್ಲಿ ಆಹಾರವಿಲ್ಲದೇ ಪರಿತಪಿಸುತ್ತಿರುವ ಅಂತರಗಂಗೆ ಬೆಟ್ಟದ ನವಿಲು, ಕೋತಿಗಳಿಗೆ ಆಹಾರವಾದ್ರೂ ಸಿಗಲಿ ಎಂದು ಹಣ್ಣು ನೀಡುತ್ತಿದ್ದಾರೆ.
15 ಎಕರೆ ತೋಟದಲ್ಲಿ ಕೊಳೆಯುತ್ತಿದೆ ಮಲ್ಲಿಗೆ, ಗುಲಾಬಿ, ಪಪ್ಪಾಯ
ಕಾಯಿ ಕೀಳುವ ಸಮಯಕ್ಕೆ ಸರಿಯಾಗಿ ಬಂದ ಕೊರೊನಾ
ಪ್ರತಿದಿನ ಹತ್ತಾರು ಮೈಲಿ ದೂರದಿಂದ ಬಂದು ಸೀಬೆಹಣ್ಣುಗಳನ್ನು ಹಾಕಿ ಹೋಗುತ್ತಿದ್ದಾರೆ. ಸೀಬೆಹಣ್ಣು ಬೆಳೆದ ರೈತ ಶ್ರೀನಿವಾಸ್ ಮಾತನಾಡಿ, ಲಕ್ಷಾಂತರ ಖರ್ಚು ಮಾಡಿ ಬೆಳೆ ಬೆಳೆಯಲಾಗಿದೆ. ಫಸಲು ಬಂದು ಕಾಯಿ ಕೀಳುವ ಸಮಯಕ್ಕೆ ಕೊರೊನಾ ಕಾರಣದಿಂದ ಬೆಳೆ ಕೊಳ್ಳಲು ವ್ಯಾಪಾರಸ್ಥರು ಯಾರೂ ಬರುತ್ತಿಲ್ಲ. ಕಾಯಿ ಕಿತ್ತು ಬೇರೆ ಏನಾದರೂ ಮಾಡೋಣ ಅಂದ್ರೆ ಲಾಕ್ ಡೌನ್ ನಿಂದಾಗಿ ಮಾರ್ಕೆಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.