ಕೋಲಾರ ಉಪವಿಭಾಗಾಧಿಕಾರಿ ಎದುರು ಕಣ್ಣೀರು ಹಾಕಿದ ಕೆಜಿಎಫ್ ಶಾಸಕಿ ರೂಪಾ!
ಕೋಲಾರ, ಫೆಬ್ರವರಿ 15: ಕೋಲಾರದ ಉಪ ವಿಭಾಗಾಧಿಕಾರಿ ಎದುರು ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾ ಕಣ್ಣೀರು ಹಾಕಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೋಸದ ವಿಚಾರವಾಗಿ ಎಸಿ ಸೋಮಶೇಖರ್ ಎದುರು ಶಾಸಕಿ ಗದ್ಗದಿತರಾಗಿದ್ದಾರೆ.
ತಮಗೆ ನ್ಯಾಯ ಕೊಡಿಸುವಂತೆ ಎಸಿ ಸೋಮಶೇಖರ್ ಮುಂದೆ ಗದ್ಗದಿತರಾದ ಶಾಸಕಿ ರೂಪಾ, ನ್ಯಾಯಕ್ಕಾಗಿ ನಾಯಿಗಳಿಗಿಂತ ಹೀನಾಯವಾಗಿ ಇರುತ್ತೇವೆ ಎಂದರು.
ಕೆಜಿಎಫ್ ಶಾಸಕಿ ರೂಪಾ ಮತ್ತು ಬೆಂಬಲಿಗರ ಪ್ರತಿಭಟನೆಗೆ ಮಣಿದ ಚುನಾವಣಾಧಿಕಾರಿ
ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೋಸದ ಆರೋಪದ ವಿಚಾರವಾಗಿ, ನಿಯಮಬಾಹಿರವಾಗಿ ಫಲಿತಾಂಶ ಪ್ರಕಟಿಸಿದ ಅಧಿಕಾರಿ ವಿರುದ್ಧ ಶಾಸಕಿ ರೂಪಾ ಸಿಟ್ಟು ಹೊರಹಾಕಿದರು.
ಚುನಾವಣಾ ಅಧಿಕಾರಿ ಡಾ.ರಾಮು ವಿರುದ್ಧ ಅಕ್ರಮ ಫಲಿತಾಂಶ ಘೋಷಣೆ ಆರೋಪ ಮಾಡಲಾಗಿದ್ದು, ಮುಂದೂಡಿದ್ದ ಚುನಾವಣೆಯನ್ನು ನಡೆಸದೆ ಬಿಜೆಪಿ ಪರ ಅಧಿಕಾರಿ ಫಲಿತಾಂಶ ಘೋಷಿಸಿದ್ದಾರೆ ಎಂದು ಆರೋಪಿಸಿದರು.
ಉಪ ವಿಭಾಗಾಧಿಕಾರಿಗೆ ದಾಖಲೆ ಸಲ್ಲಿಸಿ ನ್ಯಾಯ ಕೊಡಿಸುವಂತೆ ಶಾಸಕಿ ಗೋಗೆರೆದರು. ಚುನಾವಣಾ ಪ್ರಕ್ರಿಯೆ ಇಲ್ಲದೆ ಚುನಾವಣಾ ಅಧಿಕಾರಿ ಡಾ.ರಾಮು ಏಕಾಏಕಿ ಫಲಿತಾಂಶ ಪ್ರಕಟಿಸಿದ್ದಾರೆ. ಕೋರಂ ಕೊರತೆಯಿದ್ದರೂ ಫಲಿತಾಂಶ ಘೋಷಣೆ ಮಾಡಿದ್ದಾರೆ. ಚುನಾವಣೆ ಅಧಿಕಾರಿ ರಾಮು ವಿರುದ್ಧ ಕ್ರಮಕ್ಕೆ ಶಾಸಕಿ ಆಗ್ರಹಿಸಿದರು.
ಫೆ. 9 ರಂದು ನಿಗದಿಯಾಗಿದ್ದ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಫಲಿತಾಂಶ ಘೋಷಣೆಯನ್ನು ಫೆ.15ಕ್ಕೆ ಮುಂದೂಡಲಾಗಿತ್ತು. ಇದೇ ವೇಳೆ ಫಲಿತಾಂಶ ಘೋಷಿಸಿ ಕೆಜಿಎಫ್ ತಹಶೀಲ್ದಾರ್ ಜೊತೆಗೆ ಚುನಾವಣಾ ಅಧಿಕಾರಿ ಡಾ.ರಾಮು ನಿರ್ಗಮಿಸಿದರು.