ಕರ್ನಾಟಕ ಬಜೆಟ್ 2021 : ಬಯಲುಸೀಮೆ ಪಾಲಿಗೆ ಬೆಂಗಳೂರಿನ ಕೊಚ್ಚೆ ನೀರೇ ಗಟ್ಟಿ !
ಬೆಂಗಳೂರು, ಮಾರ್ಚ್ 08: ನೀರಾವರಿಗೆ ಒಳಪಟ್ಟ ಕೃಷ್ಣಾ, ಕಾವೇರಿ ಅಚ್ಚುಕಟ್ಟು ಪ್ರದೇಶಗಳ ಮತ್ತು ನೀರಾವರಿ ವಂಚಿತ, ಮಳೆಯಾಶ್ರಿತ ಬಯಲುಸೀಮೆಯ ಪ್ರದೇಶಗಳ ತಾರತಮ್ಯ ಮುಂದುವರೆದಿದೆ. ಬಯಲುಸೀಮೆಗೆ ಹರಿಸಬೇಕಾದ ಜಿಎಸ್ ಪರಮಶಿವಯ್ಯ ನವರ ವರದಿ ಆಧಾರಿತ ಪಶ್ಚಿಮವಾಹಿನಿ ನದಿಗಳ ನೀರಿಗೆ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಯಲುಸೀಮೆ ಅತಂತ್ರ ಪರಿಸ್ಥಿತಿಗೆ ಬೀಳಲಿದೆ.
ಬಯಲುಸೀಮೆಯ ದಾಹ ನೀಗಿಸಲಾಗದ ಅವೈಜ್ಞಾನಿಕ ಎತ್ತಿನಹೊಳೆಯ ಜಲವಿಜ್ಞಾನವನ್ನು CWC ಕೇಂದ್ರೀಯ ಜಲ ಆಯೋಗದಿಂದ ಮರು ಅಧ್ಯಯನಕ್ಕೊಳಪಡಿಸದೇ, ಯೋಜನೆ ಪೂರ್ಣಗೊಳಿಸಲು ಆದ್ಯತೆ ಕೊಟ್ಟಿರುವುದರಿಂದ, ಭ್ರಷ್ಟರ ಜೋಳಿಗೆ ತುಂಬುತ್ತದೆಯೇ ಹೊರತು ನಮ್ಮ ಕೆರೆಗಳಿಗೆ ನೀರು ಹರಿಯುವುದಿಲ್ಲ ಎಂದು ಶಾಶ್ವತ ಹೋರಾಟಗಾರ ಆಂಜನೇಯರೆಡ್ಡಿ ಆರ್. ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳು
ಎತ್ತುವಳಿ ಯೋಜನೆ ಎಂದೇ ಖ್ಯಾತಿ ಪಡೆದಿರುವ ಎತ್ತಿನಹೊಳೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ವಾಸ್ತವದಲ್ಲಿ ಪರಮ ಶಿವಯ್ಯ ವರದಿ ಆಧಾರಿತ ಪಶ್ಚಿಮ ವಾಹಿನಿಗಳ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಯಲು ಸೀಮೆಗೆ ಅತಂತ್ರ ತಪ್ಪಿಲ್ಲ ಎಂದು ಆಂಜನೇಯರೆಡ್ಡಿ ಮುಖ್ಯಮಂತ್ರಿಗಳ ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ನೀರನ್ನು ಬಯಲುಸೀಮೆಗೆ ಹರಿಸಲು ಆಲಮಟ್ಟಿ ಮತ್ತು ಪೆನ್ನಾರ್ ಜೋಡಣೆಗೆ NWDA (ನ್ಯಾಷನಲ್ ವಾಟರ್ ಡೆವಲಪಮೆಂಟ್ ಏಜನ್ಸಿ ) ಈಗಾಗಲೇ ಅಧ್ಯಯನ ವರದಿ ಸಿದ್ದಪಡಿಸಿ, ಹಸಿರು ನಿಶಾನೆ ತೋರಿಸಿದ್ದರೂ ಸಹಾ, ಕೃಷ್ಣಾ ನೀರನ್ನು ಮತ್ತೆ ಉತ್ತರ ಕರ್ನಾಟಕಕ್ಕೆ ಮೀಸಲಿಟ್ಟು ಬಯಲುಸೀಮೆಗೆ ಸೊನ್ನೆ ಸುತ್ತಲಾಗಿದೆ. ರಾಜ್ಯ ಸರ್ಕಾರ ಬಹಳ ಉದಾರತೆಯಿಂದ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆಲ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಕೇಂದ್ರ ಸರ್ಕಾರದ ಮಾನದಂಡಕ್ಕೆ ಅನುಗುಣವಾಗಿ ಮೂರನೇ ಹಂತಕ್ಕೆ ಶುದ್ಧೀಕರಿಸುವಲ್ಲಿ ಸರ್ಕಾರದದಲ್ಲಿ ಚಿತ್ತ ಶುದ್ಧಿ ಮರೆಯಾಗಿದೆ.
ಅಂತರ್ಜಲ ಆಧಾರಿತ ಕೃಷಿ ಮಾಡುವ ಬಯಲುಸೀಮೆ ರೈತರ ಲಕ್ಷಾಂತರ ಕೊಳವೆ ಬಾವಿಗಳು ವಿಫಲವಾಗಿವೆ. ಇವುಗಳ ಮರುಪೂರಣ, ಪುನಶ್ಚೇತನಕ್ಕೆ ವಿಶೇಷ ಅನುದಾನ ಒದಗಿಸುವುದನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಸಾವಿರಾರು ಕೆರೆಗಳಿರುವ ಬಯಲುಸೀಮೆಯ ಕೆರೆಗಳ ಜಲಾನಯನ ಪ್ರದೇಶದ ಒತ್ತುವರಿ ತೆರುವು, ರಾಜ ಕಾಲುವುವೆಗಳ ಪುನರುಜ್ಜೀವನಗೊಳಿಸಿ, ಅಂತರ್ಜಲ ಅಭಿವೃದ್ಧಿಪಡಿಸುವ ಯಾವುದೇ ನಿಖರವಾದ ವೈಜ್ಞಾನಿಕ ಯೋಜನೆಗಳ ಕಡೆ ಗಮನಹರಿಸದೆ, ಓಬಿರಾಯನ ಹಳೆಯ ಪದ್ಧತಿಗಳಿಗೆ ಜೋತುಬಿದ್ದಿರುವುದರಿಂದ ಬಯಲುಸೀಮೆಗೆ ಯಾವುದೇ ಉಪಕಾರವಾಗುವುದಿಲ್ಲ .ಬಯಲುಸೀಮೆಯ ಜಿಲ್ಲೆಗಳಲ್ಲಿ ರಾಡಾರ್ ಆಧಾರಿತ ಹವಾಮಾನ ಮತ್ತು ಮಳೆ ಮುನ್ಸೂಚನಾ ಕೇಂದ್ರಗಳನ್ನು ಸ್ಥಾಪಿಸಿದರೆ, ಕೃಷಿಯಲ್ಲಿ ಅಂತರ್ಜಲದ ಉಳಿತಾಯ, ಜಲ ಸಂರಕ್ಷಣೆ, ಬರ ನಿರ್ವಹಣೆ ಮತ್ತು ಬೆಳೆಗಳ ರೋಗ ನಿರ್ವಹಣೆಗೆ ಅನುಕೂಲವಾಗುತ್ತಿತ್ತು. ಇಂದಿನ ಬಜೆಟ್ ಬಯಲುಸೀಮೆಯ ಪಾಲಿಗೆ ಹೊಸ ಬಾಟಲಿಯಲ್ಲಿ ಹಳೇ ಮಧ್ಯ ಎಂಬಂತಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.