ಕೋಲಾರ : ಡಿಕೆ ರವಿ ತಾಯಿ ಗೌರಮ್ಮರಿಂದ ನಾಮಪತ್ರ ವಾಪಸ್
ಕೋಲಾರ, ಏಪ್ರಿಲ್ 27: ಕೋಲಾರ ಅಸೆಂಬ್ಲಿ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿದ್ದ ವರ್ತೂರು ಪ್ರಕಾಶ್ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಗೌರಮ್ಮ ಅವರು ಇಂದು ನಾಮಪತ್ರ ವಾಪಸ್ ಪಡೆದಿದ್ದಾರೆ.
ಪಕ್ಷೇತರರಾಗಿ ನಿಂತು ಗೆದ್ದಿರುವ ವರ್ತೂರ್ ಪ್ರಕಾಶ್ ಎದುರಿಗೆ ಸಮರ್ಥ ಅಭ್ಯರ್ಥಿ ನಿಲ್ಲಿಸಲು ಕಾಂಗ್ರೆಸ್, ಜೆಡಿಎಸ್ ತಲೆ ಕೆಡಿಸಿಕೊಂಡಿರುವ ಹೊತ್ತಿನಲ್ಲೇ ದಕ್ಷ ಐಎಎಸ್ ಅಧಿಕಾರಿ, ಕೋಲಾರದ ದತ್ತುಪುತ್ರ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ನಾಮಪತ್ರ ಸಲ್ಲಿಸಿದ್ದರು.
ನಮ್ಮ ಕಾಂಗ್ರೆಸ್ಸಿನಿಂದ 40 ಕ್ಷೇತ್ರಗಳಲ್ಲಿ ಸ್ಪರ್ಧೆ : ವರ್ತೂರು ಪ್ರಕಾಶ್
2008 ಹಾಗೂ 2013ರಲ್ಲಿ ಜಯಭೇರಿ ಬಾರಿಸಿ ಶಾಸಕರಾಗಿರುವ ವರ್ತೂರು ಪ್ರಕಾಶ್ ಅವರು ಈ ಬಾರಿ ಹೊಸ ಪಕ್ಷದ 'ನಮ್ಮ ಕಾಂಗ್ರೆಸ್' ಮೂಲಕ ಕಣಕ್ಕಿಳಿದಿದ್ದಾರೆ. ಹೊಸ ಪಕ್ಷ ಕಟ್ಟಿರುವ ವರ್ತೂರು ಅವರು ಮತ್ತೊಮ್ಮೆ ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಲು ಮನಸ್ಸು ಮಾಡಲಿಲ್ಲ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ವರ್ತೂರು, ಈಗ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ. ಯಡಿಯೂರಪ್ಪ- ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ.
ಗೌರಮ್ಮ ಅವರ ಜಯ ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು
ಸ್ವತಂತ್ರ ಅಭ್ಯರ್ಥಿಯಾಗಿ ಪಕ್ಷೇತರರಾಗಿ ವಿಧಾನಸಭೆ ಚುನಾವಣೆ 2018ರಲ್ಲಿ ಡಿಕೆ ರವಿ ತಾಯಿ ಗೌರಮ್ಮ ಸ್ಪರ್ಧಿಸಲು ನಿರ್ಧರಿಸಿದ್ದು, ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಿತ್ತು.
'ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕಿದೆ, ಅವನು ಮಾಡಿದ ಒಳ್ಳೆ ಕಾರ್ಯವನ್ನು ಮುಂದುವರೆಸಲು ಅವಕಾಶ ಕೊಡಿ' ಎಂದು ಗೌರಮ್ಮ ಹೇಳಿದ್ದಾರೆ. ಡಿಕೆ ರವಿಯನ್ನು ಈಗಲೂ ದೇವರಂತೆ ಅನೇಕ ಹಳ್ಳಿಗಳಲ್ಲಿ ಕಾಣಲಾಗುತ್ತಿದೆ. ಜನರ ಭಾವನೆಗಳಿಗೆ ಸೆಂಟಿಮೆಂಟು ಬಲ ಸೇರಿದರೆ ಗೌರಮ್ಮ ಅವರ ಜಯ ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು.
ಈ ಬಾರಿಯೂ ಪ್ರಕಾಶ್ ಗೆಲ್ಲುವ ನೆಚ್ಚಿನ ಅಭ್ಯರ್ಥಿ
2008ರಲ್ಲಿ 66,446 ಮತಗಳು, 2013ರಲ್ಲಿ 62, 957 ಮತಗಳನ್ನು ಗಳಿಸಿದ್ದ ಪ್ರಕಾಶ್ ಈ ಬಾರಿಯೂ ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ. ಆದರೆ, ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ಗುರುವಾರ(ಡಿಸೆಂಬರ್ 28) ಘೋಷಿಸಿದ ಬಳಿಕ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿತ್ತು. ಆದರೆ, ಈಗ ಪ್ರಕಾಶ್ ಹಾದಿ ಸುಗಮವಾಗಿದೆ.
ನಸೀರ್ ಅಹ್ಮದ್ ನಸೀಬು ಹೇಗಿದೆ?
ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್ ಅಹಮ್ಮದ್, ಮಾಜಿ ಸಚಿವ ನಿಸಾರ್ ಅಹಮ್ಮದ್ ಅವರು ಸೇರಿಕೊಂಡು ಈ ಬಾರಿ ಹೇಗಾದರೂ ನಸೀರ್ ಅಹ್ಮದ್ ಅವರನ್ನು ಗೆಲ್ಲಿಸಲು ಯತ್ನಿಸಲಿದ್ದಾರೆ. ಕಳೆದ ಬಾರಿ ಶೇ 25.39ರಷ್ಟು ಮತ 41, 510 ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದಿದ್ದ ನಸೀರ್ ಅವರು ಮತ ವಿಭಜನೆಯಲ್ಲಿ ಪ್ರಮುಖ ಪಾತ್ರವಹಿಸಬಹುದು ಅಷ್ಟೇ.
ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಮಾಜಿ ಶಾಸಕ
ಕೋಲಾರ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯು ಪಕ್ಷಕ್ಕೆ ಪ್ರತಿಷ್ಠೆ ಕಣವಾಗುತ್ತಿದೆ ಎಂಬ ಮಾತಿದೆ. ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಮಾಜಿ ಶಾಸಕ ಕೆ ಶ್ರೀನಿವಾಸ ಗೌಡ ಅವರು ಕಳೆದ ಬಾರಿ 50,366 ಮತಗಳನ್ನು ಪಡೆದ ಶೇ 30ಕ್ಕೂ ಅಧಿಕ ಮತ ಗಳಿಸಿದ್ದರು. ವಿಜೇತ ಅಭ್ಯರ್ಥಿ(ಪ್ರಕಾಶ್) ಶೇಕಡವಾರು ಮತ ಶೇ 38.51. ಹೀಗಾಗಿ ಜೆಡಿಎಸ್ ಇಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.