ಜೆಡಿಎಸ್ ವರಿಷ್ಠ ದೇವೇಗೌಡರ ಕೃಪೆ ನನ್ನ ಮೇಲಿದ್ದರೆ ಅಷ್ಟೇ ಸಾಕು
ಕೋಲಾರ, ಆಗಸ್ಟ್ 27: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ನಡೆಯುತ್ತಿರುವ ವಾಕ್ಸಮರದ ವಿಚಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
"ದೇವೇಗೌಡ್ರು ಮತ್ತು ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ" ಎಂದಿರುವ ರಮೇಶ್ ಕುಮಾರ್, " ಇಬ್ಬರ ಮೇಲೂ ನನಗೆ ಗೌರವವಿದೆ" ಎಂದು ಹೇಳಿದ್ದಾರೆ.
ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟಿನಲ್ಲಾದ ಎರಡು ಆಘಾತ ಏನು?
" ಇವರಿಬ್ಬರ ಬಗ್ಗೆ ಕಾಮೆಂಟ್ ಮಾಡಬೇಕೆಂದರೆ ನಾನು ಶಕ್ತಿಶಾಲಿಯಾಗಿರಬೇಕು. ಆದರೆ, ನಾನಷ್ಟು ಬಲಾಢ್ಯನಲ್ಲ" ಎಂದು ರಮೇಶ್ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
" ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು, ಹಾಗಾಗಿ ಅವರ ಮೇಲೆ ನನ್ನ ಕೃಪೆಯಿರಲಿದೆ. ಹಾಗೆಯೇ, ದೇವೇಗೌಡ್ರು ನನಗಿಂತ ದೊಡ್ಡವರು, ಅವರ ಕೃಪೆ ನನ್ನ ಮೇಲಿದ್ದರೆ ಅಷ್ಟೇ ಸಾಕು" ಎಂದು ರಮೇಶ್ ಕುಮಾರ್ ಗೌರವದ ಮಾತನ್ನಾಡಿದ್ದಾರೆ.
ಸ್ಪೀಕರ್ ಅಲ್ಲ ನಾನೀಗ ಕಾಂಗ್ರೆಸ್ ಕಾರ್ಯಕರ್ತ: ರಮೇಶ್ಕುಮಾರ್
" ಸ್ಪೀಕರ್ ಆಗಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ. ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ನಡೆದುಕೊಂಡಿಲ್ಲ ಎನ್ನುವ ಸಂತೋಷ ನನ್ನಲಿದೆ" ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
" ನನ್ನ ನಿರ್ಣಯದ ವಿರುದ್ದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದರೆ, ನಾನೇನು ಮಾಡಲು ಸಾಧ್ಯ" ಎಂದಿರುವ ರಮೇಶ್ ಕುಮಾರ್, "ಸುಪ್ರೀಂ ತೀರ್ಪಿನ ವಿರುದ್ದ ಪ್ರತಿಕ್ರಿಯಿಸಲು ಸಾಧ್ಯವೇ" ಎಂದಿದ್ದಾರೆ.