ಬಿಜೆಪಿ ಸೇರುವ ಸುಳಿವು ಕೊಟ್ಟ ಜೆಡಿಎಸ್ ಶಾಸಕ!
ಕೋಲಾರ, ಅಕ್ಟೋಬರ್ 23 : "ರಾಜಕೀಯ ನಿಂತ ನೀರಲ್ಲ. ಯಾರೂ ಅಡ್ಡ ಹಾಕೋಕೆ ಆಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ನಾನು ಬಿಜೆಪಿಗೆ ಬೆಂಬಲ ಸೂಚಿಸಿದ್ದೇನೆ" ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಹೇಳಿದರು.
ಬುಧವಾರ ಕೋಲಾರದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸ ಗೌಡ ಬಿಜೆಪಿ ಸೇರುವ ಕುರಿತು ಸುಳಿವು ನೀಡಿದರು. ಅಬಕಾರಿ ಸಚಿವ ಎಚ್. ನಾಗೇಶ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿಯೇ ಬಿಜೆಪಿ ಪರವಾಗಿ ಮಾತನಾಡಿದರು.
ಶ್ರೀನಿವಾಸ ಗೌಡ ವಿರುದ್ಧ ಎಸ್.ಆರ್.ವಿಶ್ವನಾಥ್ರಿಂದ ಹಕ್ಕುಚ್ಯುತಿ ಮಂಡನೆ
"ನಾಲ್ಕು ಬಾರಿ ನಾಲ್ಕು ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ರಾಜಕಾರಣ ಹರಿಯುವ ನೀರಿನಂತೆ. ಯಾರೂ ಅಡ್ಡಿ ಪಡಿಸಲು ಸಾಧ್ಯವಿಲ್ಲ. ಅದು ಹರಿಯುತ್ತಲೇ ಇರುತ್ತದೆ" ಎಂದು ಶ್ರೀನಿವಾಸ ಗೌಡರು ತಿಳಿಸಿದರು.
ಅತೃಪ್ತರ ಬಣ ಸೇರಿಕೊಳ್ಳುತ್ತಾರೆಯೇ ಕೋಲಾರ ಜೆಡಿಎಸ್ ಶಾಸಕ?
ಶಾಸಕ ಶ್ರೀನಿವಾಸ ಗೌಡ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, "ಬಿಜೆಪಿಯವರು ನನಗೂ ಹಣದ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ದರು" ಎಂದು ಅವರು ಹೇಳಿಕೆ ಕೊಟ್ಟಿದ್ದರು.
ಕೋಲಾರ ಜೆಡಿಎಸ್ ಶಾಸಕರಿಗೆ 30 ಕೋಟಿ ಆಫರ್, 5 ಕೋಟಿ ಅಡ್ವಾನ್ಸ್
"ಇಬ್ಬರು ಶಾಸಕರು ಮತ್ತು ಮಾಜಿ ಶಾಸಕರೊಬ್ಬರು ಮನಗೆ ಬಂದು ಮುಂಗಡ 5 ಕೋಟಿ ಹಣ ಕೊಟ್ಟಿದ್ದರು. ಬಿಜೆಪಿಯವರು ಕೊಟ್ಟ ಹಣ 2 ತಿಂಗಳು ನನ್ನ ಮನೆಯಲ್ಲಿ ಇತ್ತು. ಎಚ್. ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಅದನ್ನು ವಾಪಸ್ ಕಳಿಸಿದೆ" ಎಂದು ಹೇಳಿಕೆ ಕೊಟ್ಟು ಚರ್ಚೆ ಹುಟ್ಟು ಹಾಕಿದ್ದರು.
ಆಪರೇಷನ್ ಕಮಲದ ವಿಚಾರ ಮಾತನಾಡಿದ್ದ ಶ್ರೀನಿವಾಸ ಗೌಡ ಯಲಹಂಕದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ವಿರುದ್ಧ ಆರೋಪ ಮಾಡಿದ್ದರು. ಆದ್ದರಿಂದ, ವಿಧಾನಸಭೆಯಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ವಿಶ್ವನಾಥ್ ಮುಂದಾಗಿದ್ದರು.
2018ರ ಚುನಾವಣೆಯಲ್ಲಿ ಕೆ. ಶ್ರೀನಿವಾಸ ಗೌಡ 82, 788 ಮತಗಳನ್ನು ಪಡೆದು ಕಾಂಗ್ರೆಸ್ನ ಸೈಯದ್ ಜಮೀರ್ ಪಾಶ ವಿರುದ್ಧ ಜಯಗಳಿಸಿದ್ದಾರೆ.