ರಮೇಶ್ ಕುಮಾರ್ ಹೇಳಿಕೆ: ಇದೇನು ಆಕ್ಷೇಪವೋ, ಗೌಡ್ರ ವಿರುದ್ದ ಸಿಟ್ಟೋ?
ಕೋಲಾರ, ಜೂ 23: ನಾವೇನಿದ್ದರೂ ಮೇಲೆ ಕುಳಿತುಕೊಳ್ಳುವರು, ಎಲ್ಲಾ ಗೌಡ್ರದ್ದು ಎಂದು ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆ ಹಲವು ಅಚ್ಚರಿಗೆ ಕಾರಣವಾಗಿದೆ. ನಗರದಲ್ಲಿ ಶನಿವಾರ (ಜೂ 23) ನಡೆದ ಕಾರ್ಯಕ್ರಮವೊಂದರಲ್ಲಿ ರಮೇಶ್ ಕುಮಾರ್ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.
ತಾಲೂಕಿನಲ್ಲಿ ಆರೋಗ್ಯ ವಿಸ್ತರಣಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ರಮೇಶ್ ಕುಮಾರ್, ದೇವೇಗೌಡರು ಹೇಳಿದ್ದನ್ನು ಕೇಳೋದಷ್ಟೇ ನಮ್ಮ ಕೆಲಸ ಎನ್ನುವ ಮೂಲಕ, ಅಸಮಾಧಾನ ಹೊರಹಾಕಿದ್ದಾರೋ ಅಥವಾ ಆಡಳಿತದಲ್ಲಿ ಗೌಡ್ರ ಹಸ್ತಕ್ಷೇಪಕ್ಕೆ ಆಕ್ಷೇಪ ಎತ್ತುತ್ತಿದ್ದಾರೋ ಎನ್ನುವ ಪ್ರಶ್ನೆ ಎದ್ದಿದೆ.
ಬಜೆಟ್ ನಲ್ಲಿ ನಿಮ್ಮ ತಾಲೂಕಿಗೆ ಏನೇನು ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೀರಿ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ರಮೇಶ್ ಕುಮಾರ್, ನಮ್ಮದೇನಿದೆ? ನಾನೇನಿದ್ದರೂ ಮೇಲ್ಗಡೆ ಕುಳಿತುಕೊಳ್ಳುವವನು (ಸ್ಪೀಕರ್). ಇದೇ ಜಿಲ್ಲೆಯ ಶ್ರೀನಿವಾಸ ಗೌಡರು ಸಚಿವರಾಗಿದ್ದಾರಲ್ಲಾ ಅವರನ್ನು ಕೇಳಿ..
ಈಗಿರುವುದು ಸಮ್ಮಿಶ್ರ ಸರಕಾರ, ಏನೇ ನಡೆಯುವುದಿದ್ದರೂ ಎರಡೂ ಪಕ್ಷಗಳು ಕೂತು ನಿರ್ಧರಿಸಬೇಕಾಗುತ್ತದೆ. ಜಿಲ್ಲೆಯ ಅಭಿವೃದ್ದಿ ಎಲ್ಲಾ, ಶ್ರೀನಿವಾಸ ಗೌಡ ಮತ್ತು ದೇವೇಗೌಡರಿಗೆ ಬಿಟ್ಟಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ರಮೇಶ್ ಕುಮಾರ್ ಅವರ ಈ ಹೇಳಿಕೆ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಸ್ಪೀಕರ್ ಆಗಿರುವುದಕ್ಕೆ ಅವರಿಗೆ ಸಿಟ್ಟೋ ಅಥವಾ ದೇವೇಗೌಡರ ಮೇಲೆ ಅವರಿಗೆ ಅಸಮಾಧಾನವೋ ಎನ್ನುವ ಮಾತು ಆರಂಭವಾಗಿದೆ.
ಆರೋಗ್ಯ ವಿಸ್ತರಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಕೆಸಿ ವ್ಯಾಲಿ ಯೋಜನೆಯನ್ನು ಪ್ರಶ್ನಿಸಿ ನೀರಾವರಿ ಹೋರಾಟಗಾರರು ನ್ಯಾಯಾಲಯದಲ್ಲಿ ಸಲ್ಲಿಸಿರುವ ಪಿಐಎಲ್ ಬಗ್ಗೆ, ಸಮಯ ಎಲ್ಲದಕ್ಕೂ ಉತ್ತರ ಹೇಳಲಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.