ಮಹಿಳೆಯ ಶಪಥ ಮಾಡಿ ಜಗನ್ ಮೊಹನ್ ರೆಡ್ಡಿ ಕೊಲೆಗೆ ಸುಪಾರಿ?
ಕೋಲಾರ, ಜೂ. 24: ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯನ್ನು ಕೊಲೆ ಮಾಡಿದ್ದ ಹಂತಕ ಆರೋಪಿ ಕಾಲಿಗೆ ಗುಂಡು ಹೊಡೆದು ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ.
ಬಾಲಾಜಿ ಸಿಂಗ್ ಬಂಧಿತ ಆರೋಪಿ. ಜೂನ್ 07 ರಂದು ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆ ಗಂಗಮ್ಮನ ಗುಡಿ ಎದುರಲ್ಲಿ ಜಗನ್ ಮೋಹನ್ ರೆಡ್ಡಿಯನ್ನು ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜ ಬಲಗೈ ಬಂಟನಾಗಿದ್ದ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.
ಮುಳಬಾಗಿಲು ತಾಲೂಕಿನ ಚೆಲುವನಹಳ್ಳಿ ಅರಣ್ಯ ಪ್ರದೇಶದಲ್ಲಿ ಸುಪಾರಿ ಹಂತಕ ಆರೋಪಿ ಬಾಲಾಜಿ ಸಿಂಗ್ ಅಡಗಿ ಕೂತಿರುವ ವಿಚಾರ ತಿಳಿದ ಮುಳಬಾಗಿಲು ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಮತ್ತು ಸಿಬ್ಬಂದಿ ಬೆಳಗಿನ ಜಾವ ಬಂಧಿಸಲು ತೆರಳಿದ್ದರು. ಈ ವೇಳೆ ಬಂಧನಕ್ಕೆ ಒಳಗಾಗಿದ್ದ ಬಾಲಾಜಿ ಸಿಂಗ್, ಮೂತ್ರ ಮಾಡುವ ನೆಪ ಕೊಟ್ಟು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೇ ಕಲ್ಲು ಎತ್ತಿ ಪೊಲೀಸರ ಮೇಲೆ ಬೀಸಲು ಯತ್ನಿಸಿದ್ದಾನೆ. ಈ ವೇಳೆ ಶರಣಾಗುವಂತೆ ಪೊಲೀಸರು ಮನವಿ ಮಾಡಿದರೂ ಕೇಳಿಲ್ಲ. ಈ ವೇಳೆ ಸರ್ವೀಸ್ ಪಿಸ್ತುಲಿನಿಂದ ಗುಂಡು ಹಾರಿಸಿ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಪ್ರಮುಖ ಹಂತಕ ಅರೋಪಿಯನ್ನು ಬಂಧಿಸಿದ್ದಾರೆ. ಅರೋಪಿಯ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಎಸ್ಎನ್ಅರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಲು ಕಲ್ಲು ಬೀಸಿದ ಭೂಪ:
ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಚೆಲುವನಹಳ್ಳಿ ಅರಣ್ಯದಲ್ಲಿ ಅಡಗಿರುವ ವಿಚಾರ ತಿಳಿಯಿತು. ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಈ ವೇಳೆ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ಎಸ್ಪಿ ಡಿ. ದೇವರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಗನ್ ಹತ್ಯೆ ಹಿಂದೆ ಇರೋದು ಸುಪಾರಿ ಕಿಲ್ಲಿಂಗ್ :
ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯ ಕೊಲೆಗೆ ಸೂಪಾರಿ ನೀಡಿದ್ದರು. ಮಹಿಳೆಯೊಬ್ಬಳು ಅಕೆ ಶಪತ ಮಾಡಿದಂತೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂಬ ಅರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾನಾ ಅಯಾಮಗಳಿಂದ ತನಿಖೆ ನಡೆಸಿದ ಮುಳಬಾಗಿಲು ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಮಾರ್ಗದರ್ಶನದಲ್ಲಿ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ತನಿಖಾ ಕಾರ್ಯಶೈಲಿಯನ್ನು ಕೇಂದ್ರ ವಿಭಾಗದ ಐಜಿಪಿ ಚಂದ್ರಶೇಖರ್ ಪ್ರಶಂಸೆ ಮಾಡಿದ್ದಾರೆ.
ಮಹಿಳೆ ಸುಪಾರಿಗೆ ಬಲಿಯಾದನೇ ಜಗನ್ ಮೋಹನ್:
ಮಹಿಳೆಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವಾಗಿ ಕೊಲೆಯಾದ ಜಗನ್ ಹಾಗೂ ಮಹಿಳೆಗೂ ಈ ಹಿಂದೆ ಗಲಾಟೆ ನಡೆದಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಜಗನ್ ತಪ್ಪಿಸಿದ್ದ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಮುಳಬಾಗಿಲಿನ ಟೀಚರ್ಸ್ ಕಾಲೋನಿಯಲ್ಲಿ ನೆಲೆಸಿದ್ದ ಆ ಮಹಿಳೆ ಮನೆಗೆ ನುಗ್ಗಿ ಜಗನ್ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆ ದಿನ ನಿನ್ನನ್ನು ಮುಗಿಸಿ ತೀರುತ್ತೇನೆ ಎಂದು ಮಹಿಳೆ ಶಪಥ ಮಾಡಿದ್ದು, ಅದರಂತೆ ತನಗೆ ಪರಿಚಿತರಿಗೆ ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಪಾರಿ ಹಂತಕರು ಈ ಹಿಂದೆ ಬೆಟ್ಟಿಂಗ್ ಜೂಜು ಆಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಜಗನ್ ಮಾಹಿತಿ ನೀಡಿದ್ದ. ಇದರಿಂದ ಆರೋಪಿತರು ಕುಪಿತಗೊಂಡು ಕೊಲೆ ಬೆದರಿಕೆ ಹಾಕಿದ್ದರು. ಕೊಲೆ ಬೆದರಿಕೆ ಬಗ್ಗೆ ಜಗನ್ ದೂರು ಕೊಟ್ಟಿದ್ದರಿಂದ ಪೊಲೀಸರು ಪುನಃ ಮತ್ತೊಂದು ಕೇಸು ದಾಖಲಿಸಿ ಅರೋಪಿಗಳನ್ನು ಬಂಧಿಸಿದ್ದರು. ಹೀಗಾಗಿ ಜಗನ್ ಗೆ ಬುದ್ಧಿ ಕಲಿಸಲು ಯತ್ನಿಸಿದ್ದರು. ಈ ಬೆಟ್ಟಿಂಗ್ ಗ್ಯಾಂಗ್ ಮತ್ತು ಮಹಿಳೆ ಒಗ್ಗೂಡಿ ಸುಪಾರಿ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಅರೋಪಿಗಳ ಪತ್ತೆ ಮಾಡುವಲ್ಲಿ ಕೋಲಾರ ಪೊಲೀಸರು ಯಶಸ್ವಿ:
ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಬಲಗೈ ಬಂಟನಾಗಿದ್ದ ಜಗನ್ ಮೋಹನ್ ರೆಡ್ಡಿ ಕೊಲೆ ಹಿಂದೆ ನಾನಾ ಕಾರಣ ಕೇಳಿ ಬರುತ್ತಿದೆ. ಅಂತೂ ದೇವರಿಗೆ ಪ್ರಾಣಿ ಬಲಿ ಹರಕೆ ತೀರಿಸುವ ಮಾದರಿಯಲ್ಲಿ ಜಗನ್ ಮೊಹನ್ ರೆಡ್ಡಿಯನ್ನು ಕಿರಾತಕರು ಜೂ. 7 ರಂದು ಬೆಳಗ್ಗೆ ಕೊಲೆ ಮಾಡಿದ್ದರು. ರಾಜಕೀಯ ಸ್ವರೂಪ ಪಡೆದುಕೊಂಡಿದ್ದ ಈ ಕೊಲೆ ಪ್ರಕರಣ ಖಂಡಿಸಿ ಮುಳಬಾಗಿಲು ಪಟ್ಟಣದಲ್ಲಿ ಜಗನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಅರೋಪಿಗಳ ಎಡೆಮುರಿ ಕಟ್ಟುವಲ್ಲಿ ಕೋಲಾರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಜಗನ್ ಕೊಲೆ ಹಿಂದಿನ ರಹಸ್ಯ ಕೇಳಿ ಅಚ್ಚರಿಗೊಂಡಿದ್ದಾರೆ.
ಗಂಗಮ್ಮನಗುಡಿ ಬಳಿ ಹರಕೆ ಕುರಿ ತರ ಕೊಲೆ:
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಪ್ತ ಹಾಗೂ ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನನ್ನ ಲಾಂಗು ಮಚ್ಚಿನಿಂದ ದುಷ್ಕರ್ಮಿಗಳು ಜೂ. 7 ರಂದು ಬೆಳಗ್ಗೆ ಕೊಚ್ಚಿ ಕೊಲೆ ಮಾಡಿದ್ದರು. ನಗರದ ಮುತ್ಯಾಲಪೇಟೆಯ ಗಂಗಮ್ಮ ಗುಡಿ ದೇವಾಲಯದ ಬಳಿ ಈ ದುರ್ಘಟನೆ ನಡೆದಿತ್ತು. ಎರಡು ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದ. ದೇವಸ್ಥಾನದ ಗಂಟೆ ಬಾರಿಸಿ ಮನೆಯಲ್ಲಿದ್ದ ಜಗನ್ ಮೋಹನ್ ರೆಡ್ಡಿಯನ್ನ ಹೊರ ಕರೆಯಿಸಿಕೊಂಡು ಕಿಡಿಗೇಡಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಸಿಸಿಟಿವಿ ಸಂಗ್ರಹಿಸಿ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು.