ಡಿಕೆಶಿ ನೀಡಿದ ಆಫರ್, ಕೆ.ಎಚ್.ಮುನಿಯಪ್ಪ ರಾಜಕೀಯ ಭವಿಷ್ಯಕ್ಕೆ ದೊಡ್ಡ ಬ್ರೇಕ್?
ಸೋಲಿಲ್ಲದ ಸರದಾರ ಎನ್ನುವ ಪಟ್ಟ ಹಿರಿಯ ಕಾಂಗ್ರೆಸ್ ಮುಖಂಡ, CWC ಖಾಯಂ ಆಹ್ವಾನಿತ, ಕೆ.ಎಚ್.ಮುನಿಯಪ್ಪಗೆ ಕಳಚಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ. ಕ್ಷೇತ್ರಕ್ಕೆ ಅಷ್ಟೇನೂ ಚಿರಪರಿಚಿತನಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬಿಜೆಪಿ, ಯುದ್ದಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿತು ಎಂದು ಆರಂಭದಲ್ಲಿ ಹೇಳಲಾಗುತ್ತಿತ್ತು.
ಆದರೆ, ಆಗಿದ್ದು ಇನ್ನೊಂದು. ಹಿಂದುತ್ವ, ರಾಷ್ಟ್ರೀಯತೆ ವಿಚಾರ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುನ್ನಲೆಗೆ ಬಂದ ಹಿನ್ನಲೆಯಲ್ಲಿ, ಕೋಲಾರದಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಿದ್ದು, ಮುನಿಯಪ್ಪ, ಬಿಜೆಪಿಯ ಎಸ್.ಮುನಿಸ್ವಾಮಿಯ ವಿರುದ್ದ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಉಪಚುನಾವಣೆ: ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರನ್ನು ದೂರವಿಟ್ಟ ಡಿ.ಕೆ.ಶಿವಕುಮಾರ್
ಅಲ್ಲಿಗೆ, ಮುನಿಯಪ್ಪನವರ ಗೆಲುವಿನ ನಾಗಾಲೋಟಕ್ಕೆ ಕೋಲಾರದ ಮತದಾರ ಬ್ರೇಕ್ ಹಾಕಿದ್ದರು. ಅಲ್ಲಿಂದ, ರಾಜ್ಯ ರಾಜಕಾರಣವೋ, ದೆಹಲಿ ರಾಜಕಾರಣವೋ ಎನ್ನುವ ಗೊಂದಲದಲ್ಲೇ ಇದ್ದ, ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದಂತೆ ಪ್ರಯತ್ನಿಸಿದ್ದು ಗೊತ್ತಿರುವ ವಿಚಾರ.
ಬಣ ರಾಜಕೀಯ ನಮ್ಮಲ್ಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾ ಬರುತ್ತಿದ್ದರೂ, ಕೆ.ಎಚ್.ಮುನಿಯಪ್ಪ ಮಾತ್ರ ಕಟ್ಟಾ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಕೆಪಿಸಿಸಿ ಅಧ್ಯಕ್ಷರಾಗಿ, ಡಿ.ಕೆ.ಶಿವಕುಮಾರ್ ಆಯ್ಕೆಯಾದ ನಂತರ, ಕೆ.ಎಚ್.ಮುನಿಯಪ್ಪಗೆ ಒಂದೊಳ್ಳೆಯ ಆಫರ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕೂಸಿಗೆ ಮುನ್ನವೇ ಕುಲಾವಿ: ಸಿದ್ದರಾಮಯ್ಯ-ದೇವೇಗೌಡ್ರ ಮಹತ್ವಾಕಾಂಕ್ಷೆಯ ರಾಜಕೀಯ ನಡೆ
ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಬಣ
ಕೋಲಾರ ಕಾಂಗ್ರೆಸ್ ನಲ್ಲಿ ಎರಡು ಬಣಗಳಿವೆ. ಒಂದು ಶ್ರೀನಿವಾಸಪುರದ ಶಾಸಕ ಸಿದ್ದರಾಮಯ್ಯ ಆಪ್ತವಲಯದ ರಮೇಶ್ ಕುಮಾರ್ ಅವರದ್ದು, ಇನ್ನೊಂದು ಕೆ.ಎಚ್.ಮುನಿಯಪ್ಪ ಬಣ. ಇವರಿಬ್ಬರು, ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದಕ್ಕೆ ಹಲವು ನಿದರ್ಶನಗಳಿವೆ. ಒಂದು ಹಂತದಲ್ಲಿ ಮುನಿಯಪ್ಪ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂದು ಹೈಕಮಾಂಡ್ ಗೆ ರಮೇಶ್ ಕುಮಾರ್ ದೂರೂ ನೀಡಿದ್ದರು.
ಕೊತ್ತನೂರು ಮಂಜುನಾಥ್ ಉಮೇದುವಾರಿಕೆ ತಿರಸ್ಕೃತ
ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೊತ್ತನೂರು ಮಂಜುನಾಥ್ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿತ್ತು. ಅವರು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹಿನ್ನಡೆಯಾಗುತ್ತಿರುವುದರಿಂದ ಕೊತ್ತನೂರು, ಕೋಲಾರ ಕಡೆ ತಮ್ಮ ಚಿತ್ತವನ್ನು ಹರಿಸಿದ್ದರು.
ಮುನಿಯಪ್ಪ, ಹೊಸ ರಾಜಕೀಯ ಹೆಜ್ಜೆಯನ್ನು ಇಡಲಿದ್ದಾರೆ
ಇತ್ತ, ಮಾಜಿ ಸಂಸದ ಮುನಿಯಪ್ಪ, ಕೋಲಾರದಿಂದ ಮುಳಬಾಗಿಲು ಕಡೆಗೆ ತಮ್ಮ ನೆಲೆಯನ್ನು ಶಿಫ್ಟ್ ಮಾಡಲು ಹೊರಟಿದ್ದಾರೆ ಎನ್ನುವ ಬಲವಾದ ಸುದ್ದಿ ಹರಿದಾಡುತ್ತಿದೆ. ಅಧಿಕ ಮಾಸ ಮುಗಿದು ನವರಾತ್ರಿ ಆರಂಭವಾದ ಕೂಡಲೇ, ಐತಿಹಾಸಿಕ ಕುರುಡಮಲೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಮುನಿಯಪ್ಪ, ಹೊಸ ರಾಜಕೀಯ ಹೆಜ್ಜೆಯನ್ನು ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ, ಡಿಕೆಶಿ ನೀಡಿದ ಆಫರ್..
Recommended Video
ಮುಳಬಾಗಿಲು ಕ್ಷೇತ್ರದ ಮೂಲಕ ರಾಜ್ಯ ರಾಜಕಾರಣಕ್ಕೆ ಮುನಿಯಪ್ಪ
ಡಿ.ಕೆ.ಶಿವಕುಮಾರ್ ಸಲಹೆ ನೀಡಿರುವ ಹಿನ್ನಲೆಯಲ್ಲಿ ಮುಳಬಾಗಿಲು ಅಸೆಂಬ್ಲಿ ಕ್ಷೇತ್ರದ ಮೂಲಕ ರಾಜ್ಯ ರಾಜಕಾರಣಕ್ಕೆ ಬರಲು ಮುನಿಯಪ್ಪ ಸಿದ್ದತೆ ನಡೆಸಿದ್ದಾರೆ. ಆ ಮೂಲಕ, ಕೋಲಾರ ಭಾಗದಲ್ಲಿ ಕಾಂಗ್ರೆಸ್ ಅನ್ನು ಬಲ ಪಡಿಸುವುದು ಒಂದು ಕಡೆಯಾದರೆ, ಒಂದು ವೇಳೆ ಪಕ್ಷ ಮುಂದಿನ ದಿನದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಉಪಮುಖ್ಯಮಂತ್ರಿ ಸ್ಥಾನವೂ ಸಿಗಬಹುದು ಎನ್ನುವ ಮಾತನ್ನು ಡಿಕೆಶಿ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.