ಐಎಂಎ ಹಗರಣ; ಕೋಲಾರದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಹಣ ಪತ್ತೆ!
ಕೋಲಾರ, ಆಗಸ್ಟ್ 21 : ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಕೋಲಾರದಲ್ಲಿ ದಾಳಿ ನಡೆಸಿದ್ದಾರೆ. ಇಟ್ಟಿಗೆ ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಹಣ ವಶಕ್ಕೆ ಪಡೆಯಲಾಗಿದ್ದು ಒಬ್ಬರನ್ನು ಬಂಧಿಸಲಾಗಿದೆ.
ಐಎಂಎ ಸಂಸ್ಥೆಯ ಮುಖ್ಯಸ್ಥ ಮನ್ಸೂರ್ ಖಾನ್ ಆಪ್ತ ಖಮರುಲ್ಲಾ ಜಮಾಲ್ ಎಂಬುವವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ತನ್ನನ್ನು ನಾಟಿ ವೈದ್ಯ ಎಂದು ಹೇಳಿಕೊಳ್ಳುವ ಜಮಾಲ್, ಮಾಟ ಮಂತ್ರ ಮಾಡುವುದಾಗಿ ಜನರಿಗೆ ಭೀತಿ ಹುಟ್ಟಿಸಿದ್ದನು.
ಐಎಂಎ ಹಗರಣ ಸಿಬಿಐಗೆ: ರಾಜ್ಯ ಸರ್ಕಾರ ಮಾಹಿತಿ
ಕೋಲಾರ ಜಿಲ್ಲೆಯ ಮಾಲೂರಿನ ಬಳಿ ಖಮರುಲ್ಲಾ ಜಮಾಲ್ ಭೂಮಿ ತೆಗೆದುಕೊಂಡು ಸಿಮೆಂಟ್ ಇಟ್ಟಿಗೆ ತಯಾರು ಮಾಡುವ ಫ್ಯಾಕ್ಟರಿ ಮಾಡಿದ್ದನು. ಹೆಸರಿಗೆ ಮಾತ್ರ ಇದು ಫ್ಯಾಕ್ಟರಿ ಆಗಿತ್ತು. ಮನ್ಸೂರ್ ಖಾನ್ ಹಣವನ್ನು ಇಲ್ಲಿ ಬಚ್ಚಿಡುತ್ತಿದ್ದ ಎಂಬ ಮಾಹಿತಿ ಇದೆ.
ಐಎಂಎ ಹಗರಣದ ತನಿಖೆ ಎಸ್ಎಫ್ಒ ಹೆಗಲಿಗೆ?
ಫ್ಯಾಕ್ಟರಿಯನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಹಣ ಮತ್ತು ಚಿನ್ನಾಭರಣ ಸಿಕ್ಕಿದೆ. ಖಮರುಲ್ಲಾ ಜಮಾಲ್ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಣ ಮನ್ಸೂರ್ ಖಾನ್ಗೆ ಸೇರಿದ್ದೆ ಎಂಬುದು ತನಿಖೆ ಬಳಿಕ ತಿಳಿಯಲಿದೆ.
ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ಸಿಬಿಐಗೆ?
ಮನ್ಸೂರ್ ಖಾನ್ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಆಸ್ತಿ ಖರೀದಿ ಮಾಡಿದ್ದ. ಕೋಲಾರ ಮತ್ತು ಹಾಸನದಲ್ಲಿ ಆತನಿಗೆ ಸೇರಿದ ನಿವೇಶನಗಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಒಪ್ಪಿಸಿದ್ದರು.
ಬೆಂಗಳೂರಿನ ಶಾಂತಿನಗರದಲ್ಲಿರುವ ಕಟ್ಟಡವೊಂದರಲ್ಲಿ 300 ಚಿನ್ನದ ಬಿಸ್ಕತ್ಗಳನ್ನು ಮನ್ಸೂರ್ ಖಾನ್ ಇಟ್ಟಿರುವ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿದೆ. ಇದನ್ನು ವಶಕ್ಕೆ ಪಡೆದುಕೊಂಡು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಾಗಿ ಕರ್ನಾಟಕ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶವನ್ನು ಈ ವಾರದಲ್ಲಿ ಹೊರಡಿಸುವ ನಿರೀಕ್ಷೆ ಇದೆ.