'ಕೋಲಾರದಲ್ಲಿ ಮುನಿಯಪ್ಪ ಸೋಲುವುದು ಕುಮಾರಸ್ವಾಮಿಗೂ ತಿಳಿದಿತ್ತು'
ಕೋಲಾರ, ಸೆಪ್ಟೆಂಬರ್ 26: ಕೋಲಾರದ ಮಾಜಿ ಸಂಸದ ಕೆಎಚ್ ಮುನಿಯಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಉಪಚುನಾವಣೆ ಸಂಬಂಧ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಬಹಿರಂಗವಾಗಿದೆ. ಇಬ್ಬರೂ ನಾಯಕರು ಪರಸ್ಪರ ಏಕವಚನದಲ್ಲಿಯೇ ಬೈಯ್ದಾಡಿಕೊಂಡರು ಎಂದು ಖಾಸಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.
ಕಾಂಗ್ರೆಸ್ ನಾಯಕರ ಕಿತ್ತಾಟದ ಬೆನ್ನಲ್ಲೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಕೆಎಚ್ ಮುನಿಯಪ್ಪ ಅವರ ಸೋಲಿಗೆ ತಾವೇ ಕಾರಣ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ರಮೇಶ್ ಕುಮಾರ್ಗೆ ನಾಚಿಕೆ ಇಲ್ಲ: ಮಾಜಿ ಸಂಸದ ಮುನಿಯಪ್ಪ
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕೆಎಚ್ ಮುನಿಯಪ್ಪ ಅವರನ್ನು ಆಯ್ಕೆ ಮಾಡಿದ ಸಂದರ್ಭದಿಂದಲೂ ಶ್ರೀನಿವಾಸ ಗೌಡ ಅವರು ಮುನಿಯಪ್ಪ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಮುನಿಯಪ್ಪ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಅಂತಿಮವಾಗಿ ಮುನಿಯಪ್ಪ ಅವರು ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಸುಮಾರು 21 ಸಾವಿರ ಮತಗಳಿಂದ ಸೋಲಿಸಿದ್ದರು.
ಮುನಿಯಪ್ಪ ಸೋಲಿಗೆ ನಾನೇ ಕಾರಣ
ಗುರುವಾರ ಮಾತನಾಡಿದ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು, 'ಮುನಿಯಪ್ಪ ಸೋಲಿಗೆ ನಾನೇ ಕಾರಣ. ನಾನು ಅವರನ್ನು ಹದ್ದಾಗಿ ಕುಕ್ಕಿ ಸೋಲಿಸಿದ್ದೇನೆ. ಅವರ ಸೋಲಿಗಾಗಿ ಎಲ್ಲ ಊರುಗಳನ್ನೂ ಸುತ್ತಿ ಅವರ ವಿರುದ್ಧ ಪ್ರಚಾರ ಮಾಡಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಭೇಟಿ ಮಾಡಿ ಕೆಎಚ್ ಮುನಿಯಪ್ಪ ಮಾಡಿದ ಮನವಿ ಏನು?
ಎಚ್ ಡಿ ಕುಮಾರಸ್ವಾಮಿಗೂ ಗೊತ್ತಿತ್ತು
'ಮುನಿಯಪ್ಪ ಅವರನ್ನು ಸೋಲಿಸುವುದಾಗಿ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರ ಬಳಿಯೂ ಹೇಳಿದ್ದೆ. ಅವರು ಹಾಗೆಲ್ಲ ಮಾಡಬಾರದು ಎಂದಿದ್ದರು. ಆದರೆ ಕಾಂಗ್ರೆಸ್ನಲ್ಲಿದ್ದ ನನಗೆ ಟಿಕೆಟ್ ತಪ್ಪಿಸಿ ಸೋಲಾಗುವಂತೆ ಮುನಿಯಪ್ಪ ಮಾಡಿದ್ದರು. ಎರಡು ಸಲವೂ ನನ್ನ ಸೋಲಿಗೆ ಅವರೇ ಕಾರಣ. ಅದಕ್ಕೆ ತಕ್ಕ ಪಾಠ ಕಲಿಸುವುದಾಗಿ ನಾನು ಹೇಳಿಕೊಂಡು ಬಂದಿದ್ದೇನೆ. ಅವರನ್ನು ಸೋಲಿಸಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ' ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಶ್ರೀನಿವಾಸಗೌಡ ಹೇಳಿದ್ದಾರೆ.
'ಎರಡು ಸೋಲಿಗೆ ಮುನಿಯಪ್ಪ ಕಾರಣ'
ಕೆ. ಶ್ರೀನಿವಾಸಗೌಡ ಅವರು 2018ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 2013ರ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದರು. 2004ರಲ್ಲಿ ಅವರು ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆದ್ದಿದ್ದರು. ಇದಕ್ಕೂ ಮುನ್ನ ಎರಡು ಬಾರಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲಲು ಮತ್ತು ತಾವು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ಗೆ ತೆರಳಲು ಮತ್ತು ಅಲ್ಲಿ ಕೂಡ ಸೋಲು ಎದುರಿಸಲು ಮುನಿಯಪ್ಪ ಅವರೇ ಕಾರಣ ಎಂದು ಶ್ರೀನಿವಾಸ ಗೌಡ ದೂರಿದ್ದಾರೆ.
ಮುನಿಯಪ್ಪ ಜನರ ಮನಸ್ಸಿನಿಂದ ದೂರ
ಕಳೆದ ವಾರ ಕೂಡ ಶ್ರೀನಿವಾಸ ಗೌಡ ಅವರು ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಮುನಿಯಪ್ಪ ಅವರ ವಿಚಾರ ಈಗ ಮುಗಿದ ಅಧ್ಯಾಯ. ಅವರ ಬಗ್ಗೆ ಮಾತನಾಡುವುದು ವ್ಯರ್ಥ. ಈಗಾಗಲೇ ಚುನಾವಣೆಯಲ್ಲಿ ಸೋತಿರುವ ಅವರು ಜನರ ಮನಸ್ಸಿನಿಂದ ಸಾಕಷ್ಟು ದೂರವಾಗಿದ್ದಾರೆ. ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಕೋಲಾರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ತಾಲ್ಲೂಕುಗಳಲ್ಲಿ ಸ್ವಲ್ಪವಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ತೋರಿಸಲಿ' ಎಂದು ವ್ಯಂಗ್ಯವಾಡಿದ್ದರು.