ಕೋಲಾರ-ಬೆಂಗಳೂರು ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ
ಕೋಲಾರ, ಆಗಸ್ಟ್ 24; ಕೋಲಾರ ಜಿಲ್ಲೆಯ ಮುಳಬಾಗಿಲು ಮತ್ತು ಬೆಂಗಳೂರು ನಡುವಿನ ಪ್ರಯಾಣ ದುಬಾರಿಯಾಗಲಿದೆ. ಹೊಸಕೋಟೆ ಮತ್ತು ಮುಳಬಾಗಿಲು ಟೋಲ್ಗಳಲ್ಲಿನ ಶುಲ್ಕ ಸೆಪ್ಟೆಂಬರ್ 1 ರಿಂದ 5 ರಿಂದ 10 ರೂ. ತನಕ ಏರಿಕೆಯಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೆದ್ದಾರಿಗಳ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಸೆಪ್ಟೆಂಬರ್ 1ರಿಂದ ಎಲ್ಲಾ ಟೋಲ್ಗಳಲ್ಲಿ ಶುಲ್ಕಗಳು ಏರಿಕೆಯಾಗಲಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ವಾಹನ ಸವಾರರು ಹೆಚ್ಚು ಶುಲ್ಕ ಪಾವತಿಸಬೇಕಿದೆ.
ಸೆ. 1ರಿಂದ ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ
ಮುಳಬಾಗಿಲು ಟೋಲ್ ಪ್ಲಾಜಾದಲ್ಲಿ ಏಕಮುಖ ಸಂಚಾರಕ್ಕೆ ಕಾರು 75 ರೂ., ದ್ವಿಮುಖ ಸಂಚಾರಕ್ಕೆ 110 ರೂ. ಪಾವತಿ ಮಾಡಬೇಕು. ಮಾಸಿಕ ಪಾಸು ಶುಲ್ಕ ಸಹ 65 ರೂ. ಏರಿಕೆಯಾಗಲಿದೆ. ಲಘು ವಾಣಿಜ್ಯ ವಾಹನಗಳು ಮತ್ತು ಮಿನಿ ಬಸ್ 5 ರಿಂದ 10 ರೂ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಮಾಸಿಕ ಪಾಸುಗಳ ಶುಲ್ಕ ಸಹ 110 ರೂ. ಏರಿಕೆಯಾಗಿದೆ.
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ
ಕೋವಿಡ್ ಪರಿಸ್ಥಿತಿ ಬಳಿಕ ಮುಳಬಾಗಿಲು ಟೋಲ್ ಮೂಲಕ ಸಂಚಾರ ನಡೆಸುವ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಟೋಲ್ ಶುಲ್ಕ ಹೆಚ್ಚಿಸಲು ಹಿಂದೆಯೇ ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ 1ರಿಂದ ನೂತನ ದರ ಜಾರಿಗೆ ಬರಲಿದೆ.
ಉಡುಪಿ; ಟೋಲ್ ಕಂಪನಿಗೆ ಸೆಡ್ಡು, ಉಚಿತ ರಸ್ತೆ ನಿರ್ಮಾಣ!
ಇನ್ನು ಹೊಸಕೋಟೆ ಟೋಲ್ ಪ್ಲಾಜಾದಲ್ಲಿ ಕಾರು ಮತ್ತು ಬಸ್ಗಳಿಗೆ ಏಕಮುಖ ಸಂಚಾರಕ್ಕೆ ದರಗಳನ್ನು ಏರಿಕೆ ಮಾಡಿಲ್ಲ. ಆದರೆ ದ್ವಿಮುಖ ಸಂಚಾರ ನಡೆಸುವಾಗ 5 ರೂ. ಹೆಚ್ಚು ಪಾವತಿಸಬೇಕು. ಮಾಸಿಕ ಪಾಸು ದರ 560 ರೂ. ಆಗಲಿದೆ.
ಲಘು ವಾಣಿಜ್ಯ ವಾಹನಗಳು, ಮಿನಿ ಬಸ್ಗಳ ಏಕಮುಖ ಸಂಚಾರ ಶುಲ್ಕ 5 ರೂ. ಹೆಚ್ಚಾಗಲಿದೆ. ಬಸ್ ಪಾಸುಗಳ ದರಗಳು 25 ರೂ. ಏರಿಕೆಯಾಗಲಿದೆ. ನೂತನ ದರಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿವೆ.
ಸಾವಿರಾರು ಜನರು ಬೆಂಗಳೂರು ನಗರಕ್ಕೆ ಬರಲು ಈ ಟೋಲ್ಗಳ ಮೂಲಕವೇ ಆಗಮಿಸಬೇಕು. ಅಲ್ಲದೇ ಕೆ. ಆರ್. ಮಾರುಕಟ್ಟೆಗೆ ರೈತರು ಹಣ್ಣು, ಹೂ, ತರಕಾರಿಗಳನ್ನು ತರುತ್ತಾರೆ. ಟೋಲ್ ಶುಲ್ಕ ಅವರಿಗೆ ಹೊರೆಯಾಗಲಿದೆ.
ಹಾಸನ-ಬೆಂಗಳೂರು ಟೋಲ್ ಶುಲ್ಕವೂ ಹೆಚ್ಚಳ; ಬೆಂಗಳೂರು-ಹಾಸನ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿಯೂ ಟೋಲ್ ಶುಲ್ಕ ಸೆಪ್ಟೆಂಬರ್ 1ರಿಂದ ಏರಿಕೆಯಾಗಲಿದೆ. ಬೆಂಗಳೂರು-ತುಮಕೂರು-ಹಾಸನ-ಶಿವಮೊಗ್ಗ ನಡುವೆ ಸಂಚಾರ ನಡೆಸುವವರು ನೆಲಮಂಗಲ ಮತ್ತು ಬೆಳ್ಳೂರು ಕ್ರಾಸ್ಗಳಲ್ಲಿ ಟೋಲ್ ಕಟ್ಟಬೇಕು.
ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಕಾರುಗಳು ದ್ವಿಮುಖ ಸಂಚಾರಕ್ಕೆ 70 ರೂ. ಪಾವತಿಸಬೇಕು. ಏಕ ಮುಖ ಸಂಚಾರಕ್ಕೆ ದರ ಬದಲಾವಣೆ ಮಾಡಿಲ್ಲ. ಮೊದಲಿನಂತೆ 45 ರೂ. ಪಾವತಿ ಮಾಡಬೇಕಾಗುತ್ತದೆ. ಮಾಸಿಕ ಪಾಸುಗಳ ಶುಲ್ಕವನ್ನು 40 ರೂ. ಹೆಚ್ಚಳ ಮಾಡಲಾಗಿದೆ.
ಏಕಮುಖ ಸಂಚಾರಕ್ಕೆ ಬಸ್ 5, ಟ್ರಕ್ಗಳು 10 ರೂ. ಹೆಚ್ಚು ಪಾವತಿಸಬೇಕು. ಮಾಸಿಕ ಪಾಸುಗಳ ದರವನ್ನು 140 ರೂ. ಏರಿಕೆ ಮಾಡಲಾಗಿದೆ. ಲಘು ವಾಣಿಜ್ಯ ವಾಹನಗಳ ಪಾಸುಗಳ ದರವನ್ನು 75 ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ತರಕಾರಿ ಸಾಗಾಟ ಮಾಡುವ ರೈತರಿಗೆ ಹೊರೆಯಾಗಲಿದೆ.
Recommended Video
ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಟೋಲ್ ಶುಲ್ಕ ಹೆಚ್ಚಳಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕೋವಿಡ್ನಿಂದ ಜನರ ಬದುಕು ತತ್ತರಿಸಿದೆ. ಸರ್ಕಾರ ಹೆದ್ದಾರಿ ಶುಲ್ಕ ಪರಿಷ್ಕರಣೆ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ಇನ್ನೂ ಎರಡು ವರ್ಷ ಶುಲ್ಕ ಹೆಚ್ಚಿಸಬಾರದು" ಎಂದು ಆಗ್ರಹಿಸಿದ್ದಾರೆ.