ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ಸು ಕೊಟ್ಟಿದ್ದಕ್ಕೆ ಸಚಿವ ಸುಧಾಕರ್ ಹೇಳಿದ್ದೇನು?
ಕೋಲಾರ, ಜನವರಿ 25: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇರಬೇಕು. ಕೋವಿಡ್ ಕಂಟ್ರೋಲ್ ಹಾಗೂ ಲಸಿಕೆ ವಿಚಾರವಾಗಿ ಒಬ್ಬರ ಬಳಿಯೇ ಎರಡು ಇಲಾಖೆ ಇರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ಸು ಕೊಟ್ಟಿರುವ ವಿಚಾರವಾಗಿ ಕೋಲಾರದಲ್ಲಿ ಮಾತನಾಡಿದ ಸಚಿವ ಸುಧಾಕರ್, 7 ಜನರಿಗೆ ಖಾತೆ ಕೊಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಎಂ ಹಂಚಿಕೆ ಮಾಡಿದ್ದರು. ಈಗ ಮತ್ತೆ ವಾಪಸ್ಸು ಕೊಟ್ಟಿರುವುದಕ್ಕೆ ಸಿಎಂ ಅವರಿಗೆ ಅಭಿನಂದನೆ ತಿಳಿಸಿದರು.
ಬಿಜೆಪಿಗೆ ದುಬಾರಿಯಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಋಣ ಸಂದಾಯ!
ನಾವ್ಯಾರು ಒತ್ತಡ ತಂದು ಸ್ಥಾನ ಪಡೆದುಕೊಂಡಿಲ್ಲ. ಸಿಎಂ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯಾರಿಗೆ ಯಾವ ಖಾತೆ ಕೊಡಬೇಕು ಅನ್ನುವುದು ಸಿಎಂ ಯಡಿಯೂರಪ್ಪ ಅವರಿಗೆ ಗೊತ್ತಿದೆ ಎಂದರು.
ಸಚಿವ ಮಾಧುಸ್ವಾಮಿ ಜೊತೆ ಸಿಎಂ ಮಾತನಾಡಿದ್ದಾರೆ. ಅವರ ಜೊತೆ ಚರ್ಚಿಸಿ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆನಂದ್ ಸಿಂಗ್ ಜೊತೆಯೂ ಚರ್ಚಿಸಿ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಹೊರಗೆ ತೆಗೆಯುತ್ತೇನಿ ಎಂದು ಮಾಧುಸ್ವಾಮಿ ಹೇಳಿರುವುದಿಲ್ಲ. ಆ ರೀತಿ ಅವರು ಹೇಳುವವರಲ್ಲ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಅಸಮಾಧಾನ ಇಲ್ಲ ಎಂದು ತಿಳಿಸಿದರು.
ಕೋಲಾರ ಜಿಲ್ಲೆಗೆ ಇಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿದ್ದು, ರೈತರ ಜೊತೆ ತುರ್ತು ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ರೈತರ ಕುಂದುಕೊರತೆ ಆಲಿಸಲು ಸಭೆ ಕರೆದಿದ್ದು, ಸಭೆಯಲ್ಲಿ ನೂರಾರು ಜನ ರೈತರು ಭಾಗಿಯಾಗಿದ್ದರು. ಸಚಿವರು ತಡವಾಗಿ ಬಂದಿದಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರು ಗದ್ದಲ ಮಾಡಿದರು.
ನಮ್ಮನ್ನು ಸಭೆಗೆ ಕರೆದು ಟೈಂ ಪಾಸ್ ಮಾಡುತ್ತಾ ಇದ್ದೀರಾ. ನಮಗೇನು ಮಾಡುವುದಕ್ಕೆ ಕೆಲಸ ಇಲ್ಲವಾ ಎಂದು ಗಲಾಟೆ ಮಾಡಿ, ಸಭೆಯಿಂದ ಹೊರ ಹೋಗುವುದಕ್ಕೆ ಸಿದ್ಧರಾಗಿದ್ದರು.
ಈ ವೇಳೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ತಕ್ಷಣ ರೈತ ಮುಖಂಡರ ಮನವೊಲಿಸುವ ಪ್ರಯತ್ನ ಮಾಡಿದರು. ನಂತರ ಎಸ್ಪಿ ಮನವಿಗೆ ಸ್ಪಂದಿಸಿ ರೈತರು ಸಭೆಯಲ್ಲಿ ಕುಳಿತುಕೊಂಡರು.
Recommended Video
ವಿಷಯ ತಿಳಿದು ತಕ್ಷಣ ಸಭೆಗೆ ಹಾಜರಾದ ಸಚಿವ ಸುಧಾಕರ್, ಕೃಷಿ ಕಾಯ್ದೆಗಳು ನಿಮ್ಮ ಪರವಾಗಿದೆ. ಯಾರೂ ಪ್ರತಿಭಟನೆ ಮಾಡಬೇಡಿ. ನರೇಂದ್ರ ಮೋದಿ ರೈತರ ಆದಾಯ ಹೆಚ್ಚಳ ಮಾಡುವ ಉದ್ದೇಶದಲ್ಲಿದ್ದಾರೆ. ಟ್ರಾಕ್ಟರ್ ಗಳಲ್ಲಿ ಬಂದು ಪ್ರತಿಭಟನೆ ಮಾಡಬೇಡಿ. ನಿಮಗೆ ಪ್ರತಿಭಟನೆ ಮಾಡುವ ಅಧಿಕಾರವಿದೆ. ಇದಕ್ಕಾಗಿ ಫ್ರೀಡಂ ಪಾರ್ಕ್ ನಲ್ಲಿ ವ್ಯವಸ್ಥೆ ಮಾಡಿದ್ದೇವೆ. ಟ್ರಾಕ್ಟರ್ ಗಳಲ್ಲಿ ಬಂದರೆ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದರು.