"ಬಯಾಲಜಿ ಪುಸ್ತಕ ಕೊಡಿಸುತ್ತೇನೆ, ಡಿ.ಕೆ ಸುರೇಶ್ ರಕ್ತಕಣಗಳ ಬಗ್ಗೆ ತಿಳಿದುಕೊಳ್ಳಲಿ''
ಕೋಲಾರ, ಅಕ್ಟೋಬರ್ 29: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಅವರ ಕೇಸರಿ ರಕ್ತ ಹೇಳಿಕೆ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದು, ನಮ್ಮ ದೇಹದಲ್ಲಿರುವುದು ಕೆಂಪು ಹಾಗೂ ಬಿಳಿ ರಕ್ತ ಕಣಗಳು ಎಂದಿದ್ದಾರೆ.
ಕೋಲಾರ ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಸಂಸದ ಡಿ.ಕೆ.ಸುರೇಶ್ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ. ನನಗೆ ಗೊತ್ತಿರುವುದು ಬಿಳಿ ಹಾಗೂ ಕೆಂಪು ರಕ್ತ ಕಣ ಅಷ್ಟೆ. ಕೇಸರಿ ರಕ್ತ ಕಣ ಇರುವುದು ನನಗೆ ಗೊತ್ತಿಲ್ಲ ಎಂದರು.
ಶಿರಾ, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ, ಸಿದ್ದರಾಮಯ್ಯ ಪ್ರಯತ್ನ?
ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ವಿಷಯಾಧಾರಿತ ಚರ್ಚೆ ಬಿಟ್ಟು, ಅವರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ನಾನು ವೈಯಕ್ತಿಕ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ಇನ್ನು ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. 6 ಸ್ಥಾನಗಳು ಖಾಲಿ ಇರುವುದುರಿಂದ ಆದಷ್ಟು ಶೀಘ್ರವಾಗಿ ಆಗುತ್ತದೆ ಎಂದು ತಿಳಿಸಿದರು.
ಕಾರ್, ಬೈಕ್ ನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯವಾಗಿ ಧರಿಸುವ ನಿಯಮವನ್ನು ತಜ್ಞರ ಸಲಹೆಯಂತೆ ಜಾರಿಗೆ ತರಲಾಗಿದೆ. ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಕಡ್ಡಾಯವಲ್ಲ, ಆದರೆ ಬೈಕ್ ನಲ್ಲಿ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು, ಇದು ತಜ್ಞರ ಅಭಿಪ್ರಾಯವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ಕೊರೊನಾ ವಾರಿಯರ್ಸ್ ಸುಮಾರು 8 ಗಂಟೆಗಳ ಕಾಲ ಪಿಪಿಇ ಕಿಟ್ ಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ನಾವು ಮಾಸ್ಕ್ ಹಾಕುವುದರಲ್ಲಿ ತಪ್ಪಿಲ್ಲ, ಜನರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸವುದನ್ನು ಸರ್ಕಾರ ಕಡ್ಡಾಯ ಮಾಡಿದೆ ಎಂದು ಸ್ಪಷ್ಟಪಡಿಸಿದರು.