ದೇವೇಗೌಡರು ಗರಂ; ಜೆಡಿಎಸ್ ಶಾಸಕ ಪಕ್ಷದಿಂದ ಉಚ್ಛಾಟನೆ?
ಕೋಲಾರ, ಸೆಪ್ಟೆಂಬರ್ 07; ತಮ್ಮದೇ ಪಕ್ಷದ ಶಾಸಕನ ವಿರುದ್ಧ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಗರಂ ಆಗಿದ್ದಾರೆ. ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಪಕ್ಷದಿಂದ ಉಚ್ಛಾಟನೆಗೊಳ್ಳಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್. ಡಿ. ದೇವೇಗೌಡ, "ಕಾಂಗ್ರೆಸ್ ಮುಖಂಡರ ಜೊತೆ ಸೇರಿಕೊಂಡು ಜೆಡಿಎಸ್ ಪಕ್ಷಕ್ಕೆ ಹಾನಿಯಾಗುವ ರೀತಿ ಮಾತನಾಡುತ್ತಿರುವ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ" ಎಂದರು.
ಜೆಡಿಎಸ್ ತೊರೆಯುವುದಾಗಿ ಘೋಷಣೆ ಮಾಡಿದ ವಿಧಾನ ಪರಿಷತ್ ಸದಸ್ಯ!
"ಕೋಲಾರ ಶಾಸಕರ ವಿಚಾರದಲ್ಲಿ ಇನ್ನು ಸಹಿಸುವುದು ಸಾಧ್ಯವಿಲ್ಲ. ನೇರವಾಗಿ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಚಿಸಿದ್ದೇನೆ" ಎಂದು ದೇವೇಗೌಡರು ಹೇಳಿದರು.
Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ
ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಈಗಾಗಲೇ ಜೆಡಿಎಸ್ ತೊರೆಯುವ ಆಲೋಚನೆಯಲ್ಲಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಅವರು ಉಚ್ಛಾಟನೆಗೊಳ್ಳಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.
ಬಾಗೇಪಲ್ಲಿ; 2023ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ಘೋಷಣೆ!
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ
ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆ. ಶ್ರೀನಿವಾಸ ಗೌಡ, "ಕೋಲಾರ ಜಿಲ್ಲೆಗೆ ಕೆ. ಸಿ. ವ್ಯಾಲಿ ನೀರು ತಂದು ರಮೇಶ್ ಕುಮಾರ್ ಎಂದೂ ಮರೆಯಲಾರದಂತಹ ಕೆಲಸ ಮಾಡಿದ್ದಾರೆ. ಆದರೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅದನ್ನು ಕೊಳಚೆ ನೀರು ಎಂದು ಹೇಳಿರುವುದು ಸರಿಯಲ್ಲ. ಬರಡು ಭೂಮಿ ಎನಿಸಿಕೊಂಡಿರುವ ಕೋಲಾರಕ್ಕೆ ಕೆ. ಸಿ. ವ್ಯಾಲಿ ನೀರು ಬಹಳ ಪ್ರಾಮುಖ್ಯವಾಗಿದೆ" ಎಂದು ಹೇಳಿದ್ದರು.
ನಾನೂ ಕೂಡಾ ನೀರು ಕುಡಿದಿದ್ದೇನೆ
"ಕೆ. ಸಿ. ವ್ಯಾಲಿ ಯೋಜನೆ ನೀರು ರೈತರಿಗೆ ಅನಿವಾರ್ಯವಾಗಿದೆ. ಯೋಜನೆ ನೀರನ್ನು ನಾನು ಸಹ ಕುಡಿದಿದ್ದೇನೆ. ನಾನೇನು ಸತ್ತು ಹೋಗಿದ್ದೇನೆಯೇ?. ಕುಮಾರಸ್ವಾಮಿ ನೀರನ್ನು ಕೊಳಚೆ ಎಂದು ಬಣ್ಣಿಸಿದ್ದಾರೆ. ಇದು ಸರಿಯಲ್ಲ, ಈ ರೀತಿ ಮಾತನಾಡಬಾರದಿತ್ತು. ನನ್ನ ಮುಂದೆಯೇ ಈ ಮಾತನ್ನು ಹೇಳಿದ್ದು, ನನಗೆ ಅದನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ನಮಗೆ ಆ ನೀರು ಬೇಕಾಗಿತ್ತು. ನಾವು ರೈತರಾಗಿದ್ದು, ನೀರು ಅನಿವಾರ್ಯವಾಗಿತ್ತು. ನಾನು ಜೆಡಿಎಸ್ನಲ್ಲಿದ್ದೇನೆ. ಆದರೆ ಕುಮಾರಸ್ವಾಮಿ ಮಾತು ಸಹಿಸಿಕೊಳ್ಳೋಕೆ ಆಗಲಿಲ್ಲ" ಎಂದು ಕೆ. ಶ್ರೀನಿವಾಸ ಗೌಡ ಹೇಳಿದ್ದರು.
ನನಗೆ ಕಾಂಗ್ರೆಸ್ ಹೊಸದಲ್ಲ
ಕೆ. ಶ್ರೀನಿವಾಸ ಗೌಡ, "ಕುಮಾರಸ್ವಾಮಿ ಮಾತನಾಡಿದ್ದು ತಪ್ಪು. ನನಗೆ ಕಾಂಗ್ರೆಸ್ ಹೊಸತಲ್ಲ. ನಾಲ್ಕು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ನಾಲ್ಕು ಪಕ್ಷಗಳಲ್ಲಿ ಗೆದ್ದಿದ್ದೇನೆ. ದೇವೇಗೌಡರ ಕಾಲದಲ್ಲಿ ಜನತಾದಳದಿಂದ ಆಯ್ಕೆಯಾದೆ. ನಂತರ ನಾನೂ ಬೈರೇಗೌಡರು ಜೆಡಿಯು, ನಂತರ ಕಾಂಗ್ರೆಸ್ನಲ್ಲಿ ಮಂತ್ರಿಯಾದೆ. ನಾನು ಕೂಡಾ ಕಾಂಗ್ರೆಸ್ನಲ್ಲಿದ್ದವನು. ಕಳೆದ ಬಾರಿಯೇ ಕಾಂಗ್ರೆಸ್ ಟಿಕೆಟ್ ಸಿಗಬೇಕಿತ್ತು. ಇಲ್ಲಿನ ಮಹಾನುಭಾವನೊಬ್ಬ ಅದಕ್ಕೆ ಅಡ್ಡಿ ಮಾಡಿದ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಸಿಬಿಟ್ಟ" ಎಂದು ಹೇಳಿದ್ದರು.
ಜಿ. ಟಿ. ದೇವೇಗೌಡ ವಿರುದ್ಧ ಕ್ರಮವಿಲ್ಲ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಸಹ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಎಚ್. ಡಿ. ದೇವೇಗೌಡರು, "ಜಿ. ಟಿ. ದೇವೇಗೌಡರು ಸಹ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ತಮಗೆ ಮತ್ತು ಮಗನಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಬಳಿ ಕೇಳಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಅವರು ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಎಲ್ಲಿಯೂ ಮಾತನಾಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾಪವಿಲ್ಲ" ಎಂದು ಹೇಳಿದರು.
Recommended Video