ಗ್ರಾ.ಪಂ ಚುನಾವಣೆ ದ್ವೇಷ: ಹಿಪ್ಪುನೇರಳೆಗೆ ರಾತ್ರೋರಾತ್ರಿ ವಿಷ ಹಾಕಿದ ಕಿಡಿಗೇಡಿಗಳು
ಕೋಲಾರ, ಜನವರಿ 22: ಗ್ರಾಮ ಪಂಚಾಯತಿ ಚುನಾವಣೆಯ ದ್ವೇಷದ ಕಿಚ್ಚು ಇನ್ನು ಆರಿಲ್ಲವೆಂಬಂತೆ ಕಾಣುತ್ತದೆ. ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕೆಲ ಕಿಡಿಗೇಡಿಗಳು ಹಿಪ್ಪುನೇರಳೆಗೆ ರಾತ್ರೋರಾತ್ರಿ ವಿಷ ಹಾಕಿದ್ದಾರೆ. ರೈತ ಬೆಳೆದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಿಪ್ಪುನೇರಳೆ ತಿಪ್ಪೆಗೆ ಸೇರಿರುವ ಘಟನೆ ಕೋಲಾರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಿಪ್ಪೇನಹಳ್ಳಿ ಗ್ರಾಮದಲ್ಲಿ ರೇಷ್ಮೆ ಅಧಿಕಾರಿಗಳು ವಿಷಪೂರಿತ ಹಿಪ್ಪು ನೇರಳೆ ಸೋಪುನ್ನು ತಿಂದು ನರಳಾಡುತ್ತಿರುವ ರೇಷ್ಮೆ ಹುಳುಗಳು ಹಾಗೂ ಹಿಪ್ಪು ನೇರಳೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೋಲಾರ: ಕಸ ವಿಲೇವಾರಿ ನಿರ್ಲಕ್ಷ್ಯ; ನಾಲ್ವರ ತಲೆದಂಡ
ಗ್ರಾಮ ಪಂಚಾಯತಿ ಚುನಾವಣೆಗಳು ಮುಗಿದು 20 ದಿನ ಕಳೆದರೂ ಸಹ ಕೋಲಾರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಸೇಡಿನ ಕಿಚ್ಚು ಮಾತ್ರ ಕಡಿಮೆಯಾಗಿಲ್ಲ. ಗುರುವಾರ ರಾತ್ರಿ ಕೆಲ ಕೀಡಿಗೇಡಿಗಳು ಗ್ರಾಮದಲ್ಲಿನ ಕೆಲ ಹಿಪ್ಪು ನೇರಳೆ ತೋಟಗಳಿಗೆ ವಿಷವನ್ನು ಹಾಕಿ ವಿಕೃತಿಯನ್ನು ಮೆರೆದಿದ್ದಾರೆ.
ಗ್ರಾಮದ ಸೀತಾರಾಮ, ಮಂಜುನಾಥ್, ಶಿವಾನಂದ, ರಮೇಶ್, ನಾಗರಾಜ್, ನಾರಾಯಣಸ್ವಾಮಿ ಮತ್ತು ಎಂ.ರಮೇಶ್ ಅವರ ರೇಷ್ಮೆ ತೋಟಗಳಿಗೆ ವಿಷವನ್ನು ಸಿಂಪಡಿಸಿರುವ ಪರಿಣಾಮ ನಾಲ್ಕನೇ ಜ್ವರಕ್ಕೆ ಬಂದ ರೇಷ್ಮೆ ಹುಳುಗಳು ವಿಷಪೂರಿತ ಹಿಪ್ಪುನೇರಳೆ ಸೋಪುನ್ನು ತಿಂದು ನರಳಾಡಿ ಸಾವನ್ನಪ್ಪಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ರೇಷ್ಮೆ ಅಧಕಾರಿಗಳು ಸ್ಥಳಕ್ಕೆ ಆಗಮಿಸಿ ಹಿಪ್ಪು ನೇರಳೆ ತೋಟ ಮತ್ತು ರೇಷ್ಮೆ ಹುಳುವಿನ ಮನೆಯನ್ನು ಪರಿಶೀಲಿಸಿದ್ದಾರೆ.
ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯೇ ಇದಕ್ಕೆ ಕಾರಣ, ಚುನಾವಣೆಯಲ್ಲಿ ಕೆಲ ವ್ಯಕ್ತಿಗಳನ್ನು ಬೆಂಬಲಿಸಿಲ್ಲವೆಂದು ಹಿಪ್ಪುನೇರಳೆ ತೋಟಗಳಿಗೆ ರಾತ್ರೋರಾತ್ರಿ ವಿಷ ಹಾಕಿದ್ದು, ಇದರಿಂದ ಸುಮಾರು ೪ ರಿಂದ ೫ ಲಕ್ಷ ರೂ.ಗಳು ನಷ್ಟವುಂಟಾಗಿದೆ. ಇನ್ನು ಇಂತಹ ಕೃತ್ಯ ಹೊಸದೇನು ಅಲ್ಲವೆಂದು ಗ್ರಾಮಸ್ಥರು ಹೇಳುತ್ತಾರೆ.
ಕಳೆದ ಹಲವು ವರ್ಷಗಳ ಹಿಂದೆ ಇದೇ ರೀತಿ ಟೊಮ್ಯಾಟೊ ಬೆಳೆಗೂ ವಿಷವನ್ನು ಹಾಕಲಾಗಿತ್ತು. ಆ ಸಂದರ್ಭದಲ್ಲಿ ನಾವು ಊರಿನ ಮಾನ ಕಾಪಾಡಲು ದೂರು ನೀಡಿರಲಿಲ್ಲ, ಆದರೆ ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತಿರುವುದರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಪರಿಹಾರ ರೂಪದಲ್ಲಿ ನೀಡಬೇಕು ಮತ್ತು ವಿಷ ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Recommended Video
ಒಟ್ಟಾರೆಯಾಗಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಹಾಗೆ ಯಾರೂ ಮಾಡಿದ ತಪ್ಪಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವಂತಹ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುಗಳು ತಿಪ್ಪೆಗೆ ಸುರಿಯಲಾಗಿದ್ದು, ತಪ್ಪಿತಸ್ಥರ ಯಾರೇ ಆಗಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ.