ಮಂತ್ರಿಯಾಗುತ್ತಿದ್ದಂತೆ ಆರ್.ಶಂಕರ್ ಅವರಿಂದ ಟೆಂಪಲ್ ರನ್
ಕೋಲಾರ, ಜನವರಿ 14: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮತ್ತೆ ಮಂತ್ರಿ ಸ್ಥಾನ ಪಡೆದುಕೊಂಡಿರುವ ಆರ್.ಶಂಕರ್ ಅವರು ಬುಧವಾರದಂದು ಕೋಲಾರದ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ ಕುಟುಂಬ ಸಮೇತ ಬಂದು ಹರಕೆ ತೀರಿಸಿದರು.
ಮಂತ್ರಿ ಸ್ಥಾನಕ್ಕಾಗಿ ಹರಕೆ ಕಟ್ಟಿಕೊಂಡಿದ್ದ ಸಚಿವ ಆರ್.ಶಂಕರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕೋಲಾರದ ಕುರುಡುಮಲೆ ಗಣೇಶನಿಗೆ ಹರಕೆ ತೀರಿಸಿದರು.
ಉಪ ಮೇಯರ್ ಆಗಿದ್ದ ಆರ್. ಶಂಕರ್ ಎರಡನೇ ಬಾರಿ ಸಚಿವರಾಗಿ ಪ್ರಮಾಣವಚನ!
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಶಂಕರ್, ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದಿದ್ದೇನೆ. ಭಗವಂತನ ಆಶೀರ್ವಾದದಿಂದ ಒಳ್ಳೆಯ ಖಾತೆ ಸಿಗಲಿದೆ. ನಾನು ಯಾವ ಖಾತೆಯನ್ನು ಸಿಎಂ ಬಳಿ ಕೇಳಿಲ್ಲ ಎಂದರು.
ಮಂತ್ರಿ ಸ್ಥಾನ ತಡವಾಗಿ ಸಿಕ್ಕಿರುವುದು ಸತ್ಯ, ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮೂರನೇ ಬಾರಿ ಮಂತ್ರಿ ಆಗುವ ಅವಕಾಶವನ್ನು ರಾಣೇಬೆನ್ನೂರು ತಾಲೂಕಿನ ಜನತೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪನವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬಂದಿದ್ದೇವೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ, ಎಲ್ಲರನ್ನೂ ನಿಭಾಯಿಸುವ ಶಕ್ತಿ ಅವರಿಗಿದೆ. ಎಚ್.ನಾಗೇಶ್ ಗೆ ನಿಗಮ ಮಂಡಳಿ ನೀಡಿರುವುದು ಸಮಾಧಾನ ತಂದಿದೆ. ಸಂಪುಟ ಪುನರ್ ರಚನೆ ಆದರೆ ನಾಗೇಶ್ ಗೆ ಮುಂದೆ ಅವಕಾಶ ಸಿಗಬಹುದು ಎಂದು ತಿಳಿಸಿದರು.
ಆರ್.ಶಂಕರ್ ಅವರು ಹಾವೇರಿ ಜಿಲ್ಲೆ ರಾಣೇಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದರು. ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ಅವರು ಇತರ ೧೬ ಶಾಸಕರೊಂದಿಗೆ ಮುಂಬೈಗೆ ತೆರಳಿ ಸಮ್ಮಿಶ್ರ ಸರ್ಕಾರ ಬೀಳುವಂತೆ ಮಾಡಿದ್ದರು. ಅವರನ್ನು ಈಗ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು, ಬುಧವಾರ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.